ಕೃಷಿ ಕಾಯ್ದೆ ಮತ್ತು ಹತ್ರಾಸ್ ಘಟನೆ ವಿರೋಧಿಸಿ ಮಹಾಪಂಚಾಯತ್
ಲಕ್ನೋ, ಅಕ್ಟೋಬರ್.08: ಹತ್ರಾಸ್ ನಲ್ಲಿ 19 ವರ್ಷದ ಯುವತಿ ಅತ್ಯಾಚಾರ ಪ್ರಕರಣ ಮತ್ತು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಲೋಕ ದಳವು ಮಹಾಪಂಚಾಯತ್ ಅನ್ನು ನಡೆಸಿತು.
ಕಳೆದ ಸಪ್ಟೆಂಬರ್.04ರಂದು ಹತ್ರಾಸ್ ಅತ್ಯಾಚಾರ ಸಂತ್ರಸ್ತೆ ಕುಟುಂಬ ಸದಸ್ಯರನ್ನು ಭೇಟಿ ಮಾಡುವುದಕ್ಕೆ ತೆರಳಲು ಮುಂದಾದ ಆರ್ ಜೆಡಿ ಮುಖಂಡ ಜಯಂತ್ ಚೌಧರಿ ಮೇಲೆ ಉತ್ತರ ಪ್ರದೇಶ ಪೊಲೀಸರು ಹಲ್ಲೆ ಮಾಡಿದ್ದರು ಎನ್ನಲಾಗಿದೆ.
ರೈತರನ್ನು ಗುಲಾಮರನ್ನಾಗಿಸಲು ಕೃಷಿ ಕಾಯ್ದೆ ಜಾರಿ ಎಂದ ರಾಹುಲ್ ಗಾಂಧಿ
ರಾಷ್ಟ್ರೀಯ ಲೋಕ ದಳ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರದ ಮೇಲೆ ಉತ್ತರ ಪ್ರದೇಶದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯದ ವಿರುದ್ಧ ಮಹಾಪಂಚಾಯತ್ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಸರ್ವಾಧಿಕಾರತ್ವ ಧೋರಣೆ ತೋರುತ್ತಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.
ಹತ್ರಾಸ್ ಸಾಮೂಹಿತ ಅತ್ಯಾಚಾರ ಪ್ರಕರಣ:
ಸಪ್ಟೆಂಬರ್.14ರಂದು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಹುಲ್ಲು ಕತ್ತರಿಸುತ್ತಿದ್ದ ಯುವತಿಯನ್ನು ಠಾಕೂರ್ ಸಮುದಾಯದ ನಾಲ್ವರು ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರ ನಡೆಸಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಯುವತಿ ಕತ್ತು ಹಿಸುಕಿ, ನಾಲಗೆ ಕತ್ತರಿಸುವ ಮೂಲಕ ಕ್ರೌರ್ಯ ಮೆರೆದಿದ್ದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಅದಾಗಿ ಎರಡು ವಾರ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ದಲಿತ ಯುವತಿ ಸಪ್ಟೆಂಬರ್.29ರಂದು ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆದಲ್ಲಿ ಕೊನೆಯುಸಿರೆಳೆದಿದ್ದಳು. ಸಪ್ಟೆಂಬರ್.30ರ ಮಧ್ಯರಾತ್ರಿ 2.30ರ ಸಂದರ್ಭದಲ್ಲಿ ಪೊಲೀಸರೇ ಯುವತಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು:
ಸಂಸತ್ ನಲ್ಲಿ ತೀವ್ರ ಸದ್ದು ಗದ್ದಲಕ್ಕೆ ಕಾರಣವಾದ ಕೃಷಿ ಸಂಬಂಧಿತ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳೆದ ಸಪ್ಟೆಂಬರ್.27ರಂದು ಅನುಮೋದನೆ ನೀಡಿದ್ದರು. ಇದರಿಂದ ಮೂರು ಮಸೂದೆಗಳು ಇದೀಗ ಕಾಯ್ದೆಗಳಾಗಿ ಬದಲಾಗಿವೆ. ಈ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ
2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ