ಶ್ರೀರಾಮ ನವಮಿಗೂ ಆವರಿಸಿದ ಕೊರೊನಾ ವೈರಸ್ ಕರಿಛಾಯೆ
ಲಕ್ನೋ, ಏಪ್ರಿಲ್.02: ಕೋಟ್ಯಂತರ ಜನರು ಶ್ರೀರಾಮನ ಜನ್ಮಭೂಮಿ ಎಂದೆ ನಂಬಿರುವ ಅಯೋಧ್ಯೆಯಲ್ಲಿ ಎಲ್ಲವೂ ಸ್ತಬ್ಧವಾಗಿದೆ. ಶ್ರೀರಾಮ ನವಮಿ ದಿನ ಅಯೋಧ್ಯೆಯಲ್ಲಿ ಕೊರೊನಾ ವೈರಸ್ ಕರಿಛಾಯೆ ಆವರಿಸಿಕೊಂಡಿದೆ.
ಕೊರೊನಾ ವೈರಸ್ ನಿಯಂತ್ರಿಸುವ ದೃಷ್ಟಿಯಿಂದ ದೇಶಕ್ಕೆ ದೇಶವನ್ನೇ ಲಾಕ್ ಡೌನ್ ಮಾಡಿಲಾಗಿದೆ. ಇದರಿಂದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಬೇಕಿದ್ದ ಸಂಭ್ರಮದ ರಾಮ ನವಮಿ ಆಚರಣೆಗೂ ಬ್ರೇಕ್ ಬಿದ್ದಿದೆ.
ಕೊರೊನಾ ಭೀತಿ : ಅಯೋಧ್ಯೆಯಲ್ಲಿ ರಾಮನವಮಿ ಇಲ್ಲ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಈಗಾಗಲೇ ರಾಮಜನ್ಮ ಭೂಮಿ ತೀರ್ಥ ಟ್ರಸ್ಟ್ ನ್ನು ರಚನೆ ಮಾಡಲಾಗಿದೆ. ಇನ್ನೊಂದೆಡೆ ಶ್ರೀರಾಮ ನವಮಿಯಾಗಿದ್ದರೂ ಭಕ್ತರು ದೇವಸ್ಥಾನಕ್ಕೆ ಬರಲು ಅವಕಾಶವಿಲ್ಲ. ಒಬ್ಬ ಆಚಾರ್ಯರನ್ನು ಬಿಟ್ಟು ಕೆಲವು ಪೊಲೀಸರಷ್ಟೇ ದೇವಸ್ಥಾನದ ಸುತ್ತಲಿನಲ್ಲಿ ಇದ್ದಾರೆ ಎಂದು ರಾಮಜನ್ಮಭೂಮಿ ದೇವಸ್ಥಾನದ ಆಚಾರ್ಯ ಸತ್ಯಂದ್ರ ದಾಸ್ ತಿಳಿಸಿದ್ದಾರೆ.
ಪ್ರಸಾದ ವಿತರಣೆ ಅಂಗಡಿಗಳೂ ಬಂದ್:
ಅಯೋಧ್ಯೆಯಲ್ಲಿ ಇರುವ ಹನುಮಾನ್ ಘರ್ ದೇವಸ್ಥಾನ ಮತ್ತು ದಶರಥ ಮಹಲ್ ದೇವಸ್ಥಾನವನ್ನು ಮುಚ್ಚಲಾಗಿದೆ. ಇದರ ಜೊತೆಗೆ ಈ ಮಾರ್ಗದಲ್ಲಿ ಇರುವ ಪ್ರಸಾದ ವಿತರಣೆ ಅಂಗಡಿಗಳನ್ನು ಕೂಡಾ ಬಂದ್ ಮಾಡಲಾಗಿದೆ. ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ರಾಮಜನ್ಮ ಭೂಮಿಯಲ್ಲಿ ರಾಮ ನವಮಿ ಆಚರಣೆಗೆ ಜನರು ಸೇರುವಂತಿಲ್ಲ. ಈ ನಿಟ್ಟಿನಲ್ಲಿ ಕ್ರಮವನ್ನು ಕೂಡಾ ತೆಗೆದುಕೊಳ್ಳಲಾಗಿದೆ.
ಇನ್ನು, ಕಳೆದ ಎರಡು ದಿನಗಳ ಹಿಂದೆಯಷ್ಟೇ ವಿಶ್ವ ಹಿಂದೂ ಪರಿಷತ್ ರಾಮಭಕ್ತರೆಲ್ಲ ತಮ್ಮ ತಮ್ಮ ಮನೆಗಳಲ್ಲಿಯೇ ರಾಮ ನವಮಿಯನ್ನು ಆಚರಿಸುವಂತೆ ಮನವಿ ಮಾಡಿಕೊಂಡಿತ್ತು. ಕಳೆದ ತಿಂಗಳಿನಲ್ಲೇ ಸಾರ್ವಜನಿಕರು ಯಾವುದೇ ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನರು ಭಾಗವಹಿಸದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು.