ಹತ್ರಾಸ್ ಸಂತ್ರಸ್ತೆ ಸಂಬಂಧಿಕರನ್ನು ಮನೆಯಲ್ಲೇ ಕೂಡಿಟ್ಟರಾ ಪೊಲೀಸರು?
ಲಕ್ನೋ, ಅಕ್ಟೋಬರ್.02: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದರ ನಡುವೆ ಸಂತ್ರಸ್ತೆ ಸಂಬಂಧಿಕರನ್ನು ಪೊಲೀಸರು ದಿಗ್ಬಂಧನದಲ್ಲಿ ಇರಿಸಿರುವ ಬಗ್ಗೆ ತಿಳಿದು ಬಂದಿದೆ.
ಹತ್ರಾಸ್ ನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚು ಜನರು ಸೇರುವುದನ್ನು ರದ್ದುಗೊಳಿಸಲಾಗಿದ್ದು, ಭಾರತೀಯ ದಂಡ ಸಂಹಿತೆ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನೊಂದೆಡೆ ಸಂತ್ರಸ್ತೆ ಸಂಬಂಧಿಕರು ಮಾಧ್ಯಮಗಳ ಎದುರು ಮಾತನಾಡದಂತೆ ನಿಯಂತ್ರಣದಲ್ಲಿ ಇರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹತ್ರಾಸ್ ಭೇಟಿಗೆ ತೆರಳಿದ ಟಿಎಂಸಿ ಸಂಸದರನ್ನು ನೆಲಕ್ಕುರುಳಿಸಿದ ಪೊಲೀಸ್
ಶುಕ್ರವಾರ ಬೆಳಗ್ಗೆ ಸಂತ್ರಸ್ತೆ ಕುಟುಂಬದ ಅಪ್ರಾಪ್ತರೊಬ್ಬರು ಮಾಧ್ಯಮಗಳಿಗೆ ಗೌಪ್ಯವಾಗಿ ಹೇಳಿಕೆ ನೀಡಿದ್ದಾರೆ. ಪೊಲೀಸರು ತಮ್ಮ ಮನೆಯ ಎಲ್ಲ ಸದಸ್ಯರ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದಾರೆ. ಇನ್ನು ಕೆಲವರ ಮೊಬೈಲ್ ಗಳನ್ನು ವಶಕ್ಕೆ ಪಡೆಕೊಂಡಿದ್ದಾರೆ ಎಂದು ಅಪ್ರಾಪ್ತೆ ತಿಳಿಸಿರುವುದಾಗಿ ಎನ್ ಡಿ ಟಿವಿ ವರದಿ ಮಾಡಿದೆ.
"ನಮ್ಮನ್ನು ಮನೆಯಿಂದ ಹೊರ ಬರಲು ಬಿಡುತ್ತಿಲ್ಲ ಪೊಲೀಸರು"
"ಮನೆ ಸುತ್ತ ದಿಗ್ಬಂಧನ ಹಾಕಿರುವ ಪೊಲೀಸರು ನಮ್ಮನ್ನು ಮನೆಯಿಂದ ಹೊರ ಬರುವುದಕ್ಕೂ ಬಿಡುತ್ತಿಲ್ಲ. ಮಾಧ್ಯಮಗಳ ಎದುರು ಮಾತನಾಡದಂತೆ ತಡೆ ಹಿಡಿಯಲಾಗುತ್ತಿದೆ. ಪೊಲೀಸರು ನಮ್ಮನ್ನು ಭಯದಲ್ಲೇ ಬದುಕುವಂತೆ ಮಾಡಿದ್ದಾರೆ. ನಮ್ಮ ಕುಟುಂಬ ಸದಸ್ಯರ ಪರವಾಗಿ ಮಾಧ್ಯಮಗಳ ಎದುರು ನೋವು ತೋಡಿಕೊಳ್ಳುವುದಕ್ಕಾಗಿ ನನ್ನನ್ನು ಗೌಪ್ಯವಾಗಿ ಮನೆಯಿಂದ ಹೊರಗೆ ಕಳುಹಿಸಿದ್ದಾರೆ" ಎಂದು ಸಂತ್ರಸ್ತೆ ಕುಟುಂಬದ ಅಪ್ರಾಪ್ತರೊಬ್ಬರು ಹೇಳಿಕೆ ನೀಡಿದ್ದಾರೆ.
ಪೊಲೀಸರು ಕಾಣುತ್ತಲೇ ಸಂತ್ರಸ್ತೆ ಕುಟುಂಬ ಸದಸ್ಯ ಪರಾರಿ
ಇನ್ನು, ಪೊಲೀಸರು ಎದುರಿಗೆ ಬರುತ್ತಿದ್ದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದ ಸಂತ್ರಸ್ತೆಯ ಸಂಬಂಧಿಕ ಅಪ್ರಾಪ್ತನು ಅಲ್ಲಿಂದ ಪರಾರಿಯಾಗುತ್ತಾರೆ. ಬಳಿಕ ಸಂತ್ರಸ್ತೆ ಸಂಬಂಧಿಕರ ಭೇಟಿಗೆ ಏಕೆ ಅನುಮತಿ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರೆ, ಮಾಧ್ಯಮಗಳ ಎದುರಿಗೆ ಪೊಲೀಸರೇ ಮೌನವಾಗಿ ನಿಂತಿದ್ದರು. "ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಇಡೀ ದೇಶದ ಎದುರು ಮಾಧ್ಯಮಗಳು ಪ್ರಸ್ತುತಪಡಿಸುತ್ತವೆ ಎಂಬ ಭಯದಲ್ಲೇ ಹತ್ರಾಸ್ ಗ್ರಾಮಕ್ಕೆ ಮಾಧ್ಯಮಗಳು ಪ್ರವೇಶಿಸುವುದನ್ನು ರದ್ದುಗೊಳಿಸಲಾಗಿದೆ. ಇದು ರಾಜ್ಯದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನಡೆಸುತ್ತಿರುವ ಜಂಗಲ್ ರಾಜ್ ಆಡಳಿತಕ್ಕೆ ಸಾಕ್ಷಿಯಾಗಿದೆ" ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ರಾಜ್ಯ ಘಟಕವು ಟ್ವಿಟರ್ ನಲ್ಲಿ ಆರೋಪಿಸಿದೆ.
ಹತ್ರಾಸ್ ಗ್ರಾಮಕ್ಕೆ ತೆರಳುವ ನಾಯಕರ ಮೇಲೆ ದರ್ಪ
ಗುರುವಾರ ಸಂತ್ರಸ್ತೆಯ ಕುಟುಂಸ್ಥರನ್ನು ಭೇಟಿಗೆ ತೆರಳುತ್ತಿದ್ದ ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿರನ್ನು ಉತ್ತರ ಪ್ರದೇಶ ಪೊಲೀಸರು ಗೌತಮ್ ಬುದ್ಧ ನಗರದಲ್ಲಿರುವ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ತಡೆದು ಬಂಧಿಸಿದ್ದರು. ಅದಾದ ಬಳಿಕ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಶುಕ್ರವಾರ ಟಿಎಂಸಿ ಸಂಸದ ದೆರೆಕ್ ಒಬ್ರಿಯನ್, ಡಾ. ಕಾಕೋಳ್ ಘೋಷ್ ದಸ್ತಿದಾರ್, ಪ್ರತಿಮಾ ಮೊಂಡಾಳ್ ಮತ್ತು ಮಾಜಿ ಸಂಸದೆ ಮಮತಾ ಠಾಕೂರ್ ರನ್ನೊಳಗೊಂಡ ಟಿಎಂಸಿ ನಿಯೋಗವು ಹತ್ರಾಸ್ ಪ್ರವೇಶಿಸದಂತೆ ಪೊಲೀಸರು ತಡೆದ ಸಂದರ್ಭದಲ್ಲಿ ವಾಗ್ವಾದ ನಡೆದಿದೆ. ಈ ವೇಳೆ ಸಂಸದ ಓಬ್ರಿಯನ್ ರನ್ನು ಪೊಲೀಸರು ನೆಲಕ್ಕೆ ತಳ್ಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಹತ್ರಾಸ್ ಸಾಮೂಹಿಕ ಅತ್ಯಾಚಾರ ಕೇಸ್ ಹಿನ್ನೆಲೆ
ಕಳೆದ ಸಪ್ಟೆಂಬರ್.14ರಂದು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಹುಲ್ಲು ಕತ್ತರಿಸುತ್ತಿದ್ದ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದರು. ಇಷ್ಟಕ್ಕೆ ಸುಮ್ಮನಾಗದೇ ಯುವತಿ ಕತ್ತು ಹಿಸುಕಿ, ನಾಲಗೆ ಕತ್ತರಿಸುವ ಮೂಲಕ ಕ್ರೌರ್ಯ ಮೆರೆದಿದ್ದರು. ಎರಡು ವಾರ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ದಲಿತ ಯುವತಿ ಮಂಗಳವಾರ ನವದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆದಲ್ಲಿ ಕೊನೆಯುಸಿರೆಳೆದಿದ್ದಳು. ಬುಧವಾರ ಮಧ್ಯರಾತ್ರಿ 2.30ರ ಸಂದರ್ಭದಲ್ಲಿ ಪೊಲೀಸರೇ ಯುವತಿಯ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು.