ಗಂಗಾ ನದಿ ದಡದಲ್ಲಿ ಭೂ ಸವೆತ: ದಫನ್ ಮಾಡಿದ ದೇಹಗಳು ಕೊಚ್ಚಿ ಹೋಗುವ ಭೀತಿ
ಪ್ರಯಾಗರಾಜ್, ಜೂ. 18: ಈ ವರ್ಷ ಮುಂಗಾರು ಅವಧಿಗೂ ಮುನ್ನ ಆರಂಭವಾದ ಹಿನ್ನೆಲೆ ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲಿದೆ. ಈ ನೀರು ಗಂಗಾ ನದಿಯ ದಡದಲ್ಲಿ ಸವೆತಕ್ಕೆ ಕಾರಣವಾಗಿದೆ. ಈವರೆಗೆ ಗಂಗಾ ನದಿ ತೀರದಲ್ಲೇ ಹೆಚ್ಚಿನ ಸಂಖ್ಯೆಯ ಮೃತ ದೇಹಗಳ ಅಂತ್ಯ ಸಂಸ್ಕಾರ (ದಫನ್) ಮಾಡಲಾಗುತ್ತಿತ್ತು. ಆದರೆ ಈಗ ಈ ಸವೆತದಿಂದಾಗಿ ಫಫಾಮೌ ಘಾಟ್ನಲ್ಲಿ ಮೃತದೇಹಗಳು ಕೊಚ್ಚಿ ಹೋಗುವ ಭೀತಿ ಉಂಟಾಗಿದೆ.
ಈ ಪರಿಸ್ಥಿತಿಯ ಹಿನ್ನೆಲೆ ಈ ದೇಹಗಳನ್ನು ದಹನ ಮಾಡುವ ಜವಾಬ್ದಾರಿಯನ್ನು ಪ್ರಯಾಗರಾಜ್ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ವಹಿಸಿಕೊಂಡಿದೆ. ಇಲ್ಲಿಯವರೆಗೆ, ಫಫಾಮೌ ಘಾಟ್ನ ವಲಯ ಅಧಿಕಾರಿ ನೀರಜ್ ಸಿಂಗ್ ಎರಡು ಡಜನ್ಗೂ ಹೆಚ್ಚು ಶವಗಳನ್ನು ಅಂತ್ಯಸಂಸ್ಕಾರ ಮಾಡಿದ್ದು, ಈ ಪೈಕಿ 11 ಶವಗಳನ್ನು ಕಳೆದ ವಾರವಷ್ಟೇ ಅಂತ್ಯಕ್ರಿಯೆ ಮಾಡಲಾಗಿದೆ. ಮಂಗಳವಾರ ಏಳು ಶವಗಳನ್ನು ಮತ್ತು ಬುಧವಾರ ಬೆಳಿಗ್ಗೆ ಮೂರು ಶವಸಂಸ್ಕಾರ ಮಾಡಲಾಗಿದೆ.
ಉತ್ತರ ಪ್ರದೇಶದ ಗಂಗಾ ನದಿ ಬಳಿ ಮತ್ತೆ ಮೃತದೇಹಗಳು ಪತ್ತೆ
ಪ್ರಸ್ತುತ, ನದಿಯ ಬಲವಾದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿರುವ ಹಿನ್ನೆಲೆ ತೀವ್ರ ಸವೆತ ಉಂಟಾಗಿದ್ದು ಈ ಹಿನ್ನೆಲೆ ಸುಮಾರು 70 ದೇಹಗಳು ಈ ಘಾಟ್ನಲ್ಲಿ ಕೊಚ್ಚಿ ಹೋಗುವ ಅಥವಾ ಮಣ್ಣಿನಿಂದ ಮೇಲಕ್ಕೆ ಬರುವ ಸಾಧ್ಯತೆಯಿದೆ.
ಪ್ರತಿದಿನ, ಅಧಿಕಾರಿ ಸಿಂಗ್ ಮತ್ತು ತಂಡವು ಗಂಗಾ ದಡದಲ್ಲಿ ಹೂತಿರುವ ಶವಗಳನ್ನು ಪರಿಶೀಲಿಸುತ್ತಿದೆ. ಯಾವುದೇ ಮೃತ ದೇಹ ಮಣ್ಣಿನಿಂದ ಹೊರಕ್ಕೆ ಬರುವ ಸಾಧ್ಯತೆಗಳು ಕಂಡು ಬಂದರೆ, ಆ ಮೃತದೇಹವನ್ನು ಹೊರತೆಗೆದು ಎಲ್ಲಾ ವಿಧಿ ವಿಧಾನದೊಂದಿಗೆ ದಹನ ಮಾಡುವ ನಿರ್ಧಾರವನ್ನು ಆಡಳಿತ ಕೈಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಫಫಾಮೌ ಘಾಟ್ನ ವಲಯ ಅಧಿಕಾರಿ ನೀರಜ್ ಸಿಂಗ್, "ನಾವು ಶವಸಂಸ್ಕಾರ ಮಾಡುವ ಯಾರ ಬಗ್ಗೆಯೂ ನನಗೆ ತಿಳಿದಿಲ್ಲ. ಆದರೆ ಅಗತ್ಯವಿರುವ ಎಲ್ಲ ಆಚರಣೆಗಳನ್ನು ಧಾರ್ಮಿಕವಾಗಿ ಅನುಸರಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಮೃತರನ್ನು ನನ್ನ ಸ್ವಂತ ಕುಟುಂಬವೆಂದು ಪರಿಗಣಿಸಿವೇದ ಮಂತ್ರಗಳ ಪಠಣದ ಮಧ್ಯೆ ನಾನು ಮೃತದೇಹಕ್ಕೆ ಬೆಂಕಿ ಇಡುತ್ತೇನೆ," ಎಂದು ತಿಳಿಸಿದ್ದಾರೆ.
ಗಂಗಾ ತೀರದಲ್ಲಿ ಸಮಾಧಿ ಮಾಡಿದ ಶವಗಳನ್ನು ದಹನ ಮಾಡುವ ಕಾರ್ಯವು ಜೂನ್ 4 ರಂದು ಪ್ರಾರಂಭವಾಗಿದೆ. ಅಂದಿನಿಂದ, ಈ ವಲಯ ಅಧಿಕಾರಿ ಧಾರ್ಮಿಕ ವಿಧಿ ವಿಧಾನ ಪ್ರಕಾರ ಅಂತ್ಯ ಸಂಸ್ಕಾರ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಬುಧವಾರದವರೆಗೆ, ಅವರು 24 ದೇಹಗಳ ದಹನ ಕಾರ್ಯ ಮಾಡಿದ್ದಾರೆ.
ಗಂಗಾ ನದಿಯಲ್ಲಿ ತೇಲಿದ ಶವಗಳು; ಪಕ್ಕದ ರಾಜ್ಯದತ್ತ ಪರಸ್ಪರ ಬೊಟ್ಟು!
ಪ್ರತಿ ದೇಹವನ್ನು ದಹನ ಮಾಡಲು ಪಿಎಂಸಿ ಸುಮಾರು 3,000 ರೂ. ಹಾಗೂ ತನ್ನದೇ ಆದ ಸಂಪನ್ಮೂಲಗಳನ್ನು ವ್ಯವಸ್ಥೆಗಾಗಿ ಬಳಸುತ್ತಿದೆ. ದಡದಲ್ಲಿ ನಿರಂತರ ಸವೆತ ಹಿನ್ನೆಲೆ ಅಧಿಕ ದೇಹಗಳು ಕೊಚ್ಚಿ ಹೋಗುವ ಭಯದಿಂದ ಈ ದಹನ ಕಾರ್ಯ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.
"ನನ್ನ ಉನ್ನತ ಅಧಿಕಾರಿಗಳಿಂದ ಅನೌಪಚಾರಿಕ ಅನುಮೋದನೆ ಪಡೆದ ನಂತರ, ನನ್ನ ತಂಡವು ಸಮಾಧಿ ಮಾಡಿದ ದೇಹಗಳನ್ನು ಪತ್ತೆ ಮಾಡುತ್ತಿದ್ದು, ಆ ದೇಹಗಳ ನಾವು ಅಂತ್ಯಸಂಸ್ಕಾರ ಮಾಡುತ್ತಿದ್ದೇವೆ. ಬೇರೆ ಯಾರೂ ಶವವನ್ನು ಹೂತು ಹೋಗದಂತೆ ತಡೆಯುತ್ತೇವೆ. ಈ ದಡ ಸವೆತದಿಂದಾಗಿ ದೇಹವು ಮಣ್ಣಿನಿಂದ ಹೊರಕ್ಕೆ ಬರಬಹುದು ಅಥವಾ ನದಿಗೆ ಬೀಳಬಹುದು ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ದೇಹವನ್ನು ಅಗೆದು ತೆಗೆದು ದಹನ ಕಾರ್ಯ ಮಾಡುತ್ತಿದ್ದೇವೆ," ಎಂದು ಪಿಎಂಸಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿಕೆ ಮಿಶ್ರಾ ಹೇಳಿದರು.
(ಒನ್ಇಂಡಿಯಾ ಸುದ್ದಿ)