ಅಯೋಧ್ಯೆ ಭೂಮಿ ಪೂಜೆ: ಪೂಜಾರಿ, 16 ಮಂದಿ ಪೊಲೀಸರಿಗೆ ಕೊರೊನಾ ಸೋಂಕು
ಅಯೋಧ್ಯೆ, ಜುಲೈ 30: ಅಯೋಧ್ಯೆ ರಾಮಮಂದಿರದ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಬೇಕಿದ್ದ ಪೂಜಾರಿ ಹಾಗೂ 16 ಮಂದಿ ಭದ್ರತಾ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ರಾಮ ಮಂದಿರದ ಭೂಮಿ ಪೂಜೆಗೆ ಭಾರತದ ಪವಿತ್ರ ಸ್ಥಳಗಳಿಂದ ಮಣ್ಣು ಮತ್ತು ನೀರನ್ನು ಸಂಗ್ರಹಿಸಲಾಗುತ್ತಿದೆ. ಪವಿತ್ರ ಸ್ಥಳಗಳಿಂದ ತಂದ ನೀರು ಮತ್ತು ಮಣ್ಣನ್ನು ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುವುದು.
ಮನೆಯಲ್ಲೇ ಕುಳಿತು ರಾಮ ಮಂದಿರ ಶಂಕುಸ್ಥಾಪನೆ ನೋಡಿ
ಈಗಾಗಲೇ ಭೂಮಿ ಪೂಜೆಗಾಗಿ ಅಯೋಧ್ಯೆಯ ಬೀದಿ ಬೀದಿಯೂ ಅಲಂಕರಿಸಲಾಗುತ್ತಿದೆ.ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಲಿದೆ.
ಆದರೆ ಇದೀಗ ಪೂಜಾರಿ ಮತ್ತು ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ನರೇಂದ್ರ ಮೋದಿ ಸೇರಿ ಒಟ್ಟು 50 ವಿಐಪಿಗಳು ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ.
ಎಲ್ಲಾ ಕೊರೊನಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತದೆ.
ಐತಿಹಾಸಿಕ ರಾಮ ಮಂದಿರ ನಿರ್ಮಾಣ ಕಾರ್ಯಾರಂಭಕ್ಕೆ ಪೌರಾಣಿಕ ನಗರ ಅಯೋಧ್ಯೆ ಶೃಂಗಾರಗೊಳ್ಳತೊಡಗಿದೆ. ಭವ್ಯ ಮಂದಿರ ನಿರ್ಮಾಣಕ್ಕೆ ಪೂರಕವಾಗಿ ಹತ್ತಾರು ಕಾಮಗಾರಿಗಳು ಇಲ್ಲಿ ಆರಂಭಗೊಂಡಿವೆ. ವಿಶೇಷವೆಂದರೆ ಇಡೀ ನಗರ ಕೇಸರಿಮಯವಾಗಿದ್ದು, ನಗರದ ಪ್ರಮುಖ ರಸ್ತೆಗಳು ಹಾಗೂ ಕಟ್ಟಡಗಳನ್ನು ಕೇಸರಿ ಬಣ್ಣದಲ್ಲಿ ಕಂಗೊಳಿಸುವಂತೆ ಮಾಡಲಾಗಿದೆ.
ನಗರದ ಬಹುತೇಕ ಕಟ್ಟಡಗಳು ಕೇಸರಿ ಬಣ್ಣದಲ್ಲಿ ಮಿಂದೆದ್ದಿದ್ದು, ಕಟ್ಟಡಗಳ ಮೇಲೆ ದೇವಾನು ದೇವತೆಗಳ ವರ್ಣಚಿತ್ರ ಬಿಡಿಸಲಾಗಿದೆ. ಪ್ರಮುಖವಾಗಿ ಪ್ರಭು ಶ್ರೀರಾಮ, ಹನುಮಂತ, ಶಿವ, ಗಣೇಶ ಸೇರಿದಂತೆ ಪ್ರಮುಖ ದೇವತೆಗಳು ಎಲ್ಲಾ ಕಟ್ಟಡಗಳ ಮೇಲೆ ರಾರಾಜಿಸುತ್ತಿದ್ದಾರೆ.