ದೆಹಲಿಯಲ್ಲಿ ದಾರಿ ಗೊತ್ತಿಲ್ಲದ ರೈತರ ಹಾದಿ ತಪ್ಪಿಸಿತಾ ಬಿಜೆಪಿ ಸರ್ಕಾರ!?
ಲಕ್ನೋ, ಫೆಬ್ರವರಿ.28: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಮೂರು ವಿವಾದಿತ ಕೃಷಿ ಕಾಯ್ದೆಗಳು ರೈತರ ಪಾಲಿಗೆ "ಡೆತ್ ವಾರೆಂಟ್" ಆಗಲಿದೆ ಎಂದು ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದ್ದಾರೆ.
ಉತ್ತರ ಪ್ರದೇಶದ ಮೀರತ್ ನಲ್ಲಿ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು. ರೈತರ ಭೂಮಿಯನ್ನು ಅವರಿಂದ ಕಿತ್ತುಕೊಂಡು ಮೂರ್ನಾಲ್ಕು ಉದ್ಯಮಿಗಳಿಗೆ ಹಂಚುವುದಕ್ಕೆ ಕೇಂದ್ರ ಸರ್ಕಾರವು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
Explained: ಕೇಂದ್ರದ ಚಳಿ ಬಿಡಿಸಿತಾ ರೈತರ ಒಂದೇ ಒಂದು ನಿರ್ಧಾರ!?
ದೇಶದಲ್ಲಿ ರೈತರು ತಮ್ಮ ಜಮೀನಿನಲ್ಲೇ ತಾವೇ ಕಾರ್ಮಿಕರಾಗಿ ದುಡಿಯುವಂತಾ ಸ್ಥಿತಿಗೆ ಅವರನ್ನು ತಳ್ಳುವುದಕ್ಕೆ ಕೇಂದ್ರ ಸರ್ಕಾರವು ಹೊರಟಿದೆ. ಆದ್ದರಿಂದಲೇ ಈ ರೈತರ ಹೋರಾಟವು ಮಾಡು ಇಲ್ಲವೇ ಮಡಿ ಪ್ರತಿಭಟನೆ ಆಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಬ್ರಿಟಿಷರೂ ಕೂಡಾ ಇಂಥ ಆಡಳಿತ ನೀಡಿರಲಿಲ್ಲ
ಭಾರತದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬ್ರಿಟಿಷರೂ ಕೂಡಾ ನಮ್ಮ ದೇಶದ ರೈತರ ಮೇಲೆ ಇಷ್ಟರ ಮಟ್ಟಿಗೆ ದಬ್ಬಾಳಿಕೆ ನಡೆಸಿರಲಿಲ್ಲ. ಆದರೆ ಪ್ರಸ್ತುತ ದೇಶದಲ್ಲಿ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರವು ಬ್ರಿಟಿಷರನ್ನೂ ಹಿಂದಿಕ್ಕಿದೆ. ಅಷ್ಟರ ಮಟ್ಟಿಗೆ ರೈತರ ಮೇಲೆ ದಬ್ಬಾಳಿಕೆ ನಡೆಸುವುದಕ್ಕೆ ಮುಂದಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
|
"ಸರ್ಕಾರದಿಂದ ರೈತರನ್ನು ದಾರಿ ತಪ್ಪಿಸುವ ಯತ್ನ"
ನವದೆಹಲಿಯಲ್ಲಿ ಜನವರಿ.26ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಸಿಎಂ ಅರವಿಂದ್ ಕೇಜ್ರಿವಾಲ್ ದೂಷಿಸಿದರು. "ದೆಹಲಿ ಹಿಂಸಾಚಾರ ಪೂರ್ವನಿಯೋಜಿತವಾಗಿತ್ತು. ದೆಹಲಿ ಬೀದಿಗಳ ಬಗ್ಗೆ ತಿಳಿಯದ ಕಾರಣಕ್ಕೆ ಉದ್ದೇಶಪೂರ್ವಕವಾಗಿ ತಪ್ಪು ಮಾರ್ಗವನ್ನು ತೋರಿಸಲಾಗಿದೆ ಎಂದು ಅನೇಕ ಜನರು ನನಗೆ ಹೇಳಿದ್ದಾರೆ. ಕೆಂಪುಕೋಟೆಯ ಮೇಲೆ ಅವರ(ಬಿಜೆಪಿ) ಕಾರ್ಯಕರ್ತರೇ ಧ್ವಜ ಹಾರಿಸಿದ್ದರು. ನಮ್ಮ ರೈತರು ಏನಾದರೂ ಆಗಿರಬಹುದು, ಆದರೆ ದೇಶದ್ರೋಹಿಗಳಂತೂ ಅಲ್ಲವೇ ಅಲ್ಲ" ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ರೈತರ ವಿರುದ್ಧ ಪ್ರಕರಣ ದಾಖಲಿಸಿಕ ಕೇಂದ್ರ
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ ಸರ್ಕಾರವು ರೈತರ ವಿರುದ್ದವೇ ರಾಷ್ಟ್ರವಿರೋಧಿ ಚಟುವಟಿಕೆ ನಡೆಸಿರುವ ಆರೋಪದಡಿ ಪ್ರಕರಣವನ್ನು ದಾಖಲಿಸಿದೆ. ಬ್ರಿಟಿಷರಿಗೂ ಸಹ ಇಂಥ ಧೈರ್ಯ ಇರಲಿಲ್ಲ. ಅವರು ನಮ್ಮ ದೇಶದ ರೈತರನ್ನು ಯಾವತ್ತಿಗೂ ಭಯೋತ್ಪಾದಕರು ಎಂದು ಕರೆದಿರಲಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯ ಗಡಿಯಲ್ಲಿ 96ನೇ ದಿನದ ಹೋರಾಟ
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ 96 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ರೈತ ಹೋರಾಟದಲ್ಲಿ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ.