ಯುಪಿ ಚುನಾವಣೆ ಅಖಾಡ: ಪವಾರ್-ಅಖಿಲೇಶ್ ಮೈತ್ರಿ, ಕುತೂಹಲ ಮೂಡಿಸಿದ ರಣತಂತ್ರ
ಲಕ್ನೋ, ಜು.28: ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶರದ್ ಪವಾರ್ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಅಖಿಲೇಶ್ ಯಾದವ್ರ ಸಮಾಜವಾದಿ ಪಕ್ಷ (ಎಸ್ಪಿ) ಒಟ್ಟಾಗಿ ಹೋರಾಡಲು ನಿರ್ಧರಿಸಿದೆ. 2017 ರಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೋಲಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಮೈತ್ರಿಯ ನಿರ್ಧಾರದ ಬಗ್ಗೆ ಚರ್ಚಿಸಲು ಪವಾರ್ ಮತ್ತು ಅಖಿಲೇಶ್ ದೂರವಾಣಿಯಲ್ಲಿ ಮಾತನಾಡಿದರು. ಆದರೆ ಸೀಟು ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಲಾಗಿದೆ. ಕೇಸರಿ ಪಕ್ಷ ಬಿಜೆಪಿಯ ವಿರುದ್ದ ಐಕ್ಯ ಮೈತ್ರಿ ಒಕ್ಕೂಟ ಮಾಡುವ ಉದ್ದೇಶದಿಂದ ಪವಾರ್, ತರ "ಸಮಾನ ಮನಸ್ಕ" ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಖಿಲೇಶ್ ಯಾದವ್, ಬಿಜೆಪಿ "ಜನ ವಿರೋಧಿ" ಪಕ್ಷವಾಗಿದ್ದು, ಸರ್ಕಾರವನ್ನು "ದ್ವೇಷ" ದಿಂದ ನಡೆಸುತ್ತಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯು ಪ್ರಜಾಪ್ರಭುತ್ವವನ್ನು ಉಳಿಸುವ "ಕೊನೆಯ ಅವಕಾಶ" ಎಂದು ಹೇಳಿದ್ದರು. ಈ ಮೂಲಕ ಬಿಜೆಪಿಗೆ ವಿರುದ್ದವಾಗಿ ಎಸ್ಪಿಗೆ ಮತ ಹಾಕಿ ಎಂದು ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಗೆ ಒಂದು ವರ್ಷ ಮುಂಚೆಯೇ ಮನವಿ ಮಾಡಿದ್ದರು.
ಇನ್ನು ಉತ್ತರಪ್ರದೇಶದತ್ತ: ಬಿಎಸ್ಪಿಯಲ್ಲಿ ಜಾತವ ಸಮುದಾಯದ ನಾಯಕತ್ವದ ಇತಿಹಾಸ ಇಲ್ಲಿದೆ
ಇನ್ನು "ನಾವು ಉತ್ತಪ್ರದೇಶದಲ್ಲಿ 350 ಸ್ಥಾನಗಳನ್ನು ಗಳಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ಹಗಲು ರಾತ್ರಿ ಕೆಲಸ ಮಾಡಬೇಕಾಗುತ್ತದೆ," ಎಂದು ಯಾದವ್ ಹೇಳಿದ್ಧಾರೆ. ಪಕ್ಷದ ಕಾರ್ಯಕರ್ತರು ಬಿಜೆಪಿಯ "ತಂತ್ರಗಳ" ಬಗ್ಗೆ ಎಚ್ಚರದಿಂದಿರಬೇಕು ಎಂದು ಕೂಡಾ ಸೂಚಿಸಿದ್ದಾರೆ.
ಕ್ರಾಂತಿ ರಥ: ಯಾದವ್ ಯುಪಿ ಭೇಟಿ
ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲು ಒಂದು ವರ್ಷ ಇರುವಾಗಲೇ ಬಿಜೆಪಿ, ಕಾಂಗ್ರೆಸ್, ಎಸ್ಪಿ, ಎನ್ಸಿಪಿ ಸೇರಿದಂತೆ ಹಲವಾರು ಪಕ್ಷಗಳು ಸಭೆಗಳನ್ನು ನಡೆಸುತ್ತಿದೆ. ಸಮಾಜವಾದಿ ಪಕ್ಷದ (ಎಸ್ಪಿ) ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯತ್ತ ಚಿತ್ತ ನೆಟ್ಟಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸವನ್ನು ಪುನರಾರಂಭಿಸಿದ್ದಾರೆ. ಜುಲೈ 21 ರಂದು ಲಕ್ನೋದ ಉನ್ನಾವೊಗೆ ಒಂದು ದಿನದ ಭೇಟಿ ನೀಡುವ ಮೂಲಕ ತಮ್ಮ ಎರಡನೇ ಬಾರಿಯ ರಾಜ್ಯ ಪ್ರವಾಸವನ್ನು ಆರಂಭಿಸಿದ್ದಾರೆ. ಎಸ್ಪಿ ಪಿತಾಮಹ ಮುಲಾಯಂ ಸಿಂಗ್ ಯಾದವ್ ಕ್ರಾಂತಿ ರಥ ಅಭಿಯಾನವನ್ನು ಮಾಡಿದ್ದರು. ಈ ಅಭಿಯಾನವು ಇಂದಿಗೂ ಯುಪಿಯಲ್ಲಿ ಅಚ್ಚಳಿಯದೆ ಉಳಿದಿದೆ. ಎಸ್ಪಿ ತನ್ನ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿಗೆ ಬಹುಮತದೊಂದಿಗೆ ಗೆದ್ದಿತ್ತು. ಅದೇ ರೀತಿಯಲ್ಲಿ ಈ ಚುನಾವಣಾ ತಯಾರಿಯೂ ಇರುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಈ ನಡುವೆ ಎನ್ಸಿಪಿ, ಎಸ್ಪಿ ಮೈತ್ರಿ ಯುಪಿ ಚುನಾವಣೆಯ ಬಗ್ಗೆ ಇನ್ನಷ್ಟು ಕುತೂಹಲ ಕೆರಳಿಸಿದೆ.
ಯುಪಿ ಚುನಾವಣೆಯತ್ತ ಮಾಯಾವತಿ ಚಿತ್ತ: ಬಿಎಸ್ಪಿಯಿಂದ ಬ್ರಾಹ್ಮಣ ಸಮ್ಮೇಳನ
ಉತ್ತರ ಪ್ರದೇಶ ಚುನಾವಣೆಯತ್ತ ಮಾಯಾವತಿ ಚಿತ್ತ
ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಬಹುಜನ ಸಮಾಜ ಪಕ್ಷವು ಬ್ರಾಹ್ಮಣ ಸಮ್ಮೇಳನ ಕಾರ್ಯಕ್ರಮವನ್ನು ಅಯೋಧ್ಯೆಯಲ್ಲಿ ಆಯೋಜಿಸಿದೆ. ಇನ್ನು ಜಾತಿಯ ಆಧಾರದ ಮೇಲೆ ರಾಜಕೀಯ ಪಕ್ಷಗಳು ರ್ಯಾಲಿ ಮತ್ತು ಕಾರ್ಯಕ್ರಮಗಳನ್ನು ನಡೆಸುವುದನ್ನು ಹೈಕೋರ್ಟ್ ನಿಷೇಧಿಸಿದ ನಂತರ ಬ್ರಾಹ್ಮಣ ಸಮ್ಮೇಳನವನ್ನು ಪ್ರಬುದ್ಧ ವರ್ಗದ ಗೌರವಾರ್ಥ ಸೆಮಿನಾರ್ ಎಂದು ಮರುನಾಮಕರಣ ಮಾಡಲಾಗಿದೆ. ಲಕ್ನೋದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಯಾವತಿ ಮಾತನಾಡಿ, "ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬ್ರಾಹ್ಮಣರು ಬಿಜೆಪಿಗೆ ಮತ ಚಲಾಯಿಸುವುದಿಲ್ಲ ಎಂದು ನಾನು ಭರವಸೆ ಹೊಂದಿದ್ದೇನೆ," ಎಂದು ತಿಳಿಸಿದ್ದರು. ಕಳೆದ ಯುಪಿ ವಿಧಾನಸಭಾ ಚುನಾವಣೆಯಲ್ಲಿ "ಮೇಲ್ಜಾತಿಗಳು" ಬಿಜೆಪಿಗೆ ಮತ ಚಲಾಯಿಸಿ ಈಗ ಪಶ್ಚಾತ್ತಾಪ ಪಡುತ್ತಿವೆ ಎಂದು ಮಾಯಾವತಿ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ. ಈಗ ಬಹುಜನ ಸಮಾಜ ಪಕ್ಷದ ಮೇಲೆ ಬ್ರಾಹ್ಮಣರು ನಂಬಿಕೆ ಇಟ್ಟಿದ್ದಾರೆ ಎಂದು ಕೂಡಾ ಹೇಳಿದ್ದಾರೆ.
ಯುಪಿಯಲ್ಲಿ ಬಿಜೆಪಿಯ ಕಾರ್ಯತಂತ್ರ
ಉತ್ತರಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆ ಆರಂಭಕ್ಕೂ ವರ್ಷಕ್ಕೂ ಮೊದಲೇ ಚುನಾವಣಾ ಕಾರ್ಯತಂತ್ರ ರೂಪಿಸಲು ಮೊದಲು ಬಿಜೆಪಿ ಆರಂಭಿಸಿದೆ. ಇದಕ್ಕೆ ಒಂದೆಡೆ ತನ್ನ ಆಡಳಿತವನ್ನು ಉಳಿಸಿಕೊಳ್ಳುವ ಉದ್ದೇಶವಿದ್ದರೆ, ಇನ್ನೊಂದೆಡೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ಬಿಜೆಪಿ ಶಾಸಕರೇ ಬಹಿರಂಗ ಹೇಳಿಕೆ ನೀಡಲು ಆರಂಭಿಸಿದ್ದೂ ಕಾರಣವಾಗಿದೆ. ಈ ವಿಚಾರದಲ್ಲಿ ಬಿ.ಎಲ್ ಸಂತೋಷ್, ಆರ್ಎಸ್ಎಸ್ ನಾಯಕರು ಸೇರಿ ಹಲವಾರು ಬಾರಿ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಬಿಜೆಪಿ ನಾಯಕತ್ವದ ಬದಲಾವಣೆಯ ಸುಳಿವು ಕೂಡಾ ಬಂದಿತ್ತು. ಉತ್ತರಪ್ರದೇಶದಲ್ಲಿ ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಿದ ರೀತಿಯನ್ನು ಆಡಳಿತರೂಢ ಬಿಜೆಪಿ ಪಕ್ಷದ ನಾಯಕರೇ ಟೀಕಿಸಿದ್ದು, ''ಎರಡನೇ ಅಲೆಯ ಸಂದರ್ಭದ ಪ್ರತಿ ಹಳ್ಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ,'' ಎಂದು ಹೇಳಿದ್ದರು. ಈ ಬಗ್ಗೆ ಹೇಳಿಕೆ ನೀಡಿರುವ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ರಾಮ್ ಇಕ್ಬಾಲ್ ಸಿಂಗ್, ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನ ನಿರ್ವಹಣೆಯನ್ನು ಪ್ರಶ್ನಿಸಿದ್ದಾರೆ. ರಾಮ್ ಇಕ್ಬಾಲ್ ಸಿಂಗ್, ''ಕೋವಿಡ್ನ ಮೊದಲ ಅಲೆಯಿಂದಾಗಿ ಆರೋಗ್ಯ ಇಲಾಖೆಯು ಯಾವುದೇ ಪಾಠವನ್ನು ಕಲಿತಿಲ್ಲ. ಇದರಿಂದಾಗಿ ಎರಡನೇ ಅಲೆಯ ಸಂದರ್ಭದಲ್ಲಿ ಹೆಚ್ಚಿನ ಕೋವಿಡ್ ಸಾವಿಗೆ ಕಾರಣವಾಗಿದೆ,'' ಎಂದು ಅಭಿಪ್ರಾಯಿಸಿದ್ದರು. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಬಿ ಎಲ್ ಸಂತೋಷ್, ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಆಡಳಿತವನ್ನು ಹೊಗಳಿದ್ದರು.
ಯುಪಿ 2022ರ ಚುನಾವಣೆ: 'ನಮಗೆ 300 ಸ್ಥಾನಗಳಲ್ಲಿ ಗೆಲುವು ಖಚಿತ' ಎಂದ ಬಿಜೆಪಿ
'ಮಿಷನ್ ಉತ್ತರ ಪ್ರದೇಶ-ಉತ್ತರಾಖಂಡ'
ಕೇಂದ್ರ ಬಿಜೆಪಿ ಸರ್ಕಾರದ ಮೂರು ಕೃಷಿ ಕಾನೂನಿನ ವಿರುದ್ದ ಸಿಡಿದೆದ್ದಿರುವ ರೈತರು ಮುಂದಿನ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ನಿರ್ಧರಿಸಿದೆ. ಭಾರತೀಯ ಕಿಸಾನ್ ಯೂನಿಯನ್ ನಾಯಕ, ರೈತ ಮುಖಂಡ ರಾಕೇಶ್ ಟಿಕಾಯತ್ "2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮಿಷನ್ ಉತ್ತರ ಪ್ರದೇಶ-ಉತ್ತರಾಖಂಡ" ಅನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ.
"ನಾವು ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸಿದ್ದೇವೆ ಮತ್ತು ಈಗ ನಾವು ಬಿಜೆಪಿಯನ್ನು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಸೋಲಿಸಲಿದ್ದೇವೆ. ಏಕೆಂದರೆ ಈ ಬಿಜೆಪಿ ಸರ್ಕಾರ ರೈತ ವಿರೋಧಿ ಕಪ್ಪು ಕಾನೂನುಗಳನ್ನು ರದ್ದುಗೊಳಿಸಲು ಸಿದ್ಧವಾಗಿಲ್ಲ. ಮೋರ್ಚಾದ ಏಕೈಕ ಉದ್ದೇಶವೆಂದರೆ ಬಿಜೆಪಿಯನ್ನು ಅಧಿಕಾರದಿಂದ ತೆಗೆದುಹಾಕುವುದು. ಅದರಿಂದಾಗಿ ಹೊಸ ಸರ್ಕಾರವು ಮೋದಿ ಸರ್ಕಾರ ಜಾರಿಗೆ ತಂದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸುತ್ತದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿಲ್ಲ," ಎಂದು ಟಿಕಾಯತ್ ಸ್ಪಷ್ಟಪಡಿಸಿದ್ದರು. "ನಾವು ಆಡಳಿತಾರೂಢ ಬಿಜೆಪಿಯೊಂದಿಗೆ ಯುದ್ಧದಲ್ಲಿದ್ದೇವೆ. ದೇಶದ ಒಬ್ಬ ರೈತ ಕೂಡ ಭವಿಷ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲ. ಬಿಜೆಪಿಯನ್ನು ಸೋಲಿಸಲು ಸಮರ್ಥರಾದವರನ್ನು ಬೆಂಬಲಿಸುವುದು ನಮ್ಮ ಸರಳ ತಂತ್ರ. ನಾವು ಇದನ್ನು ಬಂಗಾಳದಲ್ಲಿ ಪರಿಣಾಮಕಾರಿಯಾಗಿ ಮಾಡಿದ್ದೇವೆ ಮತ್ತು ಅದನ್ನು 2022 ರಲ್ಲಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪುನರಾವರ್ತಿಸುತ್ತೇವೆ," ಎಂದು ರೈತ ಮುಖಂಡರು ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)