ರಾಮಜನ್ಮಭೂಮಿ ಬಗ್ಗೆ ತಕರಾರು ಎತ್ತಿದ್ದ ಇಕ್ಬಾಲ್ ಗೂ ಆಹ್ವಾನ
ಅಯೋಧ್ಯೆ, ಆ.3: ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ತಕರಾರು ಅರ್ಜಿ ಹಾಕಿದವರ ಪೈಕಿ ಪ್ರಮುಖರಾದ ಇಕ್ಬಾಲ್ ಅನ್ಸಾರಿ ಅವರಿಗೂ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಆಹ್ವಾನ ಪತ್ರಿಕೆಯ ಮೊದಲ ಪ್ರತಿ ಸಿಕ್ಕಿದೆ. ಆಹ್ವಾನ ಪತ್ರಿಕೆ ಸ್ವೀಕರಿಸಿ ಎಲ್ಲವೂ ಶ್ರೀರಾಮನ ಇಚ್ಛೆ ಎಂದಿದ್ದಾರೆ.
ಅಯೋಧ್ಯಾ ಭೂ ವಿವಾದ, ಆಸ್ತಿ ಹಂಚಿಕೆ ಕುರಿತಂತೆ ಅರ್ಜಿ ಸಲ್ಲಿಸಿದವರ ಪೈಕಿ ಸ್ವತಂತ್ರವಾಗಿ ಮೊದಲಿಗೆ ತಕರಾರು ಅರ್ಜಿ ಸಲ್ಲಿಸಿದವರು ಮೊಹಮ್ಮದ್ ಫರೂಕ್. ಫರೂಕ್ ಬಿಟ್ಟರೆ ಮೂಲ ಅರ್ಜಿದಾರರೆಂದರೆ ಇಕ್ಬಾಲ್ ಅನ್ಸಾರಿ ಅವರ ತಂದೆ ಹಶೀಂ ಅನ್ಸಾರಿ. ಅನ್ಸಾರಿ ಅವರು 2016ರಲ್ಲಿ ನಿಧನರಾದರು. ಅವರ ಪುತ್ರ ಅಪ್ಪನ ಟೈಲರಿಂಗ್ ವೃತ್ತಿ ಮಾಡಿಕೊಂಡು ಬಾಬ್ರಿ ಮಸೀದಿಯ ಅನತಿ ದೂರದಲ್ಲೇ ನೆಲೆಸಿದ್ದಾರೆ.
ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ
ಜಸ್ಟೀಸ್ ಬೊಬ್ಡೆ ಅವರಲ್ಲದೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು, ಶನಿವಾರ(ನವೆಂಬರ್ 09, 2019)ದಂದು ನ್ಯಾಯಾಲಯಕ್ಕೆ ರಜೆ ಇದ್ದರೂ ಕಾರ್ಯ ನಿರ್ವಹಿಸಿ, ವಿವಾದಿತ ಭೂ ಭಾಗವನ್ನು ರಾಮಜನ್ಮಭೂಮಿ ನ್ಯಾಸ್ ಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪ್ರತ್ಯೇಕ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು.
ಸುಪ್ರೀಂನಿಂದ ಅಂತಿಮ ತೀರ್ಪು ಸ್ವಾಗತಾರ್ಹ
ಅಯೋಧ್ಯಾ ಪ್ರಕರಣದಲ್ಲಿ ಸುಪ್ರೀಂನಿಂದ ಅಂತಿಮ ತೀರ್ಪು ಬಂದಿರುವುದು ಅಯೋಧ್ಯಾ ನಿವಾಸಿಯಾಗಿ ನನಗೆ ನೆಮ್ಮದಿ ತಂದಿದೆ. ಬಹುಕಾಲದಿಂದ ವಿಚಾರಣೆ ಹಂತದಲ್ಲೇ ಮುಂದುವರೆದಿದ್ದ ಈ ಪ್ರಕರಣವು ಅಂತ್ಯಗೊಂಡಿದ್ದು ದೊಡ್ಡ ಸಂತಸದ ವಿಷ್ಯವಾಗಿದೆ ಎಂದರು. ಸುಪ್ರೀಂ ತೀರ್ಪನ್ನು ಗೌರವಿಸುತ್ತೇವೆ, ಸರ್ಕಾರವು ತನ್ನ ಹೊಣೆಯನ್ನು ಅರಿತು ಮಸೀದಿಗೆ ಸೂಕ್ತ ಜಾಗವನ್ನು ನೀಡಿದರೆ, ಮುಸ್ಲಿಮರಿಗೂ ವಿಜಯ ಸಿಕ್ಕಂತಾಗುತ್ತದೆ ಎಂದು ಹೇಳಿದ್ದರು.
ಅಯೋಧ್ಯೆಯಲ್ಲಿ ಹೊಸ ಅಧ್ಯಾಯ
ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಮೊದಲ ಆಹ್ವಾನ ನನಗೆ ಸಿಕ್ಕಿದ್ದು ಶ್ರೀರಾಮನ ಇಚ್ಛೆ. ರಾಮಮಂದಿರ ನಿರ್ಮಾಣದಿಂದ ಹೊಸ ಇತಿಹಾಸ ಸೃಷ್ಠಿಯಾಗಲಿದ್ದು, ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಗುವ ಭರವಸೆ ಇದೆ. ಶಾಂತಿ, ಸೌಹಾರ್ದತೆಯಿಂದ ಬಾಳಲು ಈ ಮಂದಿರ ನೆರವಾಗಲಿದೆ. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ, ನೆಮ್ಮದಿ ಸಿಗುವಂತಾಗಲಿ ಎಂಬುದು ನನ್ನ ಪ್ರಾರ್ಥನೆ ಎಂದು ಇಕ್ಬಾಲ್ ಪ್ರತಿಕ್ರಿಯಿಸಿದ್ದಾರೆ.
ಅಯೋಧ್ಯಾದಲ್ಲೇ 5 ಎಕರೆ ಜಾಗ ಬೇಕು ಎಂದು ಮುಸ್ಲಿಮರ ಹಠ
ವಿವಾದಿತ ಪ್ರದೇಶಕ್ಕೆ ಬೇಲಿ ಹಾಕಿದ್ದ ಬ್ರಿಟಿಷ್ ಆಡಳಿತ
1885: ಹಿಂದೂಗಳಿಗೆ ಹಂಚಿಕೆಯಾಗಿದ್ದ ಹೊರಾಂಗಣ ಭಾಗದಲ್ಲಿ ರಾಮ ಮಂದಿರ ನಿರ್ಮಿಸಲು ಮಹಂತ ರಘುವೀರ್ ದಾಸ್ ರಿಂದ ನಿರಾಕರಿಸಿದ್ದರು.
1949: ಮಸೀದಿಯೊಳಗೆ ಶ್ರೀರಾಮನ ಪ್ರತಿಮೆ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿತ್ತು. ಹಿಂದೂಗಳು ತಂದಿಟ್ಟಿದ್ದಾರೆ ಎಂದು ಮುಸ್ಲಿಮರಿಂದ ದೂರು. ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಗೇಟ್ ಬೀಗ ಹಾಕಿ ಜಡೆಯಿತು.1949ರಲ್ಲಿ ಕೇಸು ಹಾಕಿದ್ದ ಏಳು ಮಂದಿ ಅಯೋಧ್ಯಾ ನಿವಾಸಿಗಳ ಪೈಕಿ ಹಿರಿಯರಾದ ಅರ್ಜಿದಾರ ಮೊಹಮ್ಮದ್ ಫರೂಕ್, ಮೊಹಮ್ಮದ್ ಹಶೀಂ ಅನ್ಸಾರಿ ನಿಧನರಾಗಿದ್ದಾರೆ. ಅನ್ಸಾರಿ ಪುತ್ರ ಇಕ್ಬಾಲ್ ಅವರು ಯಾವುದೇ ತಕರಾರಿಲ್ಲ ಎಂದಿದ್ದಾರೆ.
ಭೂಮಿ ಪೂಜೆಗೆ ಸಕಲ ಸಿದ್ಧತೆ
ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಜೊತೆಗೆ ಗೌರಿ ಗಣೇಶ ಹಬ್ಬವೂ ಬರುತ್ತಿರುವುದು ಸಂಭ್ರಮ ಇನ್ನಷ್ಟು ಹೆಚ್ಚಿಸಿದೆ. ಮೂರು ದಿನಗಳ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರು ಆಗಸ್ಟ್ 5ರಂದು ಚಾಲನೆ ನೀಡಲಿದ್ದಾರೆ. ಶಂಕು ಸ್ಥಾಪನೆ ದಿನದಂದು 40 ಕೆಜಿ ಬೆಳ್ಳಿಯ ಇಟ್ಟಿಗೆಯನ್ನು ಇಟ್ಟು ಮೋದಿ ಪೂಜಿಸಲಿದ್ದಾರೆ. ಸೀಮಿತ ಅತಿಥಿಗಳು, ಸ್ಥಳೀಯ ಮುಖಂಡರಿಗೆ ಮಾತ್ರ ಖುದ್ದು ಹಾಜರಾಗುವ ಅವಕಾಶ ಸಿಗುತ್ತಿದ್ದು, ಮಿಕ್ಕವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳುತ್ತಿದ್ದಾರೆ.