20,000 ಉದ್ಯೋಗ ಸೃಷ್ಟಿ ಜೊತೆ ರೈತರ ಸಾಲಮನ್ನಾ: ಪ್ರಿಯಾಂಕಾ ಗಾಂಧಿ ಘೋಷಣೆ
ಲಕ್ನೋ, ಅಕ್ಟೋಬರ್ 23: ಉತ್ತರ ಪ್ರದೇಶದಲ್ಲಿ ಮುಂಬರುವ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರತಿಜ್ಞ ಯಾತ್ರೆಗೆ ಚಾಲನೆ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಮತದಾರರಿಗೆ ಭರ್ಜರ್ ಗಿಫ್ಟ್ ಕೊಡುವುದಾಗಿ ಘೋಷಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಒಟ್ಟು ಮೂರು ಮಾರ್ಗಗಳಲ್ಲಿ ಕಾಂಗ್ರೆಸ್ ಪ್ರತಿಜ್ಞಾ ಯಾತ್ರೆ ನಡೆಯಲಿದೆ. ಶನಿವಾರ ಬಾರಾಬಂಕಿ ಪ್ರದೇಶದಲ್ಲಿ ಮೊದಲ ಪ್ರತಿಜ್ಞಾ ಯಾತ್ರೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶನಿವಾರ ಚಾಲನೆ ನೀಡಿದರು. ಅಕ್ಟೋಬರ್ 23ರಿಂದ ನವೆಂಬರ್ 1ರವರೆಗೂ ರಾಜ್ಯದ ಮೂರು ಮಾರ್ಗಗಳಲ್ಲಿ ಈ ಪ್ರತಿಜ್ಞಾ ಯಾತ್ರೆ ನಡೆಯಲಿದೆ.
'ಈ ಚಿತ್ರ ನೋಡಿ ಯೋಗಿಜಿಗೆ ತುಂಬಾ ನೋವಾಗಿದೆ ಎಂದು ತಿಳಿಯಿತು'
ಬಾರಾಬಂಕಿಯಿಂದ ಬುಂದೇಲ್ಖಂಡ್, ಸಹರಾನ್ಪುರದಿಂದ ಮಥುರಾ ಮತ್ತು ವಾರಣಾಸಿಯಿಂದ ರಾಯ್ ಬರೇಲಿವರೆಗೆ ನಡೆಯಲಿರುವ ಈ ಯಾತ್ರೆಯಲ್ಲಿ ಹೊಸ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಅಭಿಯಾನ ನಡೆಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಈ ಮಧ್ಯೆ ಬಾರಾಬಂಕಿಯಲ್ಲಿ ಪ್ರತಿಜ್ಞಾ ಯಾತ್ರೆ ಆರಂಭಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ಭರ್ಜರಿ ಘೋಷಣೆಗಳನ್ನು ಹೊರಡಿಸಿದ್ದಾರೆ. ಈ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಗೆದ್ದರೆ ಭರ್ಜರಿ ಕೊಡುಗೆ
ಬಾರಾಬಂಕಿಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೃಷಿ ಸಾಲ ಮನ್ನಾ, 20 ಲಕ್ಷ ಜನರಿಗೆ ಸರ್ಕಾರಿ ಉದ್ಯೋಗ, ಸಾಂಕ್ರಾಮಿಕ ಸಮಯದಲ್ಲಿನ ವಿದ್ಯುತ್ ಬಿಲ್ ಮನ್ನಾ ಮತ್ತು ಕೋವಿಡ್ -19 ಸಂತ್ರಸ್ತರಿಗೆ ರೂ 25,000 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಘೋಷಿಸಿದ ಪ್ರಮುಖ ಕೊಡುಗೆಗಳನ್ನು ನೋಡಿ:
* 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ಫೋನ್ಗಳನ್ನು ಮತ್ತು ಪದವಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟಿ ನೀಡುವುದು
* ರೈತರ ಎಲ್ಲಾ ಸಾಲ ಮನ್ನಾ ಮಾಡುತ್ತೇವೆ. ಈ ಹಿಂದೆ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿ ತೋರಿಸಿದ್ದೇವೆ
* ಛತ್ತೀಸಗಡದಂತೆ ಉತ್ತರ ಪ್ರದೇಶದಲ್ಲೂ ಗೋಧಿ ಮತ್ತು ಭತ್ತದ ಬೆಲೆಯನ್ನು 2500 ರೂಪಾಯಿಗೆ ನಿಗದಿಪಡಿಸಲಾಗುವುದು
* ಕಬ್ಬಿಗೆ ಪ್ರತಿ ಕ್ವಿಂಟಾಲ್ ಗೆ 400 ರೂಪಾಯಿ ಬೆಂಬಲ ಬೆಲೆ ನೀಡುವುದು
* ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿನ ವಿದ್ಯುತ್ ಬಿಲ್ ಅನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ. ಪ್ರತಿಯೊಬ್ಬರ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡುತ್ತೇವೆ.
* ಕೊರೊನಾವೈರಸ್ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳಿಗೆ 25,000 ರೂಪಾಯಿ ಪರಿಹಾರವನ್ನು ನೀಡುತ್ತೇವೆ
* ರಾಜ್ಯದಲ್ಲಿ 20 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವುದರ ಜೊತೆಗೆ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವುದು
ಕೇಂದ್ರ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಉತ್ತರ ಪ್ರದೇಶ ಲಖೀಂಪುರ್ ಖೇರಿ ಹಿಂಸಾಚಾರ ಘಟನೆಯನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಸಚಿವರ ಪುತ್ರ ರೈತರನ್ನು ಕೊಂದಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ "ಈ ರೈತರಿಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದೆ, ಆತನನ್ನು (ಆಶಿಶ್ ಮಿಶ್ರಾ) ಬಂಧಿಸುವಲ್ಲಿ ಎಷ್ಟು ವಿಳಂಬ ಧೋರಣೆ ತೋರಲಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಅದಾಗ್ಯೂ, ಅಜಯ್ ಮಿಶ್ರಾ ಸಂಪುಟದಲ್ಲೇ ಇದ್ದಾರೆ," ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ಟಿಕೆಟ್ ಘೋಷಿಸುವಲ್ಲಿ ಮಹಿಳೆಯರಿಗೆ ಶೇ.40ರಷ್ಟು ಮೀಸಲಾತಿ
ಮುಂಬರುವ ವರ್ಷದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಶೇ.40ರಷ್ಟು ಟಿಕೆಟ್ ಅನ್ನು ಮಹಿಳೆಯರಿಗೆ ನೀಡುವುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಈಗಾಗಲೇ ಘೋಷಿಸಿದ್ದಾರೆ. "ದೇಶದ ರಾಜಕೀಯದಲ್ಲಿ ಮಹಿಳೆಯರು ಪೂರ್ಣ ಪ್ರಮಾಣದ ಪಾಲುದಾರರಾಗಬೇಕೆಂದು ನಾವು ಬಯಸುತ್ತೇವೆ" ಎಂದು ಹೇಳಿದ್ದರು. "ನಾನು ಇಂದು ನಮ್ಮ ಮೊದಲ ಭರವಸೆಯ ಬಗ್ಗೆ ಮಾತನಾಡಲಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಶೇಕಡಾ 40 ರಷ್ಟು ಟಿಕೆಟ್ ನೀಡಲಿದೆ ಎಂದು ನಾವು ನಿರ್ಧರಿಸಿದ್ದೇವೆ" ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
"ಮುಂಬರುವ ನವೆಂಬರ್ 15ರವರೆಗೆ ಮಹಿಳೆಯರಿಗೆ ಅವಕಾಶವಿರುತ್ತದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವ ಯಾವುದೇ ಮಹಿಳೆಯರು ಕಾಂಗ್ರೆಸ್ ಪಕ್ಷದ ಕಚೇರಿಗೆ ಬಂದು ಭೇಟಿ ಮಾಡಬಹುದು ಎಂದು ಪ್ರಿಯಾಂಕಾ ಗಾಂಧಿ ಆಹ್ವಾನ ನೀಡಿದ್ದಾರೆ. ಮಹಿಳಾ ನಾಯಕರಿಗೆ ಅವರ ಸಾಮರ್ಥ್ಯ ಮತ್ತು ಕ್ಷೇತ್ರದಲ್ಲಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಅವಕಾಶಗಳನ್ನು ನೀಡಲಾಗುವುದು," ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಹಿಂದಿನ ಚುನಾವಣಾ ಫಲಿತಾಂಶ
ಕಳೆದ 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ ಬಿಜೆಪಿ 312 ರಲ್ಲಿ ಗೆಲುವು ದಾಖಲಿಸಿತ್ತು. ಈ ಪಕ್ಷ ಶೇ. 39.67ರಷ್ಟು ಮತವನ್ನು ಪಡೆದುಕೊಂಡಿತ್ತು. ಅಂದು ಸಮಾಜವಾದಿ ಪಕ್ಷವು 47 ಸ್ಥಾನಗಳನ್ನು, ಬಹುಜನ ಸಮಾಜ ಪಕ್ಷ (BSP) 19 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.