ಪೊಲೀಸ್ ಮುಂದೆ ಶರಣಾದ ರೇಪ್ ಆರೋಪಿ ಬಿಎಸ್ಪಿ ಸಂಸದ
ವಾರಣಾಸಿ, ಜೂನ್ 23: ಅತ್ಯಾಚಾರ ಆರೋಪ ಹೊತ್ತಿದ್ದ ಬಹುಜನ ಸಮಾಜವಾದಿ ಪಕ್ಷದ ಸಂಸದ ಅತುಲ್ ರಾಯ್ ಅವರು ಪೊಲೀಸರ ಮುಂದೆ ಶರಣಾಗಿದ್ದಾರೆ.
ಅತ್ಯಾಚಾರ ಹಾಗೂ ಕಿಡ್ನಾಪ್ ಕೇಸಿನ ಆರೋಪಿ ಅತುಲ್ ಅವರನ್ನು ವಶಕ್ಕೆ ಪಡೆದ ಪೊಲೀಸರು, ಶನಿವಾರದಂದು ವಾರಣಸಿಯ ಕೋರ್ಟಿಗೆ ಹಾಜರುಪಡಿಸಿದ್ದಾರೆ. ಆರೋಪಿ ಅತುಲ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
2019ರ ಲೋಕಸಭೆ ಚುನಾವಣೆ 2019ರಲ್ಲಿ ಘೋಸಿ ಸಂಸತ್ ಕ್ಷೇತ್ರದಿಂದ ಸ್ಪರ್ಧಿಸಿ ಅತುಲ್ ಅವರು ಗೆಲುವು ಸಾಧಿಸಿದ್ದರು. ಈ ಪ್ರಕರಣದಲ್ಲಿ ಸಿಲುಕಿದ ಬಳಿಕ, ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದರು. ಸಂಸದ ಅತುಲ್ ವಿರುದ್ಧ ಮಹಿಳೆಯೊಬ್ಬರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರಿತ್ತಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಎಫ್ಐಆರ್ ಹಾಕಿದ್ದರು. ಆದರೆ, ಸಂಸದ ಅತುಲ್ ನಾಪತ್ತೆಯಾಗಿದ್ದರು.
ಬಲ್ಲಿಯಾ ಪ್ರದೇಶ ಮೂಲದ ಮಹಿಳೆ ಆರೋಪ ಮಾಡಿದ ಕೂಡಲೇ ನಾಪತ್ತೆಯಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮತದಾರರಿಗೆ ಧನ್ಯವಾದ ಅರ್ಪಿಸಿ ವಿಡಿಯೋ ಹಾಕಿದ್ದ ಅತುಲ್, ಜನಾದೇಶ ಸಿಕ್ಕಿದೆ, ಜನತಾ ಕೋರ್ಟಿನಲ್ಲಿ ನನಗೆ ಖುಲಾಸೆಯಾಗಿದೆ ಎಂದಿದ್ದರು,
ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರು ಕೂಡಾ ಅತುಲ್ ಗೆ ಬೆಂಬಲ ವ್ಯಕ್ತಪಡಿಸಿ, ಇದು ರಾಜಕೀಯ ಕುತಂತ್ರ ಎಂದಿದ್ದರು. ಅತುಲ್ ಅವರು ಇನ್ನು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿಲ್ಲ.