'ಜನಸಂಖ್ಯೆ ಸ್ಫೋಟಕ ಹಂತಕ್ಕೆ ಸಮೀಪ': ಉತ್ತರ ಪ್ರದೇಶ ಕಾನೂನು ಆಯೋಗ ಅಧ್ಯಕ್ಷ
ಲಕ್ನೋ, ಜೂ.21: ''ರಾಜ್ಯದ ಜನಸಂಖ್ಯೆಯು ಸ್ಫೋಟಕ ಹಂತವನ್ನು ತಲುಪುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಈ ಪರಿಶೀಲನೆಯ ಮೂಲಕ ಜನರು ಸರ್ಕಾರಿ ಸೌಲಭ್ಯಗಳು ಮತ್ತು ಸಂಪನ್ಮೂಲಗಳನ್ನು ಪಡೆಯಬಹುದಾಗಿದೆ,'' ಎಂದು ಉತ್ತರ ಪ್ರದೇಶದ ಕಾನೂನು ಆಯೋಗದ ಅಧ್ಯಕ್ಷ ಆದಿತ್ಯ ನಾಥ್ ಮಿತ್ತಲ್ ಭಾನುವಾರ ಹೇಳಿದ್ದಾರೆ.
ಈ ಬಗ್ಗೆ ಎಎನ್ಐಯೊಂದಿಗೆ ಮಾತನಾಡಿದ ಮಿತ್ತಲ್, "ಜನಸಂಖ್ಯೆಯು ಸ್ಫೋಟಕ ಹಂತವನ್ನು ತಲುಪಿದೆ. ಇದು ಆಸ್ಪತ್ರೆಗಳು, ಆಹಾರ ಧಾನ್ಯಗಳು, ಮನೆಗಳು ಅಥವಾ ಉದ್ಯೋಗಕ್ಕೆ ಸಂಬಂಧಿಸಿರುವ ಇತರ ಸಮಸ್ಯೆಗಳಿಗೆ ಕಾರಣವಾಗಿದೆ. ಜನಸಂಖ್ಯೆಯ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಕುಟುಂಬ ಯೋಜನೆಗಿಂತ ಜನಸಂಖ್ಯಾ ನಿಯಂತ್ರಣವು ವಿಭಿನ್ನವಾಗಿದೆ," ಎಂದು ತಿಳಿಸಿದ್ದಾರೆ.
ಚೀನಾದಲ್ಲಿ ಕುಸಿಯುತ್ತಿದೆ ಜನಸಂಖ್ಯೆ..! ಭವಿಷ್ಯದಲ್ಲಿ ಭಾರತಕ್ಕೆ ನಂ. 1 ಪಟ್ಟ..?
"ಇದು ನಾವು ಉತ್ತರ ಪ್ರದೇಶದಲ್ಲಿ ಯಾವುದೇ ನಿರ್ದಿಷ್ಟ ಧರ್ಮ ಅಥವಾ ಯಾರೊಬ್ಬರ ಮಾನವ ಹಕ್ಕುಗಳಿಗೆ ವಿರುದ್ಧವಾಗಿದ್ದೇವೆ ಎಂಬ ಅರ್ಥವಲ್ಲ. ಜನಸಂಖ್ಯೆ ನಿಯಂತ್ರಣಕ್ಕೆ ಸಹಾಯ ಮಾಡುವ ಮತ್ತು ಕೊಡುಗೆ ನೀಡುವವರಿಗೆ ಸರ್ಕಾರದ ಸಂಪನ್ಮೂಲಗಳು ಮತ್ತು ಸೌಲಭ್ಯಗಳು ಲಭ್ಯವಿವೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ. ಜನಸಂಖ್ಯೆ ನಿಯಂತ್ರಣದಿಂದಾಗಿ ನಮ್ಮ ಭವಿಷ್ಯದ ಪೀಳಿಗೆಗೆ ಉತ್ತಮ ಶಿಕ್ಷಣ, ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಪಡೆಯಬಹುದು, ಉತ್ತಮ ಶಾಲೆಯಲ್ಲಿ ಅಧ್ಯಯನ ಮಾಡಬಹುದು, ಪೌಷ್ಠಿಕ ಆಹಾರವನ್ನು ಸೇವಿಸಬಹುದಾಗಿದೆ. ಇದು ಸಾಮಾಜಿಕ ಕಾಳಜಿಯ ವಿಷಯವಾಗಿದೆ," ಯುಪಿ ಕಾನೂನು ಆಯೋಗದ ಅಧ್ಯಕ್ಷರು ಎಂದಿದ್ದಾರೆ.
ಅಸ್ಸಾಂನಲ್ಲೂ ಜನಸಂಖ್ಯೆ ಹೆಚ್ಚಳ
ಇನ್ನು ಇದಕ್ಕೂ ಮುನ್ನ ಶುಕ್ರವಾರ (ಜೂನ್ 18) ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಸ್ಸಾಂನಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯಲು ಎರಡು ಮಕ್ಕಳ ನೀತಿಯನ್ನು ಕ್ರಮೇಣ ಅನುಷ್ಠಾನಗೊಳಿಸುವುದಾಗಿ ಘೋಷಿಸಿದ್ದರು. ಆದರೂ ಚಹಾ ತೋಟ ಕಾರ್ಮಿಕರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಸದಸ್ಯರನ್ನು ಈ ವ್ಯಾಪ್ತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದರು. 2021 ರ ಜನವರಿ 1 ರಿಂದ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಜನರನ್ನು ಸರ್ಕಾರಿ ಉದ್ಯೋಗಗಳಿಂದ ಅನರ್ಹರನ್ನಾಗಿ ಮಾಡುವ ಪ್ರಸ್ತಾಪವನ್ನು ಅಸ್ಸಾಂ ಸರ್ಕಾರ ಅಂಗೀಕರಿಸಿದೆ.
ದೇಶದಲ್ಲಿ ಜನಸಂಖ್ಯೆ ಹೆಚ್ಚಳದ ಬಗ್ಗೆ ಕೇಂದ್ರ ಸಚಿವ ಹರ್ಷ್ ವರ್ಧನ್ ಪ್ರಸ್ತಾಪ
ಫೆಬ್ರವರಿ 20, 2021 ರಂದು ಕೇಂದ್ರ ಸಚಿವ ಹರ್ಷ್ ವರ್ಧನ್ ದೇಶದಲ್ಲಿ ಜನಸಂಖ್ಯೆಯ ಉಲ್ಬಣಗೊಳ್ಳುವ ಬಗ್ಗೆ ಮಾತನಾಡಿದ್ದರು. "ಹೆಚ್ಚಿನ ಜನರಿದ್ದಾಗ ಹೆಚ್ಚಿನ ಸಂಪನ್ಮೂಲಗಳು ಬೇಕಾಗುತ್ತವೆ. ಜನಸಂಖ್ಯೆಯು ಹೆಚ್ಚಾದಂತೆ ಭೂಮಿಯ ಸಂಪನ್ಮೂಲಗಳು ಕ್ಷೀಣಿಸುತ್ತವೆ. ಜನಸಂಖ್ಯೆಯ ಹೆಚ್ಚಳವು ಗ್ರಹ ಮತ್ತು ಮಾನವ ಜನಾಂಗದ ಮೇಲೆ ಅನೇಕ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಜನರು, ಪರಿಸರ ಸಮಸ್ಯೆಗಳ ಪ್ರಭಾವವನ್ನು ಹೆಚ್ಚು ತೀವ್ರವಾಗಿ ಅನುಭವಿಸುತ್ತಾರೆ," ಎಂದು ಅಭಿಪ್ರಾಯಿಸಿದ್ದಾರೆ.
ಸಂತಾನಕ್ಕೂ ಕುತ್ತು ತಂದ 'ಕೊರೊನಾ', ಜನಸಂಖ್ಯೆ ಏರಿಕೆಯಲ್ಲಿ ಭಾರಿ ಇಳಿಕೆ..!
ಜನನ ಹಾಗೂ ಮರಣ ಪ್ರಮಾಣ ಕುಸಿತ
ದೇಶದಲ್ಲಿ 136.64 ಕೋಟಿ ಜನಸಂಖ್ಯೆಯಿದೆ. ಜನಸಂಖ್ಯೆಯ ವಿಚಾರದಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಈ ಹಿನ್ನೆಲೆ ಕುಟುಂಬ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರಲು ಭಾರತವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಜನಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಕುಟುಂಬ ಯೋಜನೆಯ ಅಳವಡಿಕೆಗೆ ನೀಡಿದ ಪ್ರೋತ್ಸಾಹದ ಬಗ್ಗೆ ಮಾತನಾಡಿದ ಸಚಿವರು, "ಭಾರತವು 1952 ರಲ್ಲಿ ರಾಷ್ಟ್ರೀಯ ಕುಟುಂಬ ಯೋಜನಾ ಕಾರ್ಯಕ್ರಮವನ್ನು ರೂಪಿಸಿದ ವಿಶ್ವದ ಮೊದಲ ದೇಶಗಳಲ್ಲಿ ಒಂದಾಗಿದೆ. ಬಳಿಕ ಈ ಯೋಜನೆಯನ್ನು ತಾಯಿ-ಮಕ್ಕಳ ಆರೋಗ್ಯ, ಹದಿಹರೆಯದವರ ಆರೋಗ್ಯ ಮತ್ತು ಪೋಷಣೆಗೂ ವಿಸ್ತರಿಸಲಾಗಿದೆ," ಎಂದು ಹೇಳಿದ್ದಾರೆ. "ಭಾರತದ ಜನಸಂಖ್ಯೆಯು 1951 ರಲ್ಲಿ 36 ಕೋಟಿಯಿದ್ದು, 2011 ರಲ್ಲಿ 121.02 ಕೋಟಿಗೆ ಏರಿದೆ. ಆದರೆ ದೇಶದಲ್ಲಿ ಜನನ ಪ್ರಮಾಣ ಹಾಗೂ ಮರಣ ಎರಡರಲ್ಲೂ ಗಮನಾರ್ಹ ಕುಸಿತ ಕಂಡಿದೆ. 1951 ರಲ್ಲಿ ಜನನ ಪ್ರಮಾಣ 1000 ಕ್ಕೆ 40.8 ಎಂದು ದಾಖಲಾಗಿದೆ. 2018 ರಲ್ಲಿ 20.0 ಕ್ಕೆ ಕುಸಿದಿದೆ. ಒಟ್ಟು ಜನನ ಪ್ರಮಾಣವು 1951 ರಲ್ಲಿ 6.0 ಇದ್ದು 2015-16ರಲ್ಲಿ 2.2 ಕ್ಕೆ ಇಳಿದಿದೆ. ಭಾರತದಲ್ಲಿ ಸಾವಿನ ಪ್ರಮಾಣ 2012 ರಲ್ಲಿ 7 ಇದ್ದು 2018 ರಲ್ಲಿ 6.2 ಕ್ಕೆ ಇಳಿದಿದೆ," ಎಂದು ಸಚಿವರು ವಿವರಿಸಿದ್ದಾರೆ.
ಭಾರತದಲ್ಲಿ ಜನನ ಪ್ರಮಾಣ ಮತ್ತಷ್ಟು ಇಳಿಯುವ ನಿರೀಕ್ಷೆ
"ಭಾರತದ ಭವಿಷ್ಯದ ಜನನ ಪ್ರಮಾಣವು ಇನ್ನಷ್ಟು ಇಳಿಯುವ ನಿರೀಕ್ಷೆಯಿದೆ. ಜುಲೈ 2020 ರಲ್ಲಿ ಬಿಡುಗಡೆಯಾದ ಭಾರತ ಮತ್ತು ರಾಜ್ಯಗಳ 2011-2036ರ ಜನಸಂಖ್ಯಾ ಅಂದಾಜಿನ ಪ್ರಕಾರ 2011 ರಲ್ಲಿ ಒಟ್ಟು ಜನನ ಪ್ರಮಾಣ 2.37 ರಿಂದ ಇನ್ನಷ್ಟು ಇಳಿಯುವ ನಿರೀಕ್ಷೆಯಿದೆ. 2015 ರಲ್ಲಿದ್ದ 2.37 ಜನನ ಪ್ರಮಾಣವು 2031-35ರ ಅವಧಿಯಲ್ಲಿ 1.73. ಕ್ಕೆ ಇಳಿಯುವ ನಿರೀಕ್ಷೆಯಿದೆ. ಭಾರತವು ಈಗ ಜನಸಂಖ್ಯಾ ಪರಿವರ್ತನೆಯ ಹಂತದಲ್ಲಿದೆ," ಎಂದಿದ್ದಾರೆ. "15-24 ವರ್ಷ ವಯಸ್ಸಿನ ಯುವ ಜನಸಂಖ್ಯೆಯು 2011 ರಲ್ಲಿ 233 ದಶಲಕ್ಷ ಇದ್ದು 2036 ರಲ್ಲಿ 227 ದಶಲಕ್ಷಕ್ಕೆ ಇಳಿಯುವ ನಿರೀಕ್ಷೆಯಿದೆ. ಆದಾಗ್ಯೂ, 2011 ರಲ್ಲಿ 61 ಶೇಕಡವಿದ್ದ ದುಡಿಯುವ ಜನಸಂಖ್ಯೆಯ ಪ್ರಮಾಣವು 2036 ರ ವೇಳೆಗೆ ಶೇಕಡ 65 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಭಾರತದಲ್ಲಿ ಪ್ರತಿವರ್ಷ ದುಡಿಯುವ ವರ್ಗದ ಜನಸಂಖ್ಯೆಗೆ 12 ಮಿಲಿಯನ್ ಜನರು ಸೇರ್ಪಡೆಯಾಗುತ್ತಿದ್ದಾರೆ," ಎಂದು ಸಚಿವರು ಭರವಸೆ ವ್ಯಕ್ತಪಡಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)