Video: ಯುಪಿ ಒಂದೇ ಬೀದಿಯಲ್ಲಿ ಪ್ರಿಯಾಂಕಾ-ಅಖಿಲೇಶ್ ಪ್ರಚಾರ; ಮುಂದೇನಾಯ್ತು?
ಲಕ್ನೋ, ಫೆಬ್ರವರಿ 3: ಉತ್ತರ ಪ್ರದೇಶದ ಬುಲಂದ್ಶಹರ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮುಖಾಮುಖಿಯಾಗಿದ್ದಾರೆ.
ಗುರುವಾರ ಇಬ್ಬರೂ ನಾಯಕರು ಪ್ರಚಾರದ ಸಂದರ್ಭದಲ್ಲಿ ಎದುರು-ಬದುರಾಗಿದ್ದು ಪರಸ್ಪರ ನಗುನಗುತ್ತಾ ಕೈ ಬೀಸಿದ್ದಾರೆ. ಈ ವೇಳೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರು ಬಾವುಟ ತೋರಿಸುತ್ತಾ ಘೋಷಣೆ ಕೂಗಿದ ವಿಡಿಯೋ ಸಾಕಷ್ಟು ಸದ್ದು ಮಾಡಿದೆ.
#WATCH | Bulandshahr | Congress general secretary Priyanka Gandhi Vadra and SP chief Akhilesh Yadav-RLD chief Jayant Chaudhary wave at and greet each other after they came face to face during their respective election campaigns for #UttarPradeshElection2022 pic.twitter.com/OWV3IlKT0v
— ANI UP/Uttarakhand (@ANINewsUP) February 3, 2022
ವೀಡಿಯೋದಲ್ಲಿ, ಪ್ರಿಯಾಂಕಾ ಗಾಂಧಿಯವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರತ್ತ ನಗುತ್ತಾ ಕೈಬೀಸುತ್ತಿರುವುದು ಕಾಣಿಸುತ್ತದೆ. ಇದಕ್ಕೆ ಪ್ರತಿಯಾಗಿ "ರಥ" ಅಥವಾ ಪ್ರಚಾರದ ಬಸ್ನಲ್ಲಿ ತಮ್ಮ ಮಿತ್ರ ರಾಷ್ಟ್ರೀಯ ಲೋಕದಳ (ಆರ್ಎಲ್ಡಿ) ಮುಖ್ಯಸ್ಥ ಜಯಂತ್ ಚೌಧರಿ ನಮಸ್ಕರಿಸಿರುವುದು ಗೋಚರಿಸುತ್ತದೆ.
ಬಾವುಟ ಪ್ರದರ್ಶಿಸಿ ಜಯಘೋಷ:
ಪಕ್ಷದ ಮುಖಂಡರು ನಗುತ್ತಾ ಅಭಿನಂದಿಸುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ನ ಕಾರ್ಯಕರ್ತರು ಮತ್ತು ಬೆಂಬಲಿಗರು ಪರಸ್ಪರ ತಮ್ಮ ಧ್ವಜಗಳನ್ನು ಹಾರಿಸುತ್ತಾ ಹುರಿದುಂಬಿಸುತ್ತಿರುವಂತೆ ಕಾಣಿಸಿತು.
2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜೊತೆಗೆ ಕಾಂಗ್ರೆಸ್ ಯಾವುದೇ ರೀತಿ ಮೈತ್ರಿ ಮಾಡಿಕೊಂಡಿಲ್ಲ. ಹಾಗಿದ್ದರೂ ಎರಡೂ ಪಕ್ಷಗಳದ್ದೂ ಒಂದೇ ಧ್ಯೇಯವಾಗಿದೆ. ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಸೋಲಿರುವುದು, 2024 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುವುದನ್ನು ಪ್ರತಿಪಕ್ಷಗಳು ಪ್ರಮುಖ ಸವಾಲಾಗಿ ಸ್ವೀಕರಿಸಿವೆ.
ಅಖಿಲೇಶ್ ಮತ್ತು ಪ್ರಿಯಾಂಕಾ ಸೌಹಾರ್ದತೆ:
ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಉಭಯ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪವನ್ನು ಮಾಡಿಕೊಂಡಿದ್ದಾರೆ. ಅದಾಗ್ಯೂ, ಅಖಿಲೇಶ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿ ಅವರು ಹೆಚ್ಚು ಸೌಹಾರ್ದಯುತವಾಗಿದ್ದಾರೆ ಎಂಬುದನ್ನು ಈ ಹಿಂದಿನ ಹಲವು ಘಟನೆಗಳು ನೆನಪಿಸುತ್ತವೆ.
ಕಳೆದ 2021ರ ಅಕ್ಟೋಬರ್ನಲ್ಲಿ, ದೆಹಲಿ-ಲಖನೌ ವಿಮಾನದಲ್ಲಿ ಆಕಸ್ಮಿಕ ಭೇಟಿಯೊಂದರಲ್ಲಿ ಇಬ್ಬರು ಪರಸ್ಪರ ಶುಭಾಶಯ ಕೋರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಆಗಿತ್ತು. ಮುಂಬರುವ ಯುಪಿ ಚುನಾವಣೆ ಹಿನ್ನೆಲೆ ಈ ಇಬ್ಬರು ನಾಯಕರು ಭೇಟಿ ಆಗಿದ್ದಾರೆ ಎನ್ನುವಂತೆ ಅಂದು ವಿಶ್ಲೇಷಣೆ ಮಾಡಲಾಗಿತ್ತು.
ಕಾಂಗ್ರೆಸ್ ಜೊತೆಗೆ ಮೈತ್ರಿಯಿಲ್ಲ ಎಂದು ಘೋಷಣೆ:
ಉತ್ತರ ಪ್ರದೇಶದಲ್ಲಿ ಮತದಾರರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಹಿನ್ನಡೆಯನ್ನು ಗಮನದಲ್ಲಿ ಇಟ್ಟುಕೊಂಡು 2022ರಲ್ಲಿ ಕಾಂಗ್ರೆಸ್ ಜೊತೆಗೆ ಸಮಾಜವಾದಿ ಪಕ್ಷವು ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅಖಿಲೇಶ್ ಯಾದವ್ ಘೋಷಿಸಿದ್ದರು. ಈ ಹಿಂದೆ 2017ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 100 ಸ್ಥಾನಗಳನ್ನು ಬಿಟ್ಟುಕೊಂಡಿದ್ದೆವು. ಆದರೆ ಕಾಂಗ್ರೆಸ್ ಅನ್ನು ರಾಜ್ಯದ ಜನರು ತಿರಸ್ಕರಿಸಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದರು.
ಉತ್ತರ ಪ್ರದೇಶದಲ್ಲಿ ಏಳು ಹಂತಗಳ ವಿಧಾನಸಭೆ ಚುನಾವಣೆ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಈ ಹಿಂದೆ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.