ಮಕ್ಕಳನ್ನು ಒತ್ತೆ ಇಟ್ಟುಕೊಂಡು ಹತ್ಯೆಯಾದವನ ಮಗುವಿಗೆ ಪೊಲೀಸರು ಆಸರೆ!
ಲಕ್ನೋ, ಫೆಬ್ರವರಿ 04 : ಮಗಳ ಹುಟ್ಟು ಹಬ್ಬದ ನೆಪದಲ್ಲಿ 20 ಮಕ್ಕಳನ್ನು ಮನೆಗೆ ಕರೆಸಿಕೊಂಡು ಒತ್ತೆಯಾಗಿರಿಸಿಕೊಂಡಿದ್ದವನ ಮಗು ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗಿದೆ. ಪೊಲೀಸರು ನೆರವಿನ ಹಸ್ತ ಚಾಚಿದ್ದು, ಮಗುವಿನ ಭವಿಷ್ಯದ ಜವಾಬ್ದಾರಿ ಹೊತ್ತಿದ್ದಾರೆ.
ಉತ್ತರ ಪ್ರದೇಶದ ಫಾರೂಕಾಬಾದ್ ನಿವಾಸಿ ಸುಭಾಷ್ ಬಾಥಮ್ 20 ಮಕ್ಕಳನ್ನು ಒತ್ತೆಯಾಗಿಟ್ಟುಕೊಂಡಿದ್ದ. ಬಿಡಿಸಲು ಹೋದ ಪೊಲೀಸರು ಮತ್ತು ಸ್ಥಳೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆತನನ್ನು ಹತ್ಯೆ ಮಾಡಿ, ಮಕ್ಕಳನ್ನು ರಕ್ಷಣೆ ಮಾಡಿದ್ದರು.
ಮಕ್ಕಳನ್ನು ಒತ್ತೆಯಿರಿಸಿಕೊಂಡಿದ್ದ ವ್ಯಕ್ತಿ ಪೊಲೀಸ್ ಗುಂಡೇಟಿಗೆ ಬಲಿ
ಸುಭಾಷ್ ಬಾಥಮ್ ಪತ್ನಿಯ ಮೇಲೆ ಜನರು ಹಲ್ಲೆ ನಡೆಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಇದರಿಂದಾಗಿ ಸುಭಾಷ್ ಬಾಥಮ್ 1 ವರ್ಷದ ಹೆಣ್ಣು ಮಗು ಗೌರಿ ಅನಾಥಳಾಗಿದ್ದಾಳೆ.
ಮಕ್ಕಳ ಒತ್ತೆ ಪ್ರಕರಣ: ಆರೋಪಿ ಹೆಂಡತಿಯನ್ನು ಕಲ್ಲು ಹೊಡೆದು ಕೊಂದ ಜನ
ಪೊಲೀಸರು ಗೌರಿಯ ನೆರವಿಗೆ ಬಂದಿದ್ದಾರೆ. ಕಾನೂನು ಬದ್ಧವಾಗಿ ಆಕೆಯನ್ನು ದತ್ತು ತೆಗೆದುಕೊಂಡು ಭವಿಷ್ಯ ರೂಪಿಸುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಸ್ತುತ ಗೌರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಉತ್ತರ ಪ್ರದೇಶ; 20 ಮಕ್ಕಳನ್ನು ಒತ್ತೆಯಾಗಿರಿಸಿಕೊಂಡ ವ್ಯಕ್ತಿ
ದತ್ತು ಪಡೆಯಲಿದ್ದಾರೆ ಪೊಲೀಸ್ ಅಧಿಕಾರಿ
ಮೋಹಿತ್ ಅಗರ್ವಾಲ್ ಎಂಬ ಪೊಲೀಸ್ ಅಧಿಕಾರಿ ಸುಭಾಷ್ ಬಾಥಮ್ ಪುತ್ರಿ ಗೌರಿಯನ್ನು ದತ್ತು ಪಡೆಯಲಿದ್ದಾರೆ. "ನಾನು ಕಾನೂನು ಬದ್ಧವಾಗಿ ಗೌರಿಯನ್ನು ದತ್ತು ಪಡೆದುಕೊಳ್ಳುತ್ತೇನೆ. ವಿದ್ಯಾಭ್ಯಾಸ ಸೇರಿದಂತೆ ಎಲ್ಲಾ ಖರ್ಚನ್ನು ನೋಡಿಕೊಳ್ಳುತ್ತೇನೆ. ಒಳ್ಳೆಯ ಬೋರ್ಡಿಂಗ್ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸುತ್ತೇನೆ" ಎಂದು ಹೇಳಿದ್ದಾರೆ.
20 ಮಕ್ಕಳನ್ನು ಒತ್ತೆ ಇಟ್ಟುಕೊಂಡಿದ್ದ
ಉತ್ತರ ಪ್ರದೇಶದ ಫಾರೂಕಾಬಾದ್ ನಿವಾಸಿ ಸುಭಾಷ್ ಬಾಥಮ್ ಜನವರಿ 30ರಂದು ಮಗಳ ಹುಟ್ಟು ಹಬ್ಬವಿದೆ ಎಂದು ಬಡಾವಣೆಯ 20 ಮಕ್ಕಳನ್ನು ಮನೆಗೆ ಕರೆಸಿಕೊಂಡಿದ್ದ. ಬಳಿಕ ಅವರನ್ನು ಒತ್ತೆಯಾಗಿಟ್ಟುಕೊಂಡಿದ್ದ. ಬಿಡಿಸಲು ಹೋದ ಪೊಲೀಸರು, ಸ್ಥಳೀಯರ ಮೇಲೆ ಗುಂಡಿ ದಾಳಿ ನಡೆಸಿ ಆತಂಕ ಮೂಡಿಸಿದ್ದ.
ಒತ್ತೆ ಇಟ್ಟುಕೊಳ್ಳಲು ಕಾರಣವೇನು?
2001ರಲ್ಲಿ ಸುಭಾಷ್ ಬಾಥಮ್ ಕೊಲೆ ಆರೋಪದ ಮೇಲೆ ಜೈಲಿಗೆ ಹೋಗಿ ಬಂದಿದ್ದ. ಬಳಿಕ ಸ್ಥಳೀಯರು ಆತನನ್ನು ವಿಶ್ವಾಸದಿಂದ ಕಾಣುತ್ತಿರಲಿಲ್ಲ. ಇದರಿಂದಾಗಿ ಕೋಪಗೊಂಡಿದ್ದ ಆತ ಮಕ್ಕಳನ್ನು ಒತ್ತೆಯಾಗಿಟ್ಟುಕೊಂಡಿದ್ದ.
ಪೊಲೀಸರ ಗುಂಡಿಗೆ ಬಲಿ
ಮಕ್ಕಳನ್ನು ಸುರಕ್ಷಿತವಾಗಿ ಬಿಡಿಸಲು ಸುಭಾಷ್ ಬಾಥಮ್ ಮನವೊಲಿಕೆ ಮಾಡುವ ಪೊಲೀಸರ ಪ್ರಯತ್ನ ವಿಫಲವಾಗಿತ್ತು. ಪೊಲೀಸರ ಮೇಲೆಯೇ ಆತ ಗುಂಡಿನ ದಾಳಿ ನಡೆಸಿದ್ದ. ಇದರಿಂದಾಗಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಸುಭಾಷ್ನನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದರು. ಸ್ಥಳೀಯರು ಸುಭಾಷ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದರು. ಆಕೆಯೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.