ಅಂತೂ ರಾಮಮಂದಿರ ನಿರ್ಮಾಣ ಕಾಮಗಾರಿ ಆರಂಭ
ಅಯೋಧ್ಯೆ, ಮೇ 27: ಬಹು ವಿವಾದಿತ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಅಂತೂ ಆರಂಭವಾಗಿದೆ. ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ್ ನೃತ್ಯ ಗೋಪಾಲ್ ದಾಸ್ ಅವರು ತಿಳಿಸಿದ್ದಾರೆ.
ಮಂಗಳವಾರ , ಮಹಾಂತ್ ನೃತ್ಯ ಗೋಪಾಲ್ ದಾಸ್ ಅಯೋಧ್ಯೆಯ ರಾಮಲಲ್ಲಾ ದೇವಸ್ಥಾನದ ಸ್ಥಳಕ್ಕೆ ಪೂಜೆ ಸಲ್ಲಿಸಿ, ಹಿಂದೂಗಳ ಬಹುದೊಡ್ಡ ಕನಸು ಈಡೇರಿದೆ. ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಘೋಷಿಸಿದ್ದಾರೆ.
ಚಿತ್ರಗಳು: ಆಯೋಧ್ಯೆಯ ರಾಮ ಜನ್ಮಭೂಮಿ ತಾಣದಲ್ಲಿ ಶಿವಲಿಂಗ
ವಿವಾದಿತ ಜಾಗದಲ್ಲಿ ಕಳೆದ 27 ವರ್ಷದ ಹಿಂದೆ ತಾತ್ಕಾಲಿಕವಾಗಿ ಸ್ಥಾಪಿಸಲಾಗಿದ್ದ ರಾಮಲಲ್ಲಾ ಮೂರ್ತಿಯನ್ನು ಮತ್ತೊಂದು ಕಡೆ ಕಳೆದ ಸೋಮವಾರ ಸ್ಥಳಾಂತರಿಸಲಾಗಿತ್ತು. ಅಲ್ಲದೇ ಬಾಬ್ರಿ ಮಸೀದಿ ಇದ್ದ ಜಾಗವನ್ನು ಸಮತಟ್ಟು ಮಾಡುವ ಕೆಲಸವನ್ನು ಎಂಟು ದಿನಗಳ ಹಿಂದೆಯೇ ಆರಂಭಿಸಲಾಗಿತ್ತು.
2019 ರ ನವೆಂಬರ್ 9 ರಂದು ಸುಪ್ರೀಂಕೋರ್ಟ್ ಬಾಬ್ರಿ ಮಸೀದಿಯ ವಿವಾದಿತ ಜಾಗದ ಬಗ್ಗೆ ತೀರ್ಪು ನೀಡಿ, ವಿವಾದಿತ ಜಾಗ ರಾಮಲಲ್ಲಾ ದೇವಸ್ಥಾನದ್ದು ಎಂದು ಹೇಳಿತ್ತು. ಬಾಬ್ರಿ ಮಸೀದಿಗೆ ಅಯೋಧ್ಯೆಯಲ್ಲಿ ಬೇರೆ ಕಡೆಗೆ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗ ನೀಡಬೇಕು ಎಂದು ಆದೇಶ ಮಾಡಿತ್ತು. ಮಂದಿರ ನಿರ್ಮಾಣ ಕಾರ್ಯ ಆರು ತಿಂಗಳ ಒಳಗೆ ಮುಗಿಯಬಹುದು ಎಂದು ಅಂದಾಜಿಸಲಾಗಿದೆ.