'ರಾಷ್ಟ್ರಪತಿ ಯುಪಿ ಪ್ರವಾಸ ಬಿಜೆಪಿ ಹಿರಿಯ ನಾಯಕರ ಭೇಟಿಯಂತೆ ಭಾಸ': ಎಸ್ಪಿ ಟೀಕೆ
ಲಕ್ನೋ, ಆಗಸ್ಟ್ 26: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಉತ್ತರ ಪ್ರದೇಶದಲ್ಲಿ ನಾಲ್ಕು ದಿನಗಳ ಕಾಲದ ಪ್ರವಾಸವನ್ನು ಆರಂಭ ಮಾಡಿದ್ದಾರೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಉತ್ತರ ಪ್ರದೇಶ ಭೇಟಿಯ ವಿಚಾರದಲ್ಲಿ ಸಮಾಜವಾದಿ ಪಕ್ಷವು ಬಿಜೆಪಿಯನ್ನು ಟೀಕೆ ಮಾಡಿದೆ. ''ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಉತ್ತರ ಪ್ರದೇಶದ ಭೇಟಿಯು ಹಿರಿಯ ಬಿಜೆಪಿ ನಾಯಕರ ಭೇಟಿಯಂತಿದೆ,'' ಎಂದು ಸಮಾಜವಾದಿ ಪಕ್ಷ ಹೇಳಿದೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತನ್ನ ತವರೂರಿಗೆ ಎರಡೇ ತಿಂಗಳಿನಲ್ಲಿ ಮಾಡುತ್ತಿರುವ ಎರಡನೇ ಭೇಟಿಯಾಗಿದೆ. ಕಳೆದ ಜೂನ್ ತಿಂಗಳಿನಲ್ಲಿ ಮೊದಲ ಬಾರಿ ತನ್ನ ತವರೂರು ಕಾನ್ಪುರ ಹಾಗೂ ಉತ್ತರ ಪ್ರದೇಶ ರಾಜ್ಯ ರಾಜಧಾನಿ ಲಕ್ನೋಗೆ ರೈಲಿನ ಮೂಲಕ ತೆರಳಿ ಭೇಟಿ ನೀಡಿದ್ದರು.
ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜಕ್ಕೆ ಅವಮಾನ ದುರದೃಷ್ಟಕರ: ರಾಷ್ಟ್ರಪತಿ ಕೋವಿಂದ್
ಲಕ್ನೋದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದ ಹಿನ್ನೆಲೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಉತ್ತರ ಪ್ರದೇಶಕ್ಕೆ ನಾಲ್ಕು ದಿನಗಳ ಪ್ರವಾಸಕ್ಕೆ ಹೊರಟ್ಟಿದ್ದಾರೆ. ಆದರೆ ಈ ಭೇಟಿಯ ಸಂದರ್ಭದಲ್ಲಿ ಪ್ರಮುಖ ಭೇಟಿಯು ಅಯೋಧ್ಯೆ ಭೇಟಿಯಾಗಲಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಭಾನುವಾರ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿರುವ ಅಯೋಧ್ಯೆಗೆ ರೈಲಿನ ಪ್ರಯಾಣ ನಡೆಸುವ ಮೂಲಕ ಭೇಟಿ ನೀಡಲಿದ್ದಾರೆ.
"ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉತ್ತರ ಪ್ರದೇಶ ಸರ್ಕಾರದ ಸಂಸ್ಕೃತಿ ಹಾಗೂ ಪ್ರವಾಸೋಧ್ಯಮ ಇಲಾಖೆಯ ಹಲವಾರು ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲಿದ್ದಾರೆ. ತುಳಸಿ ಸ್ಮಾರಕ ಭವನದ ನವೀಕರಣಕ್ಕೂ ಚಾಲನೆ ನೀಡಲಿದ್ದಾರೆ. ಇನ್ನು ನಗರದ ಬಸ್ ನಿಲ್ದಾಣದ ಹಾಗೂ ಅಯೋಧ್ಯ ಧಾಮ ಅಭಿವೃದ್ದಿ ಕಾರ್ಯಕ್ಕೂ ಚಾಲನೆ ನೀಡಲಿದ್ದಾರೆ. ಕೊನೆಯದಾಗಿ ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಹಾಗೂ ಪೂಜೆ ಸಲ್ಲಿಸಿದ್ದಾರೆ," ಎಂದು ರಾಷ್ಟ್ರಪತಿ ಭವನವು ಮಾಹಿತಿ ನೀಡಿದೆ.
ಆದರೆ ಈ ನಡುವೆ ರಾಷ್ಟ್ರಪತಿಯ ನಾಲ್ಕು ದಿನಗಳ ಉತ್ತರ ಪ್ರದೇಶ ಭೇಟಿಯನ್ನು ಸಮಾಜವಾದಿ ಪಕ್ಷದ ನಾಯಕರು ಟೀಕೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಯೋಧ್ಯೆಯ ಸಮಾಜವಾದಿ ಪಕ್ಷದ ಹಿರಿಯ ನಾಯಕ, ಅಖಿಲೇಶ್ ಯಾದವ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಮಾಜಿ ಸಚಿವ ಪವನ್ ಪಾಂಡೆ, "ಬಿಜೆಪಿಯು ರಾಷ್ಟ್ರಪತಿ ಉತ್ತರ ಪ್ರದೇಶ ಭೇಟಿಯನ್ನು ರಾಜಕೀಕರಣ ಮಾಡುತ್ತಿದೆ," ಎಂದು ಆರೋಪ ಮಾಡಿದ್ದಾರೆ.
ಕೃಷಿ ಕಾಯ್ದೆಗಳ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತು
"ರಾಷ್ಟ್ರಪತಿಗಳು ಅವರಿಗೆ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಲು ಸ್ವತಂತ್ಯ್ರರು. ಆದರೆ ಬಿಜೆಪಿಯು ರಾಷ್ಟ್ರಪತಿ ಭೇಟಿಯನ್ನು ರಾಜಕೀಕರಣ ಮಾಡುವ ಪ್ರಯತ್ನ ಮಾಡುತ್ತಿದೆ. ನನಗೆ ಈ ರಾಷ್ಟ್ರಪತಿ ಭೇಟಿಯು ದೇಶದ ರಾಷ್ಟ್ರಪತಿ ನಿರ್ಧಾರ ಮಾಡಿದ ಭೇಟಿಯಂತೆ ನನಗೆ ಕಾಣುತ್ತಿಲ್ಲ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಆದರೆ ಇದು ಬಿಜೆಪಿಯ ಹಿರಿಯ ಮುಖಂಡರು ಉತ್ತರ ಪ್ರದೇಶಕ್ಕೆ ನೀಡುತ್ತಿರುವ ಭೇಟಿಯಂತೆ ಭಾಸವಾಗುತ್ತಿದೆ. 2022 ಚುನಾವಣೆಯ ತನ್ನ ತಂತ್ರಗಾರಿಕೆಯಲ್ಲಿ ಬಿಜೆಪಿಯು ದೇಶದ ರಾಷ್ಟ್ರಪತಿ ಸ್ಥಾನದಿಂದಲ್ಲೂ ಲಾಭ ಪಡೆಯುವುದನ್ನು ಬಿಡುವುದಿಲ್ಲ ಎಂಬುವುದು ಕಂಡು ಬಂದಿದೆ," ಎಂದು ಸಮಾಜವಾದಿ ಪಕ್ಷದ ನಾಯಕ ಪವನ್ ಪಾಂಡೆ ಹೇಳಿದ್ದಾರೆ.
ಆದರೆ ಬಿಜೆಪಿ ಮಾತ್ರ ಈ ಆರೋಪವನ್ನು ಅಲ್ಲಗಳೆದಿದೆ. "ಈ ರೀತಿಯಾಗಿ ಎಲ್ಲಾ ವಿಚಾರದಲ್ಲೂ ಆರೋಪವನ್ನು ಮಾಡುವುದು ಪ್ರತಿಪಕ್ಷಗಳ ಕೆಲಸವಾಗಿ ಬಿಟ್ಟಿದೆ. ಆ ಕೆಲಸವನ್ನು ಪ್ರತಿ ಪಕ್ಷಗಳು ಮಾಡಿಕೊಂಡಿರಲಿ. ಆದರೆ ಆ ರೀತಿ ಯಾವುದೇ ವಿಷಯವಿಲ್ಲ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಗೋರಕ್ ಪುರ ಹಾಗೂ ಅಯೋಧ್ಯೆಗೆ ಹೋಗುತ್ತಿದ್ದಾರೆ. ಈ ಮೊದಲೇ ಕಾನ್ಪುರಕ್ಕೆ ಹೋಗಿದ್ದರು. ರಾಮ್ ನಾಥ್ ಕೋವಿಂದ್ ರಾಷ್ಟ್ರಪತಿ. ದೇಶದ ಎಲ್ಲಿ ಬೇಕಾದರೂ ಓಡಾಡುವ ಹಕ್ಕು ಅವರಿಗೆ ಇದೆ," ಎಂದು ಫೈಜಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಲಲ್ಲು ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
(ಒನ್ ಇಂಡಿಯಾ ಸುದ್ದಿ)