ಕಾನೂನು ಸುವ್ಯವಸ್ಥೆ ಬಗ್ಗೆ ಯುಪಿ ಸರ್ಕಾರವನ್ನು ತರಾಟೆ ತೆಗೆದುಕೊಂಡ ಪ್ರಿಯಾಂಕಾ
ರಾಯಪುರ್, ನವೆಂಬರ್ 30: ವಿಧಾನಸಭೆ ಚುನಾವಣೆ ಹತ್ತಿರವಿದ್ದಂತೆ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ಅಧಿಕವಾಗುತ್ತಿವೆ. ಕಾನೂನು ಸುವ್ಯವಸ್ಥೆ ಕುರಿತು ಉತ್ತರ ಪ್ರದೇಶ ಸರಕಾರದ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಜೆಪಿ ಸುಳ್ಳು ಚಿತ್ರಣವನ್ನು ಮೂಡಿಸಬಹುದು ಆದರೆ ರಾಜ್ಯದಲ್ಲಿನ ವಾಸ್ತವಿಕ ಅಪರಾಧ ಅಂಕಿಅಂಶಗಳು ಭಯಾನಕವಾಗಿದೆ ಎಂದು ಹೇಳಿದ್ದಾರೆ.
ಗೋರಖ್ಪುರ ಜಿಲ್ಲೆಯಲ್ಲಿ ಏಳು ದಿನಗಳಲ್ಲಿ ಏಳು ಕೊಲೆಗಳು ನಡೆದಿವೆ ಎಂದು ಮಾಧ್ಯಮ ವರದಿಯೊಂದರಲ್ಲಿ ಯೋಗಿ ಆದಿತ್ಯನಾಥ್ ಆಡಳಿತದ ಮೇಲೆ ಪ್ರಿಯಾಂಕಾ ಗಾಂಧಿ ವಾಗ್ದಾಳಿ ಮಾಡಿದ್ದಾರೆ. "ಬಿಜೆಪಿ ಕಿ ಡೋರ್ ಬೀ ಕೆ ಧೋಲ್ ಸುಹವ್ನೆ ಹೈ, ಲೇಕಿನ್ ಅಸ್ಲಿಯಾತ್ ಮೇ ಯುಪಿ ಮೇ ಅಪ್ರಾಧ್ ಕೆ ಆಂಕ್ಡೇ ದಾರವ್ನೇ ಹೈಂ (ಬಿಜೆಪಿ ಗುಲಾಬಿ ಬಣ್ಣವನ್ನು ಚಿತ್ರಿಸುತ್ತಿರಬಹುದು ಆದರೆ ವಾಸ್ತವದಲ್ಲಿ, ಯುಪಿಯಲ್ಲಿನ ಅಪರಾಧ ಅಂಕಿಅಂಶಗಳು ಭಯಾನಕವಾಗಿವೆ" ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
2022ರ ವಿಧಾನಸಭೆ ಚುನಾವಣೆ: ಛತ್ತೀಸ್ಗಢದಲ್ಲಿ 'ಕೈ'ಹಿಡಿದ ವಿವಿಧ ನಾಯಕರು
"ಮುಖ್ಯಮಂತ್ರಿಗಳ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಪರಾಧಿಗಳಿಗೆ ಶರಣಾಗಿದೆ, ಇನ್ನೂ ನೀವು ರಾಜ್ಯದ ಉಳಿದ ಸ್ಥಿತಿಯನ್ನು ಚೆನ್ನಾಗಿ ಊಹಿಸಬಹುದು" ಎಂದು ಕಾಂಗ್ರೆಸ್ ನಾಯಕಿ ಹೇಳಿದರು.
ಇನ್ನೂ ಕಳೆದ ಶುಕ್ರವಾರ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಸಮ್ಮುಖದಲ್ಲಿ ವಿವಿಧ ಪಕ್ಷಗಳ ನಾಯಕರು ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ವಿಕಾಸಶೀಲ್ ಇನ್ಸಾನ್ ಪಕ್ಷದ (ವಿಐಪಿ) ರಾಜ್ಯಾಧ್ಯಕ್ಷ ಬಿಹಾರದ ಮೀನುಗಾರರ ಮುಖಂಡ ಮುಖೇಶ್ ಸಾಹ್ನಿ ಮತ್ತು ಅಲ್ಲಿನ ರಾಜ್ಯ ಸಚಿವ ಚೌಧರಿ ಲೌಟನ್ ರಾಮ್ ನಿಶಾದ್ ಅವರು ಕಾಂಗ್ರೆಸ್ ಸೇರಿದರು. ಮುಖೇಶ್ ಸಾಹ್ನಿ ಮೇಲೆ ಗಂಭೀರ ಆರೋಪ ಮಾಡುವ ಒಂದು ದಿನ ಮೊದಲು ನಿಶಾದ್ ವಿಐಪಿಗೆ ರಾಜೀನಾಮೆ ನೀಡಿದ್ದರು. ಅವರ ಜೊತೆಗೆ, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಅಧ್ಯಕ್ಷ ಸಲ್ಮಾನ್ ಇಮ್ತಿಯಾಜ್ ಕೂಡ ಶುಕ್ರವಾರ ಕಾಂಗ್ರೆಸ್ ಸೇರಿದರು. ಭಾರತೀಯ ಕಿಸಾನ್ ಯೂನಿಯನ್ನ ರಾಷ್ಟ್ರೀಯ ಕಾರ್ಯದರ್ಶಿ ಅನಿಲ್ ದಲಾನಾ ಮತ್ತು ಸುಹೇಲ್ದಿಯೋ ಭಾರತೀಯ ಸಮಾಜ ಪಕ್ಷದ (ಎಸ್ಬಿಎಸ್ಪಿ) ನಾಯಕ ಪುನೀತ್ ಪಾಠಕ್ ಕಾಂಗ್ರೆಸ್ ಸೇರಿದ ಇತರರಲ್ಲಿ ಸೇರಿದ್ದಾರೆ. ಪಾಠಕ್ ಯುಪಿ ಮಾಜಿ ಸಚಿವ ಬಚ್ಚಾ ಪಾಠಕ್ ಅವರ ಪುತ್ರ ಮತ್ತು ಪೂರ್ವ ಯುಪಿಯಿಂದ ಬಂದವರು. ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಾಯಕಿ ಸೀಮಾದೇವಿ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆ ನೀಲಂ ಕೂಡ ಭೂಪೇಶ್ ಬಘೇಲ್ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ, ಛತ್ತೀಸ್ಗಢ ಸಿಎಂ ಯುಪಿ ಕಾಂಗ್ರೆಸ್ನ ಸದಸ್ಯತ್ವ ಅಭಿಯಾನಕ್ಕೂ ಚಾಲನೆ ನೀಡಲಾಗಿದೆ. ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಅಧಿಕ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿಯನ್ನು ಯುಪಿಯಲ್ಲಿ ಕಾಂಗ್ರೆಸ್ ಹೊಂದಿದೆ. ಪಕ್ಷವು ರಾಜ್ಯದಲ್ಲಿ ಏಕ್ ಪರಿವಾರ ಸದಸ್ಯಾ ಚಾರ್ (ಒಂದು ಕುಟುಂಬ ಮತ್ತು ನಾಲ್ಕು ಸದಸ್ಯರು) ಎಂಬ ಘೋಷಣೆಯನ್ನು ಮಾಡಿದೆ. ಇದು ಡಿಸೆಂಬರ್ 10 ರವರೆಗೆ 15 ದಿನಗಳ ಕಾಲ ನಡೆಯಲಿದ್ದು ಈ ಅಭಿಯಾನದಡಿ ಐದು ಸದಸ್ಯರ ತಂಡವನ್ನು ರಚಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ನ್ಯಾಯ ಪಂಚಾಯಿತಿ ಮತ್ತು ವಾರ್ಡ್ಗಳಲ್ಲಿ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಿಕೊಳ್ಳುತ್ತದೆ.
Recommended Video
ಈ ನಡುವೆ ಈಗಾಗಲೇ ''ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 300 ಸ್ಥಾನಗಳನ್ನು ಗೆಲ್ಲುವುದು ಖಚಿತ'' ಎಂದು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೊರೊನಾ ನಿರ್ವಹಣೆ ವಿಚಾರದಲ್ಲಿ ಯೋಗಿ ಆದಿತ್ಯನಾಥ್ ವಿರುದ್ದ ಅಸಮಾಧಾನ ವ್ಯಕ್ತವಾದ ಹಿನ್ನೆಲೆ ಮೇ ಅಂತ್ಯದಲ್ಲೇ ಬಿಜೆಪಿ ಚುನಾವಣಾ ತಯಾರಿ ಆರಂಭಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಅಪರಾಧ ಚಟುವಟಿಕೆಗಳು ಮಿತಿಮೀರಿವೆ ಎಂದು ಆರೋಪಿಸಿದ್ದು, ಯೋಗಿ ಆದಿತ್ಯನಾಥ್ ಸರ್ಕಾರ ಇದನ್ನು ನಿರಾಕರಿಸಿದೆ.