ಕಸದ ಗಾಡಿಯಲ್ಲಿ ಪ್ರಧಾನಿ, ಸಿಎಂ ಫೋಟೋ: ಕಸಗುಡಿಸುವವನಿಗೆ ಈಗ ಮತ್ತೆ ಕೆಲಸ
ಮಥುರಾ, ಜುಲೈ 19: ಕಸದ ಗಾಡಿಯಲ್ಲಿ ಪ್ರಧಾನಿ, ಸಿಎಂ ಫೋಟೋ ಇಟ್ಟುಕೊಂಡಿದ್ದ ಕಸ ಗುಡಿಸುವವನಿಗೆ ಈಗ ಮತ್ತೆ ಕೆಲಸ ಸಿಕ್ಕಿದೆ. ಕೆಲ ದಿನಗಳ ಹಿಂದೆ ಮಥುರಾದಲ್ಲಿ ಕಸದ ಗಾಡಿಯೊಳಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋ ಕಂಡುಬಂದಿತ್ತು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದಾಗಿ ಕಸದ ಗಾಡಿಯಲ್ಲಿ ಫೋಟೋ ಹಾಕಿಕೊಂಡು ಹೋಗಿದ್ದಕ್ಕೆ ಗುತ್ತಿಗೆದಾರ ಬಾಬಿ ಅವರಿಗೆ ಕೆಲಸ ಹೋಗಿತ್ತು. ಆದರೆ ನೌಕರರ ಸಂಘ ವಜಾಗೊಂಡ ನೌಕರನಿಗೆ ಕೆಲಸ ನೀಡುವಂತೆ ಒತ್ತಾಯಿಸಿತು. ನೌಕರರ ಸಂಘದ ಒತ್ತಾಯದ ಮೇರೆಗೆ, ನಿರ್ಲಕ್ಷ್ಯಕ್ಕಾಗಿ ನೌಕರ ಕ್ಷಮೆಯಾಚಿಸಿದ ಬಳಿಕ ಅವರನ್ನು ಕೆಲಸಕ್ಕೆ ಮರುಸೇರ್ಪಡೆಗೊಳಿಸಿಕೊಳ್ಳಲಾಗಿದೆ.
ಪುರಸಭೆಯ ಅಧಿಕಾರಿಗಳು ಆತನ ಕ್ಷಮೆಯನ್ನು ಒಪ್ಪಿಕೊಂಡು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಮಥುರಾ ಮುನ್ಸಿಪಲ್ ಕಾರ್ಪೊರೇಶನ್ನ ಮುನ್ಸಿಪಲ್ ಹೆಲ್ತ್ ಆಫೀಸರ್ ಕರೀಮ್ ಅಖ್ತರ್ ಖುರೇಷಿ ಅವರು ನೌಕರನ ಗುತ್ತಿಗೆಯನ್ನು ಪುನಃ ನೀಡಿದರು ಮತ್ತು ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿರಿ ಎಂಬ ಎಚ್ಚರಿಕೆಯೊಂದಿಗೆ ಅವರನ್ನು ನೇಮಿಸಿಕೊಂಡರು. ಇಂತಹ ಬೇಜವಾಬ್ದಾರಿಯಿಂದ ಪೌರಕಾರ್ಮಿಕರ ಬಗ್ಗೆ ಸಾರ್ವಜನಿಕರಿಗೆ ಋಣಾತ್ಮಕ ಚಿತ್ರಣವನ್ನು ತೋರಿಸುವುದು ಸಲ್ಲದು ಎಂದು ನಗರಸಭೆ ಹೇಳಿದೆ.
|
ಬಾಬಿ ಹೇಳಿದ್ದೇನು?
ಮಥುರಾ ಮುನ್ಸಿಪಲ್ ಕಾರ್ಪೊರೇಷನ್ನಿಂದ ಕೆಲಸದಿಂದ ತೆಗೆದು ಹಾಕಲ್ಪಟ್ಟಿರುವ ಬಾಬಿ ಎಂಬ ಉದ್ಯೋಗಿ ತಮ್ಮ ಸ್ಪಷ್ಟೀಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರ ಫೋಟೋವನ್ನು ನನ್ನ ಕಸದ ಗಾಡಿಯಲ್ಲಿ ಎಲ್ಲಿಂದ ಮತ್ತು ಯಾರು ಇಟ್ಟಿದ್ದರು ಎಂದು ನನಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದೇ ಸಮಯದಲ್ಲಿ ದಾರಿಹೋಕರೊಬ್ಬರು ವಿಡಿಯೋ ತೆಗೆದಿದ್ದು, ನಾನು ಹಾಗೆ ಮಾಡಬೇಡಿ ಎಂದು ಮನವಿ ಮಾಡಿದರೂ ಆತ ವಿಡಿಯೋ ಮಾಡಿದ. ನಾನು ಬಡವನಾಗಿದ್ದು, ಸ್ವಚ್ಛತಾ ಕಾರ್ಮಿಕನಾಗಿ ಕುಟುಂಬವನ್ನು ನಡೆಸುತ್ತಿದ್ದೇನೆ ಎಂದು ಕಸಗುಡಿಸುವ ಬಾಬಿ ಹೇಳಿದರು.
ದಾರಿಹೋಕರಿಂದ ವಿಡಿಯೋ
ಇದೇ ನೈರ್ಮಲ್ಯ ಕಾರ್ಯಕರ್ತ ಬಾಬಿ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಮಥುರಾದ ಜನರಲ್ಗಂಜ್ ಪ್ರದೇಶದಲ್ಲಿ ಕಸದ ಟ್ರಾಲಿಯಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರ ಚಿತ್ರಗಳನ್ನು ಸಾಗಿಸುವುದನ್ನು ತೋರಿಸಲಾಗಿದೆ. ಈ ವೇಳೆ ಇಲ್ಲಿ ಹಾದು ಹೋಗುತ್ತಿದ್ದ ಕೆಲವರು ಪ್ರಧಾನಿ ಮತ್ತು ಸಿಎಂ ಅವರ ಚಿತ್ರಗಳ ಮೇಲೆ ಕಣ್ಣಿಟ್ಟರು. ಕಸ ಗುಡಿಸುವವರನ್ನು ಅಡ್ಡಿಪಡಿಸಿದಾಗ ಅವರು ಜಗಳವಾಡಿದರು. ಜನರು ಅದನ್ನು ವಿಡಿಯೋ ಕೂಡ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶನಿವಾರ ಕಸದಲ್ಲಿ ಪ್ರಧಾನಿ ಮತ್ತು ಸಿಎಂ ಅವರ ಫೋಟೋ ವಿಡಿಯೋ ವೈರಲ್ ಆಗಿದ್ದು, ಪಾಲಿಕೆ ಅಧಿಕಾರಿಗಳಲ್ಲಿ ಆತಂಕ ಮನೆ ಮಾಡಿತ್ತು. ಈ ಘಟನೆಯ ನಂತರ, ಬಾಬಿ ಅವರ ನಿರ್ಲಕ್ಷ್ಯದ ಕಾರಣದಿಂದ ಕೆಲಸದಿಂದ ವಜಾ ಮಾಡಲಾಯಿತು.
ಅಧಿಕಾರಿಗಳು ಪರಿಶೀಲನೆ
ಪ್ರಕರಣದ ವಿಡಿಯೋ ವೈರಲ್ ಆದ ಬಳಿಕ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದಾದ ಬಳಿಕ ವಿಷಯ ಪರಿಶೀಲಿಸಿದ ಬಳಿಕ ಗುತ್ತಿಗೆ ಸ್ವೀಪರ್ ಸೇವೆಯನ್ನು ವಜಾಗೊಳಿಸಲಾಗಿದೆ. ಈ ವೇಳೆ ಹೆಚ್ಚುವರಿ ಪೌರಾಯುಕ್ತ ಸತೇಂದ್ರ ತಿವಾರಿ ಮಾತನಾಡಿ, ಗುತ್ತಿಗೆ ಸ್ವೀಪರ್ ಮೇಲೆ ತಕ್ಷಣ ಕ್ರಮ ಕೈಗೊಂಡು ಅವರ ಸೇವೆಯನ್ನು ವಜಾಗೊಳಿಸಲಾಗಿದೆ. ಸದ್ಯ ಆತನಿಗೆ ಕೆಲಸವನ್ನು ನೀಡಲಾಗಿದೆ.
ಬಾಬಿಗೆ ಮತ್ತೆ ಲಭಿಸಿದ ಕೆಲಸ
ಸ್ವಚ್ಛತಾ ಕಾರ್ಮಿಕರ ಒಕ್ಕೂಟವಾಗಿರುವ ಯುಪಿ ಸ್ಥಳೀಯ ಸಂಸ್ಥೆಗಳ ನೌಕರರ ಫೆಡರೇಷನ್, ನೈರ್ಮಲ್ಯ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳದಿದ್ದರೆ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿರುವುದು ಉಲ್ಲೇಖಾರ್ಹ. ಒಕ್ಕೂಟವು ಬೇಡಿಕೆ ಪತ್ರವನ್ನು ಮಹಾನಗರ ಪಾಲಿಕೆ ಆಗ್ರಾಕ್ಕೆ ಸಲ್ಲಿಸಿತ್ತು. ಸಫಾಯಿ ಕರ್ಮಚಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಈ ಬೇಡಿಕೆ ಪತ್ರವನ್ನು ನಗರಾಭಿವೃದ್ಧಿ ಸಚಿವರಿಗೆ ತಿಳಿಸಲಾಗಿದೆ. ಬಾಬಿಗೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳದಿದ್ದರೆ ಎಲ್ಲ ಸ್ವೀಪರ್ ಗಳು ಧರಣಿ ನಡೆಸಿ, ಬಳಿಕ ರಾಜ್ಯದಲ್ಲಿ ಎಲ್ಲೆಂದರಲ್ಲಿ ಕಸ ಸಂಗ್ರಹಿಸುವ ಹೊಣೆಗಾರಿಕೆ ಸರ್ಕಾರಕ್ಕೆ ಹೊರಬೇಕಾಗುತ್ತದೆ ಎಂದು ಬೇಡಿಕೆ ಪತ್ರದಲ್ಲಿ ಬೆದರಿಕೆ ಹಾಕಲಾಗಿತ್ತು.