ಅಯೋಧ್ಯೆ: ಕೇವಲ ದೇಗುಲ ನಿರ್ಮಾಣಕ್ಕಷ್ಟೇ ಬೇಕು 50 ಕೋಟಿ
ನವದೆಹಲಿ, ನವೆಂಬರ್ 10: ಅಯೋಧ್ಯೆ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಕುರಿತು ಸುಪ್ರೀಂಕೋರ್ಟ್ ಶನಿವಾರ ಐತಿಹಾಸಿಕ ತೀರ್ಪು ನೀಡಿದೆ.
ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಹಸಿರು ನಿಷಾನೆ ತೋರಿದ ಬೆನ್ನಲ್ಲೇ ಮುಂದಿನ ನಿರ್ಮಾಣದ ಪ್ರಕ್ರಿಯೆಗೆ ಚುರುಕು ಸಿಕ್ಕಿದೆ.
ಈಗಾಗಲೇ ದೇಶಾದ್ಯಂತ 100ಕ್ಕೂ ಹೆಚ್ಚು ದೇಗುಲಗಳಿಗೆ ಸುಂದರ ವಿನ್ಯಾಸ ಮಾಡಿರುವ ಚಂದ್ರಕಾಂತ್ ಅವರಿಗೆ ಮೂರು ದಶಕಗಳ ಹಿಂದೆಯೇ ವಿಎಚ್ಪಿ ದೇಗುಲದ ವಿನ್ಯಾಸದ ರಚನೆಯ ಹೊಣೆ ವಹಿಸಿತ್ತು.
ರಾಮಮಂದಿರವನ್ನು ನಗರ ಶೈಲಿಯಲ್ಲಿ ನಿರ್ಮಿಸಲಾಗುವುದು. ಮಂದಿರವು ಒಟ್ಟು 2 ಮಹಡಿ ಹೊಂದಿರಲಿದೆ. ಕೇವಲ ದೇಗುಲಕ್ಕೆ 20 ಕೋಟಿ ರೂ. ವೆಚ್ಚವಾಗಲಿದೆ. ಮೊದಲನೇ ಮಹಡಿಯಲ್ಲಿ ರಾಮ್ ಲಲ್ಲಾ ಪ್ರತಿಷ್ಠಾಪನೆಯಾಗಲಿದೆ ಹಾಗೂ ಎರಡನೇ ಮಹಡಿಯಲ್ಲಿ ರಾಮ್ ದರ್ಬಾರ್ ಹಾಗೂ ಅದರ ಮೇಲೆ ಶಿಖರ ಇರಲಿದೆ.
2 ದೊಡ್ಡ ಗುಮ್ಮಟ ಹಾಗೂ ಒಂದು ಶಿಖರ ಇರಲಿದೆ. ಸದ್ಯ 4.5 ಎಕರೆ ಪ್ರದೇಶಕ್ಕೆ ವಿನ್ಯಾಸ ತಯಾರಿಸಲಾಗಿದ್ದು. ವಾಸ್ತು ಶಾಸ್ತ್ರ ಹಾಗೂ ಶಿವ ಶಾಸ್ತ್ರಗಳ ಪ್ರಕಾರ ವಿನ್ಯಾಸ ಮಾಡಲಾಗಿದೆ.
ನೆಲಕ್ಕೆ ಮಾರ್ಬಲ್, ಕಂಬಗಳಿಗೆ ಗ್ರಾನೈಟ್ ಗಳನ್ನು ಬಳಸಲಾಗುತ್ತದೆ. ನಿರ್ಮಾಣಕ್ಕೆ ಮರಳಿನ ಕಲ್ಲುಗಳನ್ನು ಉಪಯೋಗಿಸಲಾಗುತ್ತಿದ್ದು, ಎಲ್ಲಾ ಕಲ್ಲುಗಳನ್ನು ರಾಜಸ್ಥಾನದ ಭರತ್ಪುರದಿಂದ ತರಲಾಗುತ್ತಿದೆ.
ಕಂಬಗಳ ಮೇಲೆ ಕೆತ್ತನೆ: ಪ್ರತಿ ಕಂಬದಲ್ಲಿ ಹಿಂದೂ ದೇವತೆಗಳ ವಿಗ್ರಹ, ಹೂಗಳು ಮತ್ತು ಎಲೆಗಳ ವಿನ್ಯಾಸವಿರುವ 12 ಪ್ರತಿಮೆಗಳನ್ನು ಕೆತ್ತಲಾಗಿದೆ. ಗರ್ಭಗುಡಿ ಹಾಗೂ ಶಿಖರ ಅಷ್ಠಭುಜಾಕೃತಿಯಾಗಿ ಸುತ್ತಳತೆಯು ಪೂರ್ಣವಾಗಿ ಇರಲಿದೆ.
ದೇಗುಲ ನಿರ್ಮಾಣಕ್ಕೆ ಸುಮಾರು 50 ಕೋಟಿ ರೂ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ದೇಗುಲವನ್ನು ಸರಯೂ ನದಿಯ ತೀರದಲ್ಲಿ ಕಟ್ಟುವ ಕಾರಣ ಅದಕ್ಕೆ ಬಲಿಷ್ಟ ಅಡಿಪಾಯವನ್ನು ಹಾಕಬೇಕಾಗುತ್ತದೆ. ಒಟ್ಟಾರೆ ದೇಗುಲವ ನಿರ್ಮಾಣ ನಾಲ್ಕು ವರ್ಷ ತಗುಲುತ್ತದೆ.