ಬೃಹತ್ ಕುಂಭಮೇಳದಲ್ಲಿ ಸಾಧುಗಳ ಪುಣ್ಯ ಸ್ನಾನ: ಲಕ್ಷಾಂತರ ಭಕ್ತರು ಭಾಗಿ
ಪ್ರಯಾಗ್ರಾಜ್, ಜನವರಿ 15: ಜಗತ್ತಿನ ಅತ್ಯಂತ ಬೃಹತ್ ಧಾರ್ಮಿಕ ಸಮಾಗಮದ ಕಾರ್ಯಕ್ರಮದಲ್ಲಿ ಒಂದಾದ ಕುಂಭಮೇಳಕ್ಕೆ ಮಂಗಳವಾರ ಚಾಲನೆ ದೊರೆತಿದೆ. ಮಾರ್ಚ್ 4ರವರೆಗೂ ನಡೆಯಲಿರುವ ಕುಂಭಮೇಳದಲ್ಲಿ ಮೊದಲ ದಿನವೇ ಲಕ್ಷಾಂತರ ಜನರು ಪಾಲ್ಗೊಂಡಿದ್ದಾರೆ.
ಮೊದಲ 'ಶಹಿ ಸ್ನಾನ'ಕ್ಕಾಗಿ ಗಂಗಾನದಿಯಲ್ಲಿ ಮುಳುಗೇಳುವ ಪವಿತ್ರ ಕಾರ್ಯಕ್ಕಾಗಿ ಲಕ್ಷಾಂತರ ಸಾಧು ಸನ್ಯಾಸಿಗಳು ಸಂಗಮ್ ಘಾಟ್ನತ್ತ ತೆರಳುತ್ತಿದ್ದಾರೆ.
ಕೇಸರಿಯ ಮಾತು! ವಿಶ್ವವಿಖ್ಯಾತ ಕುಂಭಮೇಳಕ್ಕೆ ಕ್ಷಣಗಣನೆ!
ಆರು ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳದಲ್ಲಿ ಮುಂದಿನ 50 ದಿನಗಳಲ್ಲಿ 12 ಕೋಟಿಗೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಮಕರ ಸಂಕ್ರಾಂತಿಯ ದಿನವಾದ ಜನವರಿ 15ರಂದು ಮೊದಲ ಸ್ನಾನದ ದಿನ (ಶಹಿ ಸ್ನಾನ್) ಎಂದು ಆಚರಿಸಲಾಗುತ್ತದೆ. ಮಾರ್ಚ್ 4ರ ಶಿವರಾತ್ರಿಯಂದು ಕೊನೆಯ ಸ್ನಾನದ ದಿನವಾಗಿರುತ್ತದೆ. ಈಗಾಗಲೇ 32 ಲಕ್ಷ ಮಂದಿ ಪವಿತ್ರ ಸ್ನಾನದಲ್ಲಿ ಭಾಗವಹಿಸಿದ್ದಾರೆ ಎಂದು ಅಂದಾಜಿಸಲಾಗಿದೆ.
ಸಪ್ತ ಶೈವ, ತ್ರೈವೈಷ್ಣವ, ದ್ವ ಉದಾಸಿನ ಮತ್ತು ಒಬ್ಬ ಸಿಖ್ಖರನ್ನು ಒಳಗೊಂಡ 13 ಅಖಾರಾಗಳ ಸಾಧುಗಳು ಮೊದಲ ದಿನದ ಶಹಿ ಸ್ನಾನದಲ್ಲಿ ಎಲ್ಲರಿಗಿಂತ ಮೊದಲು ಪವಿತ್ರ ಸ್ನಾನದಲ್ಲಿ ಭಾಗವಹಿಸಲಿದ್ದಾರೆ.
ಈ ಮಹಾ ಕಾರ್ಯಕ್ರಮಕ್ಕಾಗಿ 32 ಹೆಕ್ಟೇರ್ ಪ್ರದೇಶದಲ್ಲಿ 1.2 ಲಕ್ಷ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 20 ಸಾವಿರ ನಿರ್ಮಾಣ ಕೆಲಸಗಾರರು ಮತ್ತು ಅಷ್ಟೇ ಸಂಖ್ಯೆಯ ಸ್ವಚ್ಛತಾ ಕೆಲಸಗಾರರನ್ನು ನಿಯೋಜಿಸಲಾಗಿದೆ.
ಸ್ವಚ್ಛ,ಸುರಕ್ಷಿತ ಕುಂಭ ಮೇಳ ಸಿದ್ಧತೆ ಖುದ್ದು ಪರಿಶೀಲಿಸಿದ ಆದಿತ್ಯನಾಥ್
ಕುಂಭಮೇಳಕ್ಕೆ ಬರುವವರನ್ನು ವರ್ಣರಂಜಿತವಾಗಿ ಸ್ವಾಗತಿಸಲು 40 ಸಾವಿರ ಎಲ್ಇಡಿ ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ.
ಭದ್ರತೆಗಾಗಿ 25 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರಯಾಗರಾಜ್ ಎಲ್ಲೆಡೆ 1,100 ಎಚ್ಡಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 500 ಕ್ಯಾಮೆರಾಗಳನ್ನು ಕುಂಭ್ ಜಿಲ್ಲೆಯಲ್ಲಿ ಅಳವಡಿಸಲಾಗಿದೆ.
ಸೋಮವಾರ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಆವರಿಸಿದ ಬೆಂಕಿಯಲ್ಲಿ 10 ಟೆಂಟ್ಗಳು ಭಸ್ಮಗೊಂಡಿದ್ದವು. ವಾಹನವೊಂದಕ್ಕೆ ಹಾನಿಯಾಗಿತ್ತು. ಘಟನೆಯಲ್ಲಿ ಯಾವುದೇ ಸಾವು ನೋವು ಉಂಟಾಗಿಲ್ಲ. ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ ಹತ್ತು ನಿಮಿಷದಲ್ಲಿಯೇ ಬೆಂಕಿಯನ್ನು ನಿಯಂತ್ರಿಸಿದರು.