ಕಲ್ಯಾಣ್ ಅಂತಿಮ ನಮನದ ವೇಳೆ ರಾಷ್ಟ್ರ ಧ್ವಜದ ಮೇಲೆ ಬಿಜೆಪಿ ಧ್ವಜ: ತೀವ್ರ ವಿವಾದ ಸೃಷ್ಟಿ
ಲಕ್ನೋ, ಆಗಸ್ಟ್ 23: ಬಿಜೆಪಿಯ ಹಿರಿಯ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, 89 ವರ್ಷ ಪ್ರಾಯದ ಕಲ್ಯಾಣ್ ಸಿಂಗ್ ಶನಿವಾರ ವಿಧಿವಶರಾಗಿದ್ದಾರೆ. ಈ ನಡುವೆ ಕಲ್ಯಾಣ್ ಸಿಂಗ್ರ ಪಾರ್ಥಿವ ಶರೀರದ ಅಂತಿಮ ನಮನದ ವಿಧಿ ವಿಧಾನದ ವೇಳೆಯ ಕೆಲವು ಫೋಟೋಗಳು ತೀವ್ರ ವಿವಾದವನ್ನು ಹುಟ್ಟು ಹಾಕಿದೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಕಲ್ಯಾಣ್ ಸಿಂಗ್ರಿಗೆ ಅಂತಿಮ ನಮನ ಸಲ್ಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲಕ್ನೋಗೆ ಆಗಮಿಸಿದ್ದರು. ಕಲ್ಯಾಣ್ ಸಿಂಗ್ ಅವರದ್ದು ಮೌಲ್ಯಯುತ ವ್ಯಕ್ತಿತ್ವ ಮತ್ತು ಅವರು ಜನರಿಗೆ ನಂಬಿಕೆಯ ಸಂಕೇತವಾಗಿರುವ ಸಮರ್ಥ ನಾಯಕರಾಗಿದ್ದರು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದರು.
ಕಲ್ಯಾಣ್ ಸಿಂಗ್ ಪರಿಚಯ; ಶಿಕ್ಷಕ, ಕುಸ್ತಿಪಟು ಬಳಿಕ ಸಿಎಂ
ಆದರೆ ಬಳಿಕ ಕಲ್ಯಾಣ್ ಸಿಂಗ್ ಪಾರ್ಥಿವ ಶರೀರದ ಕಾಫಿನ್ ಮೇಲೆ ಕೆಲವೊಂದು ಬದಲಾವಣೆಯನ್ನು ಮಾಡಲಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ ಟ್ವೀಟ್ನಲ್ಲಿ ಕಲ್ಯಾಣ್ ಸಿಂಗ್ರ ಪಾರ್ಥಿವ ಶರೀರದ ಮೇಲೆ ರಾಷ್ಟ್ರೀಯ ಧ್ವಜವನ್ನು ಹಾಕಲಾಗಿದ್ದು, ಆದರೆ ಅದರ ಮೇಲೆ ಪುನಃ ಬಿಜೆಪಿಯ ಧ್ವಜ ಹಾಕಲಾಗಿರುವುದು ಕಂಡು ಬಂದಿದೆ. ಬಿಜೆಪಿಯ ಧ್ವಜವು ರಾಷ್ಟ್ರ ಧ್ವಜವನ್ನು ಅರ್ಧದಷ್ಟು ಮುಚ್ಚಿದೆ.
ಈ ಹಿನ್ನೆಲೆ ಈ ವಿಚಾರವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟ್ಟರ್ನಲ್ಲಿ ಬೊಟ್ಟು ಮಾಡಿ ತೋರಿಸಿದ್ದಾರೆ. "ರಾಷ್ಟ್ರ ಗೀತೆ ಹಾಕುವಾಗ ನೇರವಾಗಿ ನಿಲ್ಲುವ ಬದಲಾಗಿ ತನ್ನ ಕೈಯನ್ನು ಹೃದಯದ ಮೇಲೆ ಇರಿಸಿದ ಕಾರಣ ಸುಮಾರು ನಾಲ್ಕು ವರ್ಷಗಳ ಕಾಲ ಕೋರ್ಟ್ನಲ್ಲಿ ಪ್ರಕರಣವಿದ್ದವರು, ಅವಮಾನದ ಬಗ್ಗೆ ಆಡಳಿತ ಪಕ್ಷ ಹೇಗೆ ಭಾವನೆ ಹೊಂದಿದೆ ಎಂಬುವುದನ್ನು ರಾಷ್ಟ್ರಕ್ಕೆ ಹೇಳಬೇಕಾಗುತ್ತದೆ ಎಂದು ನನ್ನ ಭಾವನೆ," ಎಂದು ಮಾಧ್ಯಮವೊಂದರ ವರದಿಯನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಿದ್ದಾರೆ.
ಇನ್ನು ಯುವ ಕಾಂಗ್ರೆಸ್ ಮುಖ್ಯಸ್ಥ ಶ್ರೀನಿವಾಸ್ ಬಿ ವಿ ಟ್ವೀಟ್ ಮಾಡಿದ್ದು, ರಾಷ್ಟ್ರ ಧ್ವಜದ ಮೇಲೆ ತಮ್ಮ ಪಕ್ಷದ ಧ್ವಜವನ್ನು ಹಾಕುವುದು ನೂತನ ಭಾರತದಲ್ಲಿ ಸರಿಯೇ?," ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದೆ. "ಭಾರತವು ರಾಷ್ಟ್ರ ಧ್ವಜಕ್ಕೆ ಮಾಡಿದ ಈ ಅವಮಾನವನ್ನು ಎಂದಿಗೂ ಮರೆಯುವುದಿಲ್ಲ," ಎಂದು ಹೇಳಿದೆ. ಸಮಾಜವಾದಿ ಪಕ್ಷದ ವಕ್ತಾರ ಘನ ಶ್ಯಾಮ ತಿವಾರಿ, "ರಾಷ್ಟ್ರದ ಮೇಲೆ ಪಕ್ಷ. ತ್ರಿವಣ ಧ್ವಜದ ಮೇಲೆ ಮತ್ತೊಂದು ಧ್ವಜ. ಬಿಜೆಪಿಯು ಎಂದಿನಂತೆಯೇ ಇದೆ. ಯಾವುದೇ ವಿಷಾದವಿಲ್ಲ, ಯಾವುದೇ ಪಶ್ಚಾತ್ತಾಪವಿಲ್ಲ, ಯಾವುದೇ ದುಃಖವಿಲ್ಲ, ಸಂತಾಪವಿಲ್ಲ," ಎಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ನಿಧನ
ರಾಷ್ಟ್ರ ಧ್ವಜದ ಮೇಲೆ ಬಿಜೆಪಿಯ ಧ್ವಜ ಹಾಕಿರುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರಕ್ಕೆ ಮಾಡುವ ಅವಮಾನ ತಡೆಯುವ ಸೆಕ್ಷನ್ 2 ರ ಪ್ರಕಾರ ಇದು ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನವಾಗಿದೆ. "ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕ ದೃಷ್ಟಿಕೋನದಲ್ಲಿ ಯಾರೇ ಆಗಲಿ ಭಾರತೀಯ ರಾಷ್ಟ್ರಧ್ವಜ ಅಥವಾ ಭಾರತದ ಸಂವಿಧಾನ ಅಥವಾ ಅದರ ಯಾವುದೇ ಭಾಗವನ್ನು ಸುಡುವುದು, ವಿರೂಪಗೊಳಿಸುವುದು, ಅಪವಿತ್ರಗೊಳಿಸುವುದು, ನಾಶಪಡಿಸುವುದು, ತುಳಿಯುವುದು ಅಥವಾ ಅವಮಾನವನ್ನು ಮಾಡುವುದು ಅಥವಾ ಅವಹೇಳನ ಮಾಡುವುದು ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು," ಎಂದು ಈ ಸೆಕ್ಷನ್ 2 ಹೇಳುತ್ತದೆ.
ಈ ವರ್ಷದಲ್ಲಿ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಒತ್ತಾಯಿಸಿ ನಡೆಸಲಾಗುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ರೈತರ ಒಂದು ಗುಂಪು ಕೆಂಪು ಕೋಟೆಯ ಆವರಣದಲ್ಲಿ ಬೇರೆ ಧ್ವಜವನ್ನು ಹಾರಿಸಿತ್ತು.
(ಒನ್ ಇಂಡಿಯಾ ಸುದ್ದಿ)