ಕಾಶಿ ವಿಶ್ವನಾಥ್ ಕಾರಿಡಾರ್ ಯೋಜನೆ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಕಾಶಿ, ಡಿಸೆಂಬರ್ 13: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದು, ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಮೊದಲ ಹಂತವನ್ನು ಸೋಮವಾರ ಉದ್ಘಾಟಿಸಲಿದ್ದಾರೆ.
ಬರೋಬ್ಬರಿ 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾರಿಡಾರ್ ಯೋಜನೆಯು ಎರಡು ಐತಿಹಾಸಿಕ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ಸೇತುವೆ ಆಗಲಿದೆ. ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯ ಮೊದಲ ಹಂತವು ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗಂಗಾ ಘಾಟ್ಗಳ ನಡುವೆ ಸಂಪರ್ಕ ಕಲ್ಪಿಸಲಿದೆ.
ಉತ್ತರ ಪ್ರದೇಶ ಚುನಾವಣೆ: ಏನಿದು ಬಿಜೆಪಿಯ ವಿಶೇಷ 'ಧಾರ್ಮಿಕ' ರಣತಂತ್ರ?
ಕಳೆದ ಮೂರು ದಿನಗಳಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶಕ್ಕೆ ಎರಡನೇ ಬಾರಿ ಭೇಟಿ ನೀಡಲಿದ್ದಾರೆ. ಸೋಮವಾರ ಪ್ರಧಾನಿ ಮೋದಿ ಕಾರ್ಯಕ್ರಮ ಮತ್ತು ಯೋಜನೆ ಚಾಲನೆ ನೀಡುವುದರ ಕುರಿತು ಪ್ರಮುಖ ಅಂಶಗಳನ್ನು ಮುಂದೆ ಓದಿ.
ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಉದ್ಘಾಟನೆ:
* ಪ್ರಧಾನಮಂತ್ರಿ ನರೇಂದ್ರ ಮೋದಿ ಮಧ್ಯಾಹ್ನ 1 ಗಂಟೆಗೆ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, 339 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀ ಕಾಶಿ ವಿಶ್ವನಾಥ ಧಾಮದ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ.
* ಯೋಜನೆಯ ಮೊದಲ ಹಂತದಲ್ಲಿ ಸುಮಾರು ಐದು ಲಕ್ಷ ಚದರ ಅಡಿಗಳಷ್ಟು ಬೃಹತ್ ಪ್ರದೇಶದಲ್ಲಿ ಹರಡಿರುವ 23 ಕಟ್ಟಡಗಳನ್ನು ಉದ್ಘಾಟಿಸಲಾಗುವುದು. ಈ ಹಿಂದಿನ ಆವರಣವು 3,000 ಚದರ ಅಡಿ ಹರಡಿಕೊಂಡಿತ್ತು.
* ಮೊದಲು ಪುರಾತನ ಕಾಲ ಭೈರವ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಗರ್ಭಗುಡಿಯ ಒಳಗೆ, ಅವರು ಕಾಶಿ ವಿಶ್ವನಾಥ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕಾಂತ್ ಮಿಶ್ರಾ ಸಹಾಯದೊಂದಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.
* ಅವರು ಲಲಿತಾ ಘಾಟ್ನಿಂದ ಕಾರಿಡಾರ್ಗೆ ಪ್ರವೇಶಿಸಿ ಆವರಣದ ಅಲಂಕೃತ ಉತ್ತರ ದ್ವಾರದ ಮೂಲಕ 'ಮಂದಿರ ಪರಿಸರ' ತಲುಪುತ್ತಾರೆ. ಒಳಗಿರುವ ಶಿವಲಿಂಗಕ್ಕೂ ಗಂಗಾಜಲ ಅರ್ಪಿಸಲಿದ್ದಾರೆ.
* ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಕಾಶಿ ವಿಶ್ವನಾಥ ದೇಗುಲವನ್ನು ರಾಷ್ಟ್ರ ಮತ್ತು ಜಗತ್ತಿಗೆ ಹೊಸ 'ಧಾಮ'ವಾಗಿ ಪ್ರಸ್ತುತಪಡಿಸಲಾಗುವುದು. ಇದನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ, ಅವರ ದೃಷ್ಟಿ ಮತ್ತು ಮಾರ್ಗದರ್ಶನ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ 'ಧಾಮ'ದಿಂದ ವಾರಣಾಸಿಗೆ ಹೊಸ, ಜಾಗತಿಕ ಗುರುತನ್ನು ನೀಡುತ್ತದೆ," ಎಂದಿದ್ದಾರೆ.
* ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಯು ಈ ಯೋಜನೆ ಉದ್ಘಾಟನೆ ಲಾಭ ಪಡೆದುಕೊಳ್ಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ತನ್ನ ಅಭಿವೃದ್ಧಿ ಯೋಜನೆಗಳ ಪಟ್ಟಿಗೆ ಹೊಸ ಸೇರ್ಪಡೆ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಕಾರ್ಯತಂತ್ರವೂ ಅಡಗಿದಂತೆ ಗೋಚರಿಸುತ್ತಿದೆ. ಇನ್ನೊಂದೆಡೆ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿ ಮತ್ತು ಪಕ್ಷದ ಪ್ರಮುಖರನ್ನು ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.
* ಈ ಯೋಜನೆಗಾಗಿ ದೇವಾಲಯದ ಸುತ್ತಮುತ್ತಲಿನ 300ಕ್ಕೂ ಹೆಚ್ಚು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಸುಮಾರು 1,400 ಅಂಗಡಿಕಾರರು, ಬಾಡಿಗೆದಾರರು ಮತ್ತು ಮನೆ ಮಾಲೀಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ.
* ಹಳೆಯ ಆಸ್ತಿಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳು ಪತ್ತೆಯಾಗಿದ್ದು, ಈ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
* 3,000ಕ್ಕೂ ಹೆಚ್ಚು ದಾರ್ಶನಿಕರು, ವಿವಿಧ ಧಾರ್ಮಿಕ ಗುರುಗಳು, ಕಲಾವಿದರು ಮತ್ತು ಇತರರು ಉದ್ಘಾಟನೆಗೆ ಸಾಕ್ಷಿಯಾಗಲಿದ್ದಾರೆ.
* 55 ಹೈ-ಡೆಫಿನಿಷನ್ ಕ್ಯಾಮೆರಾಗಳು, ನಾಲ್ಕು ಜಿಮ್ಮಿ ಜಿಬ್ಗಳು ಮತ್ತು ಬೃಹತ್ ಡ್ರೋನ್ನೊಂದಿಗೆ ಅದ್ಧೂರಿ ಸಮಾರಂಭವನ್ನು ಯೋಜಿಸಲಾಗಿದೆ.