"ನೇಪಾಳದಿಂದ ನುಸುಳಿ ಬಂದ ಪಾಕ್ ಉಗ್ರರಿಂದ ಆಯೋಧ್ಯೆಗೆ ಅಪಾಯ"
ಲಕ್ನೋ, ನವೆಂಬರ್ 06: ಪಾಕಿಸ್ತಾನ ಮೂಲದ ಉಗ್ರರು ನೇಪಾಳ ಮಾರ್ಗವಾಗಿ ಭಾರತ ಪ್ರವೇಶಿಸಿ ಉತ್ತರಪ್ರದೇಶಕ್ಕೆ ಕಾಲಿರಿಸಿದ್ದಾರೆ. ಅಯೋಧ್ಯಾ ವಿವಾದ ಆದೇಶ ಹೊರ ಬೀಳುವ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದಾರೆ ಎಂಬ ಎಚ್ಚರಿಕೆ ಸಂದೇಶ ಗುಪ್ತಚರ ಇಲಾಖೆಯಿಂದ ಸಿಕ್ಕಿದೆ.
ಇಂಡಿಯಾ ಟುಡೆ ಟಿವಿ ವರದಿ ಪ್ರಕಾರ ಸುಮಾರು 7 ಮಂದಿ ಉಗ್ರರು ತಲೆ ಮರೆಸಿಕೊಂಡು ಓಡಾಡಿಕೊಂಡಿದ್ದು, ಎಲ್ಲರೂ ಒಂದೇ ಗುಂಪಿನ ಸದಸ್ಯರಾಗಿದ್ದಾರೆ. ಉತ್ತರಪ್ರದೇಶ ಪ್ರವೇಶಿಸಿರುವ ಉಗ್ರರು ಸದ್ಯ ಅಯೋಧ್ಯಾ, ಫೈಜಾಬಾದ್ ಹಾಗೂ ಗೋರಖಪುರ್ ನಲ್ಲಿ ನೆಲೆಸಿರುವ ಮಾಹಿತಿ ಸಿಕ್ಕಿದೆ.
ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿ
ಏಳು ಮಂದಿ ಉಗ್ರರ ಪೈಕಿ ಐವರ ಗುರುತು ಪತ್ತೆ ಹಚ್ಚಲಾಗಿದೆ. ಮೊಹಮ್ಮದ್ ಯಾಕುಬ್, ಅಬು ಹಮ್ಜಾ, ಮೊಹಮ್ಮದ್ ಷಹಾಬಾದ್, ನಿಸಾರ್ ಅಹ್ಮದ್ ಹಾಗೂ ಮೊಹಮ್ಮದ್ ಕ್ವಾಮಿ ಚೌಧುರಿ ಎಂದು ತಿಳಿದು ಬಂದಿದೆ.
ಆಯೋಧ್ಯಾ ಭೂ ವಿವಾದ: 1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು.
2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ. 2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ಮುಕ್ತಾಯವಾಗಿದ್ದು, ಅಂತಿಮ ಆದೇಶ ನವೆಂಬರ್ 17ರೊಳಗೆ ನಿರೀಕ್ಷಿಸಲಾಗಿದೆ.
ಅಯೋಧ್ಯಾ ಅಂತಿಮ ತೀರ್ಪು: ಹಿಂದೂ, ಮುಸ್ಲಿಮರಿಗೆ ಒಪ್ಪಿಗೆಯಾಗದಿದ್ದರೆ...?
ಹೀಗಾಗಿ, ಅಯೋಧ್ಯಾ ಸೇರಿದಂತೆ ಉತ್ತರಪ್ರದೇಶದ ಪ್ರಮುಖ ನಗರಗಳಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಉತ್ತರಪ್ರದೇಶದ ಡಿಜಿಪಿ ಒಪಿ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, "ಏಳು ಜನ ಉಗ್ರರು ಉತ್ತರಪ್ರದೇಶಕ್ಕೆ ಕಾಲಿರಿಸಿದ್ದಾರೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಒಂದು ವೇಳೆ ಕೋಮು ಗಲಭೆ ಉಂಟಾಗಿ, ಪ್ರತಿಭಟನೆ ಕೈ ಮೀರಿದರೆ ರಾಷ್ಟ್ರ್ರೀಯ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.