ಉತ್ತರ ಪ್ರದೇಶದಲ್ಲಿ ಹೊತ್ತಿಕೊಂಡ ಮೈತ್ರಿ ಕಿಡಿಯ ಹಿಂದೆ ವಿಮಾನ ಪ್ರಯಾಣದ ಕಥೆ!
ಲಕ್ನೋ, ನವೆಂಬರ್ 2: ಭಾರತದಲ್ಲಿ ಸಾಮಾನ್ಯವಾಗಿ ಚುನಾವಣೆ ವೇಳೆ ರಾಜಕೀಯ ನಾಯಕರ ಪ್ರತಿಯೊಂದು ಭೇಟಿ ಮತ್ತು ಮಾತುಕತೆಗಳು ಸಾಕಷ್ಟು ಚರ್ಚೆ ವಿಷಯವಾಗುತ್ತವೆ. ಅದೇ ರೀತಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಜಯಂತ್ ಚೌಧರಿಯವರ ಭೇಟಿಯು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಆರ್ಎಲ್ಡಿ ಮುಖ್ಯಸ್ಥ, ಕಾಂಗ್ರೆಸ್ ನಾಯಕಿ ಜೊತೆಗೆ ಪ್ರಯಾಣ ಮಾಡಿರುವುದರ ಹಿಂದೆ ಯಾವೆಲ್ಲ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂಬುದರ ಕುರಿತು ಚರ್ಚೆ ಜೋರಾಗಿ ನಡೆಯುತ್ತಿದೆ.
ಭಾನುವಾರ ಗೋರಖ್ ಪುರದಲ್ಲಿ ಕಾಂಗ್ರೆಸ್ ಪ್ರತಿಜ್ಞಾ ರಾಲಿಯಲ್ಲಿ ಭಾಗವಹಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ದೆಹಲಿಗೆ ತೆರಳುವುದಕ್ಕಾಗಿ ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಇದೇ ವೇಳೆ ಲಕ್ನೋ ವಿಮಾನ ನಿಲ್ದಾಣದಿಂದ ಜಯಂತ್ ಚೌಧರಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದರು. ಛತ್ತೀಸ್ಗಢ ಸರ್ಕಾರದ ಚಾರ್ಟರ್ ವಿಮಾನದಲ್ಲಿ ಇಬ್ಬರು ನಾಯಕರು ದೆಹಲಿಗೆ ಪ್ರಯಾಣಿಸಿದ್ದು, ಈ ವೇಳೆ ಸಾಕಷ್ಟು ರಾಜಕೀಯ ವಿಷಯಗಳು ಚರ್ಚೆ ಆಗಿವೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
'ಈ ಚಿತ್ರ ನೋಡಿ ಯೋಗಿಜಿಗೆ ತುಂಬಾ ನೋವಾಗಿದೆ ಎಂದು ತಿಳಿಯಿತು'
ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆ ಸಮಾಜವಾದಿ ಪಕ್ಷದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆಯೇ, ಸೀಟು ಹಂಚಿಕೆ ಮಾಡಿಕೊಳ್ಳುವ ಕುರಿತು ಚರ್ಚಿಸಲಾಗಿದೆಯೇ ಎಂಬ ಪ್ರಶ್ನೆಗೆ ಜಯಂತ್ ಚೌಧರಿ ಖಂಡಿತವಾಗಿಯೂ ಇಲ್ಲ ಎಂಬ ಉತ್ತರ ನೀಡಿದ್ದಾರೆ.
ಅದು ಶಿಷ್ಟಾಚಾರದ ಭೇಟಿ ಎಂದ ಜಯಂತ್ ಚೌಧರಿ
"ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಸೇರಿದಂತೆ ಯಾವುದೇ ಪಕ್ಷದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಭೇಟಿ ಮಾಡಿರಲಿಲ್ಲ. ಇತ್ತೀಚಿನ ಅವರೊಂದಿಗಿನ ಭೇಟಿ ಕೇವಲ ಶಿಷ್ಟಾಚಾರದ ಭೇಟಿಯಾಗಿತ್ತು. ಇಂಥ ಭೇಟಿಗಳು ಹಿಂದಿನ ಕಾಲದಿಂದಲೂ ಪ್ರಚಲಿತದಲ್ಲಿವೆ. ಬಿಜೆಪಿಯು ಇಂಥ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದ್ದು, ರಾಜಕೀಯದಲ್ಲಿ ಪರಸ್ಪರ ನಾಯಕರು ಶತ್ರುಗಳಾಗುವಂತೆ ಮಾಡಿದೆ," ಎಂದು ರಾಷ್ಟ್ರೀಯ ಲೋಕ ದಳ ಮುಖ್ಯಸ್ಥ ಜಯಂತ್ ಚೌಧರಿ ಆರೋಪಿಸಿದ್ದಾರೆ.
ವಿಮಾನ ವಿಳಂಬದಿಂದಾಗಿ ಒಂದೇ ವಿಮಾನದಲ್ಲಿ ಪ್ರಯಾಣ
ಕಳೆದ ಭಾನುವಾರ ಲಕ್ನೋದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯ ಬಗ್ಗೆ ಆರ್ಎಲ್ ಡಿ ಮುಖಂಡರೊಬ್ಬರು ವಿವರಿಸಿದ್ದಾರೆ. "ಮುಖ್ಯಸ್ಥ ಜಯಂತ್ ಚೌಧರಿ ಪ್ರಯಾಣಿಸಬೇಕಿದ್ದ ವಿಮಾನ ಸಂಜೆ 5.30ಕ್ಕೆ ನಿಗದಿಯಾಗಿದ್ದು, 4 ಗಂಟೆ ವೇಳೆಗೆ ಅವರು ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಸಂಜೆ 5 ಗಂಟೆ ಸುಮಾರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಅದೇ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ತಮ್ಮದೇ ವಿಮಾನದಲ್ಲಿ ಪ್ರಯಾಣಿಸುವಂತೆ ಅವರು ಆಹ್ವಾನ ನೀಡಿದರು, ಅದನ್ನು ತಿರಸ್ಕರಿಸಲಾಯಿತು. ಆದರೆ ತಮ್ಮ ವಿಮಾನ ವಿಳಂಬವಾದ ಹಿನ್ನೆಲೆ ಒಟ್ಟಾಗಿ ಅವರ ವಿಮಾನದಲ್ಲಿ ಪ್ರಯಾಣಿಸಬೇಕಾಯಿತು."
"ದೆಹಲಿಗೆ ಹೊರಟಿದ್ದ ತಮ್ಮೊಂದಿಗೆ ಮತ್ತಿಬ್ಬರು ನಾಯಕರು ಇರುವುದಾಗಿ ಪ್ರಿಯಾಂಕಾ ಗಾಂಧಿಯವರಿಗೆ ಜಯಂತ್ ಚೌಧರಿ ಹೇಳಿದರು. ಈ ಬಗ್ಗೆ ಪ್ರಿಯಾಂಕಾ ಗಾಂಧಿಯವರಿಗೆ ತಿಳಿಸಿದಾಗ ತ್ರಿಲೋಕ್ ತ್ಯಾಗಿ ಅವರ ಟಿಕೆಟ್ ಅನ್ನು ರದ್ದುಗೊಳಿಸಿದ ಒಟ್ಟು ಮೂವರು ಆರ್ಎಲ್ ಡಿ ನಾಯಕರನ್ನು ತಮ್ಮೊಂದಿಗೆ ದೆಹಲಿಗೆ ಪ್ರಯಾಣಿಸಲು ಅವಕಾಶ ನೀಡಿದರು. ತಮ್ಮ ವಿಮಾನ ಸಂಜೆ 5.15 ಸುಮಾರಿಗೆ ಲಕ್ನೋ ನಿಲ್ದಾಣದಿಂದ ಹೊರಟಿತು. ಇನ್ನೊಂದೆಡೆ ನಿರೀಕ್ಷಣಾ ಕೊಠಡಿಯಲ್ಲಿ ಅಖಿಲೇಶ್ ಯಾದವ್ ಕಾದು ಕುಳಿತಿರುವುದನ್ನು ನಾನು ಕಂಡೆನು, ಆದರೆ ಈ ಮೂವರು ಒಟ್ಟಾಗಿ ಚರ್ಚಿಸಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ನಾನು ಹೇಳುವುದಿಲ್ಲ, ಎಂದು ಆರ್ಎಲ್ಡಿ ಮುಖಂಡರೊಬ್ಬರು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಆರ್ಎಲ್ಡಿ ನಡುವೆ ಒಪ್ಪಂದ
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ ರಾಷ್ಟ್ರೀಯ ಲೋಕ ದಳ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಆರ್ಎಲ್ಡಿ ಮುಖ್ಯಸ್ಥ ಜಯಂತ್ ಚೌಧರಿ ಭಾನುವಾರ ಸುಳಿವು ನೀಡಿದ್ದರು. "ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗುತ್ತಿದೆ. ಎಸ್ಪಿ ಮತ್ತು ಆರ್ಎಲ್ಡಿ ನಡುವೆ ಸೈದ್ಧಾಂತಿಕ ಹೊಂದಾಣಿಕೆಯಿದೆ. ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಎರಡು ಕಡೆಯ ನಾಯಕರು ಒಟ್ಟಾಗಿ ಕುಳಿತು ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ, ನಾವು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ," ಎಂದು ಹೇಳಿದ್ದರು.
ಸೀಟು ಹಂಚಿಕೆ ಬಗ್ಗೆ ಆರ್ಎಲ್ಡಿ ಮತ್ತು ಎಸ್ಪಿ ಚರ್ಚೆ
"ರಾಷ್ಟ್ರೀಯ ಲೋಕ ದಳ ಪಕ್ಷದೊಂದಿಗಿನ ನಮ್ಮ ಮೈತ್ರಿ ಮಾತುಕತೆಯು ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ," ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದರು. ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಮಾಜವಾದಿ ಪಕ್ಷದ ಜೊತೆಗೆ ರಾಷ್ಟ್ರೀಯ ಲೋಕ ದಳ ಪಕ್ಷವೂ ವಿರೋಧ ವ್ಯಕ್ತಪಡಿಸಿವೆ. ರೈತರ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿವೆ.
ಉತ್ತರ ಪ್ರದೇಶದಲ್ಲಿ ಹಿಂದಿನ ಚುನಾವಣಾ ಫಲಿತಾಂಶ
ಕಳೆದ 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಕಾಂಗ್ರೆಸ್ 114 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಸಮಾಜವಾದಿ ಪಕ್ಷವು 311 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿತ್ತು. ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಇನ್ನೊಂದು ಕಡೆ 277 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದ ಆರ್ಎಲ್ಡಿ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆಲವು ಸಾಧಿಸಿತ್ತು.
ರಾಜ್ಯದ ಒಟ್ಟು 403 ಸ್ಥಾನಗಳ ಪೈಕಿ ಬಿಜೆಪಿ 312 ರಲ್ಲಿ ಗೆಲುವು ದಾಖಲಿಸಿತ್ತು. ಈ ಪಕ್ಷ ಶೇ. 39.67ರಷ್ಟು ಮತವನ್ನು ಪಡೆದುಕೊಂಡಿತ್ತು. ಅಂದು ಸಮಾಜವಾದಿ ಪಕ್ಷವು 47 ಸ್ಥಾನಗಳನ್ನು, ಬಹುಜನ ಸಮಾಜ ಪಕ್ಷ (BSP) 19 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.