ಲಖಿಂಪುರ ಖೇರಿ ಪರಿಸ್ಥಿತಿಯನ್ನು ರಾಹುಲ್ ಗಾಂಧಿ ತಪ್ಪಾಗಿ ಬಿಂಬಿಸುತ್ತಿದ್ದಾರೆ; ಬಿಜೆಪಿ
ಲಕ್ನೋ, ಅಕ್ಟೋಬರ್ 06: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿನ ಪರಿಸ್ಥಿತಿಯನ್ನು ತಪ್ಪಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
'ರೈತರ ಮೇಲೆ ಉತ್ತರ ಪ್ರದೇಶ ಸರ್ಕಾರ ವ್ಯವಸ್ಥಿತ ದಾಳಿ ನಡೆಸುತ್ತಿದೆ' ಎಂದು ಬುಧವಾರ ರಾಹುಲ್ ಗಾಂಧಿ ಆರೋಪಿಸಿದ ಕೆಲವೇ ಗಂಟೆಗಳ ನಂತರ ಬಿಜೆಪಿ ತಿರುಗೇಟು ನೀಡಿದೆ. 'ರಾಹುಲ್ ಗಾಂಧಿ ತಮ್ಮ ರಾಜಕೀಯಕ್ಕೆ ಲಖಿಂಪುರ ಘಟನೆಯನ್ನು ಅವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ' ಎಂದು ದೂರಿದೆ.
ಲಕ್ನೋಕ್ಕೆ ಹೋದ ಮೋದಿ ಲಖಿಂಪುರ ಖೇರಿಗೆ ಏಕೆ ಹೋಗಿಲ್ಲ; ರಾಹುಲ್
'ಲಖಿಂಪುರ್ ಖೇರಿಯಲ್ಲಿ ನಡೆದದ್ದು ದುಃಖಕರ ಸಂಗತಿ. ಈ ಕುರಿತು ರೈತ ಸಂಘಟನೆಗಳು ಹಾಗೂ ಸರ್ಕಾರ ನಿಷ್ಪಕ್ಷಪಾತ ತನಿಖೆಗೆ ಒಪ್ಪಿಕೊಂಡಿವೆ' ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ.
'ಲಖಿಂಪುರ ಖೇರಿ ಘಟನೆ ಕುರಿತು ರಾಹುಲ್ ಗಾಂಧಿ ಅಜಾಗರೂಕ ಹೇಳಿಕೆಗಳನ್ನು ನೀಡಿದ್ದಾರೆ. ಇದು ಇಂಥ ಹೇಳಿಕೆಗಳನ್ನು ನೀಡುವ ಸಮಯವಲ್ಲ. ಆದರೆ ಅವರು ಈ ಕೆಲಸವನ್ನು ಮಾಡಿದ್ದಾರೆ. ಬೇಜವಾಬ್ದಾರಿತನ ಎಂಬುದು ರಾಹುಲ್ ಗಾಂಧಿ ಎರಡನೇ ಹೆಸರಾಗಿದೆ' ಎಂದು ಅವರು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈತರ ವಿರುದ್ಧದ ದಾಳಿ ಖಂಡಿಸುವಲ್ಲಿ ಕೂಡ ಆಯ್ಕೆ ಮಾಡಿಕೊಳ್ಳುತ್ತಾರೆ. ರಾಜಸ್ಥಾನದ ಹನುಮಾನ್ಗರ್ನಲ್ಲಿ ಅಕ್ಕಿ ಖರೀದಿಗೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿದ್ದ ರೈತರ ಮೇಲೆ ಪೊಲೀಸ್ ಕ್ರಮಕ್ಕೆ ಕಾಂಗ್ರೆಸ್ ಮುಂದಾಗಿತ್ತು. ಇದು ಯಾವ ಆಯ್ದ ರಾಜಕೀಯ? ರಾಜಸ್ಥಾನದಲ್ಲಿಯೂ ರೈತರ ಮೇಲೆ ಹಲ್ಲೆ ನಡೆಸಲಾಗಿದೆ. ಆಗ ಅವರು ಈ ಘಟನೆ ಬಗ್ಗೆ ಅಲ್ಲಿನ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಏನಾದರೂ ಕೇಳಿದರೇ? ಎಂದು ಪ್ರಶ್ನಿಸಿದ್ದಾರೆ.
ಲಖಿಂಪುರಕ್ಕೆ ರಾಹುಲ್ ಗಾಂಧಿ ಭೇಟಿ; ಅನುಮತಿ ನೀಡದ ಯುಪಿ ಸರ್ಕಾರ!
ಎಂಟು ವರ್ಷಗಳ ಕಾಲ ಕನಿಷ್ಠ ಬೆಂಬಲ ಬೆಲೆ ಕುರಿತ ಎಂಎಸ್ ಸ್ವಾಮಿನಾಥನ್ ಸಮಿತಿ ಶಿಫಾರಸುಗಳನ್ನು ಅನುಷ್ಠಾನಗೊಳಿಸದೇ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ 'ರೈತರ ಮೇಲೆ ವ್ಯವಸ್ಥಿತ ದಾಳಿ' ನಡೆಸಿದೆ ಎಂದು ಪಾತ್ರಾ ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶ ಸಚಿವ ಅಜಯ್ ಮಿಶ್ರಾ ತೆನಿ ಈಚೆಗೆ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಕುರಿತು ಕಟುವಾದ ಹೇಳಿಕೆ ನೀಡಿದ್ದಲ್ಲದೆ ಪ್ರತಿಭಟಿಸುವವರ ಮೇಲೆ ಕ್ರಮ ಕೈಗೊಳ್ಳುವ ಬಹಿರಂಗ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರ ತವರು ಕ್ಷೇತ್ರ ಲಖಿಂಪುರ ಖೇರಿಯಲ್ಲಿ ಭಾನುವಾರ ಸೇರಿದ್ದ ರೈತರು ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದೇ ಸಂದರ್ಭ ರಸ್ತಾ ರೋಖೋ ನಡೆಸುತ್ತಿದ್ದ ರೈತರ ಮೇಲೆ ಬೆಂಗಾವಲು ವಾಹನ ಹರಿಸಲಾಗಿತ್ತು.
ಈ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದರು. ಆ ಕಾರಿನಲ್ಲಿ ಸಚಿವರ ಪುತ್ರ ಇದ್ದ ಆರೋಪ ಕೇಳಿಬಂದಿವೆ. ವಿರೋಧ ಪಕ್ಷಗಳು, ವಿವಿಧ ರೈತ ಸಂಘಟನೆಗಳು ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರನ್ನು ಲಖಿಂಪುರ ಖೇರಿಗೆ ಭೇಟಿ ನೀಡದಂತೆ ತಡೆದು ವಶಪಡಿಸಿಕೊಳ್ಳಲಾಗಿತ್ತು.
ಸೆಕ್ಷನ್ 144 ಜಾರಿ ಮಾಡಿದ್ದು, ಬುಧವಾರ ಲಖಿಂಪುರ ಭೇಟಿಗೆ ಮುಂದಾಗಿದ್ದ ರಾಹುಲ್ ಗಾಂಧಿಗೂ ಅನುಮತಿ ನೀಡಿರಲಿಲ್ಲ.
ಲಖಿಂಪುರದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಮತ್ತು ಪಕ್ಷದ ಮುಖಂಡ ದೀಪೆಂದರ್ ಹೂಡಾ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 144, 151,107,116 ಅಡಿ ಶಾಂತಿಗೆ ಭಂಗ ತಂದ ಆರೋಪದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
"ರೈತರು ಜೀಪ್ ಅಡಿ ಸಿಲುಕಿದರು. ಅವರನ್ನು ಕೊಲೆ ಮಾಡಲಾಯಿತು. ಲಖಿಂಪುರ ಖೇರಿ ಘಟನೆಯಲ್ಲಿ ಕೇಂದ್ರ ಸಚಿವ, ಅವರ ಪುತ್ರನ ಹೆಸರು ಹೇಳಿ ಬರುತ್ತಿದೆ. ನಿನ್ನೆ ಪ್ರಧಾನಿ ಮೋದಿ ಲಕ್ನೋದಲ್ಲಿದ್ದರು. ಆದರೆ ಲಖಿಂಪುರಕ್ಕೆ ಭೇಟಿ ಕೊಡಲಿಲ್ಲ. ಇದು ರೈತರ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದಾಳಿ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.