ಮೋದಿ ಭದ್ರತೆ ಕರ್ತವ್ಯ ಮುಗಿಸಿ ವಾಪಸ್ಸಾಗುತ್ತಿದ್ದ ಪೇದೆಯ ಹೊಡೆದು ಕೊಂದ ಜನ
ವಾರಣಾಸಿ (ಉತ್ತರ ಪ್ರದೇಶ), ಡಿಸೆಂಬರ್ 30: ಉತ್ತರ ಪ್ರದೇಶದಲ್ಲಿ ಗುಂಪು ಹತ್ಯೆಗಳು ನಿಲ್ಲುತ್ತಿಲ್ಲ. ಕೆಲವು ದಿನಗಳ ಹಿಂದಷ್ಟೆ ಎಸ್ಐ ಒಬ್ಬರನ್ನು ಕೊಂದಿದ್ದ ಜನ ಈಗ ಮತ್ತೊಬ್ಬರನ್ನು ಕೊಂಡಿದ್ದಾರೆ.
ಮೋದಿ ಕಾರ್ಯಕ್ರಮದ ಭದ್ರತೆ ಕರ್ತವ್ಯ ಮುಗಿಸಿ ವಾಪಸ್ಸಾಗುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರನ್ನು ಪ್ರತಿಭಟನಾ ನಿರತ ಗುಂಪೊಂದು ಗಾಜಿಯಾಬಾದ್ನಲ್ಲಿ ಹತ್ಯೆ ಮಾಡಿದೆ. ಮೃತ ಪೊಲೀಸ್ ಕಾನ್ಸ್ಟೇಬಲ್ ಅವರನ್ನು ಸುರೇಶ್ ವತ್ಸಾ ಎಂದು ಗುರುತಿಸಲಾಗಿದೆ. ಇವರು ಕರೀಂಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಾನ್ಸ್ಟೇಬಲ್ ಸುರೇಶ್ ವತ್ಸಾ ಅವರು ತಮ್ಮದೇ ಠಾಣೆಯ ಇತರ ನಾಲ್ಕು ಸಿಬ್ಬಂದಿ ಜೊತೆ ಐಐಟಿ ಮೈದಾನದಲ್ಲಿ ಆಯೋಜಿಸಿದ್ದ ಮೋದಿ ಕಾರ್ಯಕ್ರಮದ ಭದ್ರತಾ ಕರ್ತವ್ಯ ಮುಗಿಸಿ ವಾಪಸ್ಸಾಗುವ ವೇಳೆ, ಗಾಜಿಯಾಬಾದ್ನಲ್ಲಿ ಪ್ರತಿಭಟನೆ ಮಾಡುತ್ತಿದ್ದ ನಿಷಾದ್ ಪಕ್ಷದ ಕೆಲವು ಸದಸ್ಯರು ಅವರನ್ನು ಅಡ್ಡಗಟ್ಟಿ ಥಳಿಸಿ ಕೊಂದಿದ್ದಾರೆ.
ಮೃತ ಕಾನ್ಸ್ಟೇಬಲ್ ಸುರೇಶ್ ವತ್ಸಾ ಕುಟುಂಬಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು 50 ಲಕ್ಷ ಪರಿಹಾರ ಮತ್ತು ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿಯನ್ನು ಘೋಷಣೆ ಮಾಡಿದ್ದಾರೆ.
#WATCH One constable dead & two locals from the area injured in stone pelting allegedly by Nishad Party workers near Atwa Mor police station in Naunera area, earlier today. #Ghazipur pic.twitter.com/FnviOzuRIU
— ANI UP (@ANINewsUP) December 29, 2018
ಕೆಲವು ವಾರಗಳ ಹಿಂದೆ ಅಷ್ಟೆ ಉತ್ತರ ಪ್ರದೇಶದ ಬುಲಂದ್ಶಹರ್ ನಲ್ಲಿ ಎಸ್ಐ ಒಬ್ಬರನ್ನು ಉದ್ರಿಕ್ತ ಗುಂಪೋಂದು ಹತ್ಯೆ ಮಾಡಿತ್ತು ಇದು ದೇಶದಾದ್ಯಂತ ಸುದ್ದಿಯಾಗಿತ್ತು, ಉತ್ತರ ಪ್ರದೇಶದಲ್ಲಿನ ಕಾನೂನು ಸುವ್ಯವಸ್ಥೆ ಪ್ರಶ್ನೆಗೆ ಗುರಿಯಾಗಿತ್ತು. ಅದಾದ ಕೆಲವು ವಾರಗಳ ಬಳಿಕ ಈಗ ಮತ್ತೊಂದು ಅಂತಹುದೇ ಘಟನೆ ಘಟಿಸಿದೆ.