ಭಾರತದಲ್ಲಿ ಈ ಎರಡು ವಿಧದ ಜನರು ಮಾತ್ರ ಸುರಕ್ಷಿತ; ಪ್ರಿಯಾಂಕಾ ಗಾಂಧಿ
ನವದೆಹಲಿ, ಅಕ್ಟೋಬರ್ 10: 'ಆಡಳಿತ ಪಕ್ಷದ ನಾಯಕರು ಹಾಗೂ ಅವರ ಕೋಟ್ಯಧಿಪತಿ ಸ್ನೇಹಿತರು ಮಾತ್ರ ಭಾರತದಲ್ಲಿ ಸುರಕ್ಷಿತವಾಗಿರಲು ಸಾಧ್ಯ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಕ್ಷೇತ್ರ ವಾರಾಣಸಿಯಲ್ಲಿ 'ಕಿಸಾನ್ ನ್ಯಾಯ್ ಪ್ರತಿಭಟನಾ ಮೆರವಣಿಗೆ' ಸಂದರ್ಭ ಈ ಹೇಳಿಕೆ ನೀಡಿದ್ದಾರೆ.
ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಪಟ್ಟು
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಾಲ್ವರು ರೈತರನ್ನೊಳಗೊಂಡಂತೆ ಎಂಟು ಮಂದಿ ಪ್ರತಿಭಟನೆ ವೇಳೆ ಸಾವನ್ನಪ್ಪಿದ ಸಂಗತಿ ನಡೆದದ್ದನ್ನು ಉಲ್ಲೇಖಿಸಿ ಈ ಮಾತನ್ನಾಡಿದ್ದಾರೆ.
'ನಾನು ಇಲ್ಲಿನ ಜನರೊಂದಿಗೆ ಮಾತನಾಡಿದ್ದೇನೆ. ಜನರು ತಮಗೆ ನೌಕರಿಯಿಲ್ಲ ಹಾಗೂ ಆದಾಯವೂ ಇಲ್ಲ ಎಂದು ಹೇಳಿಕೊಂಡಿದ್ದಾರೆ. ರೈತರು, ದಲಿತರು ಹಾಗೂ ಮಹಿಳೆಯರಿಗೆ ಇಲ್ಲಿ ಕಿರುಕುಳವಾದಂತೆ ಭಾಸವಾಗುತ್ತಿದೆ' ಎಂದಿದ್ದಾರೆ. ಯಾವುದೇ ಜಾತಿ ಹಾಗೂ ಧರ್ಮಕ್ಕೆ ಸೇರಿದವರೂ ಇಲ್ಲಿ ಸುರಕ್ಷಿತವಾಗಿಲ್ಲ' ಎಂದು ಆರೋಪಿಸಿದ್ದಾರೆ.
'ಈ ದೇಶದಲ್ಲಿ ಪ್ರಧಾನಿ, ಅವರ ಮಂತ್ರಿ ಮಂಡಳಿ, ಅವರ ಪಕ್ಷದ ಜನರು ಹಾಗೂ ಅವರ ಕೋಟ್ಯಧಿಪತಿ ಸ್ನೇಹಿತರು ಮಾತ್ರ ಸುರಕ್ಷಿತವಾಗಿದ್ದಾರೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ದೇಶ ಅವನತಿಯತ್ತ ಸಾಗುತ್ತಿದೆ' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಲಖಿಂಪುರ್ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿ ಆಶಿಷ್ ಮಿಶ್ರಾ ಹಾಜರು
ಮೆರವಣಿಗೆಗೂ ಮುನ್ನ ಪ್ರಿಯಾಂಕಾ ಗಾಂಧಿ ಕಾಶಿ ವಿಶ್ವನಾಥ ಹಾಗೂ ಕೂಶ್ಮಂಡ ದೇಗುಲಗಳಿಗೆ ಭೇಟಿ ನೀಡಿದರು. ಉತ್ತರ ಪ್ರದೇಶದ ಹಿರಿಯ ಕಾಂಗ್ರೆಸ್ ಮುಖಂಡ ಪ್ರದೀಪ್ ಮಾತುರ್ ಪ್ರಿಯಾಂಕಾ ಗಾಂಧಿಯನ್ನು ಸ್ವಾಗತಿಸಿದರು.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಆರೋಪಿ ಆಶಿಶ್ ಮಿಶ್ರಾ ಅವರನ್ನು ಭಾನುವಾರ ಬಂಧಿಸಲಾಗಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಪುತ್ರ ಅಶಿಶ್ ಮಿಶ್ರಾ ತಲೆಮರೆಸಿಕೊಂಡಿದ್ದರು. ವಿಚಾರಣೆಗೆ ಸಹಕಾರ ನೀಡಿದ, ಸರಿಯಾಗಿ ಸ್ಪಂದಿಸದ ಆರೋಪದಡಿಯಲ್ಲಿ ಆಶಿಶ್ ಮಿಶ್ರಾ ಬಂಧಿಸಲಾಗಿದೆ ಎಂದು ಡಿಜಿಪಿ ಉಪೇಂದ್ರ ಅಗರ್ವಾಲ್ ಹೇಳಿದ್ದಾರೆ.
ಅಶಿಶ್ ಮಿಶ್ರಾರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗಿದ್ದು, ಅಕ್ಟೋಬರ್ 11ರ ಸೋಮವಾರ ಅರ್ಜಿ ವಿಚಾರಣೆ ನಡೆಯಲಿದೆ.
ಉತ್ತರ ಪ್ರದೇಶ ಸಚಿವ ಅಜಯ್ ಮಿಶ್ರಾ ತೆನಿ ಈಚೆಗೆ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಕುರಿತು ಕಟುವಾದ ಹೇಳಿಕೆ ನೀಡಿದ್ದಲ್ಲದೆ ಪ್ರತಿಭಟಿಸುವವರ ಮೇಲೆ ಕ್ರಮ ಕೈಗೊಳ್ಳುವ ಬಹಿರಂಗ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರ ತವರು ಕ್ಷೇತ್ರ ಲಖಿಂಪುರ ಖೇರಿಯಲ್ಲಿ ಭಾನುವಾರ ಸೇರಿದ್ದ ರೈತರು ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದೇ ಸಂದರ್ಭ ರಸ್ತಾ ರೋಖೋ ನಡೆಸುತ್ತಿದ್ದ ರೈತರ ಮೇಲೆ ಬೆಂಗಾವಲು ವಾಹನ ಹರಿಸಲಾಗಿತ್ತು. ಈ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದರು.
ಆ ಕಾರಿನಲ್ಲಿ ಸಚಿವರ ಪುತ್ರ ಇದ್ದ ಆರೋಪ ಕೇಳಿಬಂದಿವೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರನ್ನು ಲಖಿಂಪುರ ಖೇರಿಗೆ ಭೇಟಿ ನೀಡದಂತೆ ತಡೆದು ವಶಪಡಿಸಿಕೊಳ್ಳಲಾಗಿತ್ತು. ಉತ್ತರ ಪ್ರದೇಶದ ಸೀತಾಪುರ ಪಿಎಸಿ ಗೆಸ್ಟ್ ಹೌಸ್ ನಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ರಾಹುಲ್ ಗಾಂಧಿ ಭೇಟಿಗೂ ತಡೆಒಡ್ಡಿದ್ದು, ಭಾರೀ ವಿರೋಧ ವ್ಯಕ್ತವಾಗಿತ್ತು.
ವ್ಯಾಪಕ ವಿರೋಧದ ನಂತರ ಲಖಿಂಪುರ್ ಖೇರಿಗೆ ತೆರಳಲು ಕಾಂಗ್ರೆಸ್ ನಾಯಕರಿಗೂ ಕೊನೆಗೂ ಉತ್ತರ ಪ್ರದೇಶ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಲಖೀಂಪುರ ಖೇರಿಗೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ ಈ ಹಿಂಸಾಚಾರ ಘಟನೆಯಲ್ಲಿ ಮೃತಪಟ್ಟ ನಾಲ್ಕು ರೈತರ ಕುಟುಂಬಗಳನ್ನು ಭೇಟಿ ಮಾಡಿದ್ದರು.