ಗಂಗಾ ನದಿಯಲ್ಲಿ ಮತ್ತೆ ಮೃತದೇಹ ತೇಲಿಬರುವ ಸಾಧ್ಯತೆ!
ಲಕ್ನೊ, ಮೇ 19: ಕಳೆದ ವರ್ಷ ಕೊರೊನಾ ವೇಳೆ ಮೃತದೇಹಗಳು ತೇಲಿ ಬಂದಿವೆ ಎಂದು ಭಾರಿ ಸುದ್ದಿಮಾಡಿದ್ದ ಗಂಗಾನದಿಯ ದಂಡೆಯ ಮರಳಿನಲ್ಲಿ ಮತ್ತೆ ಮೃತ ದೇಹಗಳು ಕಾಣಿಸಿಕೊಳ್ಳಲಾರಂಭಿಸಿದ್ದು, ಮೃತದೇಹಗಳನ್ನು ಹೂಳಿರುವ ಪ್ರಕರಣ ಮತ್ತೆ ಸುದ್ದಿಯಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಗಂಗಾ ನದಿಯ ದಡದ ಫಫಮೌ ಘಾಟ್ನ ಇತ್ತೀಚಿನ ಚಿತ್ರಗಳು ನೋಡುಗರಲ್ಲಿ ಭಯ ಹುಟ್ಟಿಸುವಂತಿದೆ. ಈ ಚಿತ್ರಗಳು ಕಳೆದ ವರ್ಷದ ಕೊರೊನಾ ಅವಧಿಯಲ್ಲಿ ಗಂಗೆಯಲ್ಲಿ ಶವ ತೇಲಿಬಂದ ಘಟನೆಯನ್ನು ನೆನಪಿಸುವಂತಿವೆ.
ಕೊರೊನಾವೈರಸ್ ಕಾಲದಲ್ಲಿ ಗಂಗಾ ನದಿಯಲ್ಲಿ ತೇಲಿದ ಹೆಣಗಳ ಸಂಖ್ಯೆ ಎಷ್ಟು?
ಗಂಗಾನದಿಯ ಘಟ್ಟಗಳಲ್ಲಿ ಮೃತದೇಹಗಳನ್ನು ಹೂಳುವುದನ್ನು ಎನ್ಜಿಟಿ ಮತ್ತು ಜಿಲ್ಲಾಡಳಿತ ನಿಷೇಧಿಸಿವೆ. ಆದರೆ ಸಂಪ್ರದಾಯದ ಹೆಸರಿನಲ್ಲಿ ಶವಗಳನ್ನು ಹೂಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಯಾಗ್ರಾಜ್ನ ಫಫಮೌ ಘಾಟ್ನಲ್ಲಿ ಪ್ರತಿದಿನ ಮೃತದೇಹಗಳನ್ನು ಮರಳಿನಲ್ಲಿ ಹೂಳಲಾಗುತ್ತಿದೆ. ಇದರಿಂದಾಗಿ ಇಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಸಮಾಧಿಗಳು ಗೋಚರಿಸುತ್ತಿವೆ.
ಗಂಗೆಯಲ್ಲಿ ಮತ್ತೆ ಶವ ತೇಲುವ ಅಪಾಯ
ಫಫಮೌ ಘಾಟ್ನಲ್ಲಿ ಸದ್ಯದ ಬೆಳವಣಿಗೆ ಚಿಂತಾಜನಕಾವಾಗಿದೆ. ಜಿಲ್ಲಾಡಳಿತದ ಸೂಚನೆಗಳನ್ನಷ್ಟೇ ಅಲ್ಲದೆ ಎಸ್ಜಿಟಿಯ ಎಚ್ಚರಿಕೆಯನ್ನೂ ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ. ಮುಂಗಾರು ಶುರುವಾಗಲು ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದ್ದು, ಈ ವೇಳೆ ಗಂಗಾ ನದಿಯ ದಡದಲ್ಲಿ ಹೆಣಗಳನ್ನು ಹೂಳಲಾಗುತ್ತಿದೆ. ಮಳೆಯಿಂದ ಗಂಗಾ ನದಿಯ ನೀರಿನ ಮಟ್ಟ ಹೆಚ್ಚಾದರೆ ಮರಳಿನಲ್ಲಿ ಹೂತಿರುವ ಶವಗಳು ಗಂಗೆಯನ್ನು ಸೇರುವ ಅಪಾಯವಿದೆ. ಮೃತದೇಹಗಳು ಗಂಗಾನದಿ ಸೇರುವುದಲ್ಲದೆ ನದಿಯೂ ಕಲುಷಿತವಾಗುತ್ತದೆ.
ಜಿಲ್ಲಾಡಳಿತದ ಆದೇಶದ ಉಲ್ಲಂಘನೆ
ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯವರು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಕೋವಿಡ್ನಿಂದ ಮೃತಪಟ್ಟವರನ್ನು ಗಂಗಾನದಿಯ ದಡದ ಮರಳಿನಲ್ಲಿ ಹೂತುಹಾಕಲಾಗಿದೆ ಎಂಬ ಸುದ್ದಿ ಬಂದ ನಂತರ, ಅಲ್ಲಿನ ನಗರಸಭೆಯು ನೂರಾರು ಶವಗಳನ್ನು ಹೊರತೆಗೆದು ಸುಟ್ಟುಹಾಕಲಾಗಿತ್ತು.
ಇಲ್ಲಿ ನಿಷೇಧಾಜ್ಞೆ ವಿಧಿಸಿದ್ದರೂ ಮೃತದೇಹಗಳನ್ನು ಹೂಳುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಘಾಟ್ನ ಪರಿಸ್ಥಿತಿ ಚಿಂತಾಜನಕವಾಗಿದೆ, ಇಲ್ಲಿ ಯಾವುದೇ ಮೂಲಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಘಾಟ್ಗೆ ಆಗಮಿಸಿದ ಜನರು ಆರೋಪಿಸಿದ್ದಾರೆ. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಯಾಗ್ರಾಜ್ನ ಉತ್ತರಭಾಗದಲ್ಲಿರುವ ಫಫಮೌ ಘಾಟ್ ಸ್ಮಶಾನವಾಗಿ ಮಾರ್ಪಟ್ಟಿದೆ. ಶವಗಳನ್ನು ಸಮಾಧಿ ಮಾಡಲಾಗಿದ್ದು ಸಮಾಧಿ ಸ್ಥಳದಲ್ಲಿ ತಾತ್ಕಾಲಿಕವಾಗಿ ಕಂಬಗಳನ್ನು ನಿಲ್ಲಿಸಿ ಹಳದಿ, ಕೇಸರಿ ಬಟ್ಟೆಗಳನ್ನು ಹಾಕಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸುದ್ದಿಯಾಗಿತ್ತು
2021ರಲ್ಲಿ ಕೋವಿಡ್-19ರ ಎರಡನೇ ಅಲೆ ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಶವಗಳು ತೇಲುತ್ತಿರುವ ಫೋಟೋ, ಸುದ್ದಿ ಪ್ರಕಟವಾಗಿದ್ದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ಘಟನೆ, ವಿವಾದಕ್ಕೆ ಕಾರಣವಾಗಿತ್ತು. ಕೊರೊನಾ ವೈರಸ್ನಿಂದ ಮೃತಪಟ್ಟವರನ್ನು ಗಂಗಾ ನದಿಯಲ್ಲಿ ಎಸೆಯಲಾಗಿದೆ ಎಂದು ವಿದೇಶಿ ಮಾಧ್ಯಮಗಳು ಸುದ್ದಿ ಮಾಡಿದ್ದವು.
ಮೋಕ್ಷಕ್ಕಾಗಿ ಗಂಗಾ ತೀರದಲ್ಲಿ ಅಂತ್ಯಕ್ರಿಯೆ
ಮೃತಪಟ್ಟವರನ್ನು ಇಲ್ಲಿ ಹೂಳಿದರೆ ಮೋಕ್ಷ ಸಿಗುತ್ತದೆ ಎನ್ನುವ ನಂಬಿಕೆ ಸಮಸ್ಯೆಗೆ ಕಾರಣವಾಗಿದೆ. "ಹಿಂದೂ ಧರ್ಮದಲ್ಲಿ, ಬಹಳಷ್ಟು ಮಂದಿ ಮೃತದೇಪಟ್ಟವರನ್ನು ಮರದ ಚಿತೆಯಲ್ಲಿ ಸುಡುವ ಮೂಲಕ ಅಂತ್ಯಕ್ರಿಯೆ ಮಾಡಲಾಗುತ್ತದೆ. ದೇಹವು ಗಂಗೆಯಲ್ಲಿ ಲೀನವಾಗುತ್ತದೆ ಎನ್ನುವ ನಂಬಿಕೆ ಇದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ" ಎಂದು ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.
"ಇಲ್ಲಿ ಮೃತದೇಹ ಹೂಳುವವರಿಗೆ ಗಂಗಾ ನದಿಯ ಹರಿವಿನ ತಿಳಿದಿದೆ, ಮಳೆಗಾಳದಲ್ಲಿ ನದಿಯು ವಿಸ್ತರಿಸಿದಾಗ ದೇಹಗಳು ನದಿಯಲ್ಲಿ ಮುಳುಗುತ್ತವೆ ಈ ರೀತಿ ನದಿಯಲ್ಲಿ ಮೃತದೇಹ ಮುಳುಗಿದಾಗ ಅವರು ಮೋಕ್ಷ ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ" ಎಂದು ಸ್ಥಳಿಯರೊಬ್ಬರು ಹೇಳಿದ್ದಾರೆ.
ವಿದ್ಯುತ್ ಚಿತಾಗಾರ ಸ್ಥಾಪನೆ
ಫಫಮೌ ಘಾಟ್ನಲ್ಲಿ ವಿದ್ಯುತ್ ಚಿತಾಗಾರ ಮತ್ತು ಸೌದೆಯಿಂದ ಸುಡುವ ವ್ಯವಸ್ಥೆ ಮಾಡಿದ್ದರೆ ಮೃತ ದೇಹಗಳನ್ನು ಈ ರೀತಿ ಹೂಳುತ್ತಿರಲಿಲ್ಲ ಎಂದು ಜನರು ಹೇಳುತ್ತಾರೆ. ಸಾಂಪ್ರದಾಯಿಕವಾಗಿ ಹೂಳುವ ಪದ್ಧತಿಯನ್ನು ಇಲ್ಲಿ ನೆರವೇರಿಸುತ್ತಾರೆ.
"ಫಫಮೌ ಘಾಟ್ನಲ್ಲಿ ಮೃತದೇಹ ಹೂಳದಂತೆ ಜನರಿಗೆ ಸೂಚನೆ ನೀಡಿದ್ದೇವೆ. ಶೀಘ್ರದಲ್ಲೇ ಘಾಟ್ನಲ್ಲಿ ವಿದ್ಯುತ್ ಚಿತಾಗಾರವನ್ನು ನಿರ್ಮಿಸಲಾಗುವುದು. ಅದಕ್ಕಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿಯನ್ನು ಪಡೆಯಲಾಗಿದೆ. ಶೀಘ್ರದಲ್ಲೇ ಕೆಲಸ ಪೂರ್ಣಗೊಳ್ಳಲಿದೆ" ಎಂದು ಪ್ರಯಾಗ್ರಾಜ್ ನಗರಸಭೆ ಆಯುಕ್ತ ರವಿರಂಜನ್ ತಿಳಿಸಿದ್ದಾರೆ.