ಲಖೀಂಪುರ್ ಖೇರಿ ಘಟನೆಗೆ ಪೊಲೀಸರನ್ನೇ ದೂಷಿಸಿದ ಕೇಂದ್ರ ಸಚಿವ ಅಜಯ್ ಮಿಶ್ರಾ!
ಲಕ್ನೋ, ಅಕ್ಟೋಬರ್ 18: "ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಘಟನೆಯಲ್ಲಿ ದುರುದೃಷ್ಟವಶಾತ್ ಮೂವರು ಬಿಜೆಪಿ ಕಾರ್ಯಕರ್ತರೂ ಸಹ ಮೃತಪಟ್ಟಿದ್ದಾರೆ. ಇದು ಸ್ಥಳೀಯ ಆಡಳಿತ ಮತ್ತು ಪೊಲೀಸರ ನಿರ್ಲಕ್ಷ್ಯವನ್ನು ತೋರಿಸುತ್ತದೆ," ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ದೂಷಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಾವಿನ ಬಗ್ಗೆ ಮಾತನಾಡಿದ ಸಚಿವರು ರೈತರ ಸಾವಿನ ಕುರಿತು ತುಟಿ ಪಿಟಕ್ ಎನ್ನಲಿಲ್ಲ ಎಂದು ತಿಳಿದು ಬಂದಿದೆ.
"ರೈತರು ರಸ್ತೆಯನ್ನು ಸ್ವಾಧೀನಪಡಿಸಿಕೊಳ್ಳಲು ಮೊದಲಿಗೆ ಅವಕಾಶ ನೀಡಿಲಾಗಿದ್ದು, ಮಾರ್ಗಮಧ್ಯದಲ್ಲಿ ಬ್ಯಾರಿಕೇಡ್ ಹಾಕಿರಲಿಲ್ಲ. ಈ ಮಧ್ಯೆ ಬದುಕುಳಿದ ಶ್ಯಾಂ ಸುಂದರ್ ಎಂಬಾತ ಪೊಲೀಸರೊಂದಿಗೆ ಆಂಬುಲೆನ್ಸ್ ವರೆಗೆ ತಲುಪಿದ್ದರು, ಆದರೆ ಅವರನ್ನೂ ಸಹ ಎಳೆದೊಯ್ದು ಕೊಂದು ಹಾಕಲಾಗಿದೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲಾಗುವುದು ಹಾಗೂ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು," ಎಂದು ಸಚಿವರು ಸಿಘಾ ಕುರ್ದ ಗ್ರಾಮದಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಹೇಳಿದ್ದಾರೆ.
ಅಕ್ಟೋಬರ್.18ರಂದು ಲಖೀಂಪುರ್ ಖೇರಿ ಹಿಂಸಾಚಾರ ಖಂಡಿಸಿ ರಾಷ್ಟ್ರವ್ಯಾಪಿ ರೈಲುತಡೆ
ಭಾರತೀಯ ಜನತಾ ಪಕ್ಷದ ಇತರೆ ಕಾರ್ಯಕರ್ತರ ಎದುರಿಗೆ ಮಾತನಾಡಿದ ಸಚಿವ ಅಜಯ್ ಮಿಶ್ರಾ, ಲಖೀಂಪುರ್ ಖೇರಿ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಲು ಸರ್ಕಾರವು ಮುಕ್ತ ಅವಕಾಶ ನೀಡುತ್ತದೆ ಎಂದಿದ್ದಾರೆ.
ಬಿಜೆಪಿಯ ಮೂವರು ಮೃತ ಕಾರ್ಯಕರ್ತರಿಗೆ ಸಂತಾಪ:
ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ಹರಿ ಓಂ ಮಿಶ್ರಾ, ಶ್ಯಾಂ ಸುಂದರ್ ನಿಶಾದ್ ಹಾಗೂ ಶುಭಂ ಮಿಶ್ರಾ ಎಂಬ ಮೂವರು ಬಿಜೆಪಿ ಕಾರ್ಯಕರ್ತರ ಸಾವಿನಗೆ ಸಚಿವ ಅಜಯ್ ಮಿಶ್ರಾ ಸಂತಾಪ ಸೂಚಿಸಿದರು. ಬಿಜೆಪಿ ಶಾಸಕ ಯೋಗೀಶ್ ವರ್ಮಾ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಆಚಾರ್ಯ ಸಂಜಯ್ ಮಿಶ್ರಾ, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಶ್ಯಾಮ್ಜಿ ಪಾಂಡೆ ಮತ್ತು ಇತರ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೃತ ಶ್ಯಾಮ್ ಸುಂದರ್ ಸಹೋದರನ ಮಾತು:
"ಪೊಲೀಸ್ ಬಂಧನದಲ್ಲಿ ನನ್ನ ಸಹೋದರನ ಸಾವಿನ ವಿಷಯವನ್ನು ಸಚಿವರು ಪ್ರಸ್ತಾಪಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಮತ್ತು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನನಗೆ ಖಾತ್ರಿಯಿದೆ," ಎಂದು ಶ್ಯಾಮ್ ಸುಂದರ್ ಅವರ ಸಹೋದರ ಸಂಜೀವ್ ನಿಶಾದ್ ತಿಳಿಸಿದ್ದಾರೆ.
ಎಸ್ಐಟಿಯಲ್ಲಿ ಪ್ರಕರಣದ ತನಿಖೆ:
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಆರೋಪಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಇಡೀ ಪ್ರಕರಣದ ತನಿಖೆಯು ಎಸ್ಐಟಿಯಲ್ಲಿದೆ ಎಂದು ಲಖಿಂಪುರ್ ಎಸ್ಪಿ ವಿಜಯ್ ಶುಲ್ ತಿಳಿಸಿದ್ದಾರೆ.
ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ರೈಲುತಡೆ:
ಅಕ್ಟೋಬರ್ 18ರ ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸುಮಾರು ಆರು ಗಂಟೆಗಳ ಕಾಲ ರೈಲು ಸಂಚಾರವನ್ನು ನಿಲ್ಲಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ತನ್ನ ಘಟಕಗಳ ಕಾರ್ಯಕರ್ತರಿಗೆ ಕರೆ ನೀಡಿದೆ. ಈ ಸಂದರ್ಭದಲ್ಲಿ ರೈಲ್ವೆ ಆಸ್ತಿಗೆ ಯಾವುದೇ ರೀತಿಯ ವಿನಾಶ ಮತ್ತು ಹಾನಿಯಾಗದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ.
ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಹಿನ್ನೆಲೆ:
ಕಳೆದ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಮಂದಿ ಪ್ರಾಣ ಬಿಟ್ಟಿದ್ದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ವಿರುದ್ಧ ರೈತರ ಮೇಲೆ ಕಾರು ಹರಿಸಿದ ಆರೋಪ ಮಾಡಲಾಗಿದ್ದು, ಅಕ್ಟೋಬರ್ 9ರಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.