ಸಮಾಜವಾದಿ ಪಕ್ಷವನ್ನು ಸೋಲಿಸಲು ಯಾವ ಪ್ರಯತ್ನಕ್ಕೂ ಸಿದ್ಧ: ಮಾಯಾವತಿ
ಲಕ್ನೋ, ಅಕ್ಟೋಬರ್ 29: ಸಮಾಜವಾದಿ ಪಕ್ಷವನ್ನು ಸೋಲಿಸಲು ಯಾವುದೇ ರೀತಿಯ ಪ್ರಯತ್ನಕ್ಕೂ ಸಿದ್ಧ, ಬೇಕಾದರೆ ಬಿಜೆಪಿ ಜತೆ ಕೈಜೋಡಿಸಲೂ ತಯಾರಾಗಿರುವುದಾಗಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ.
'ಮುಂಬರುವ ಉತ್ತರ ಪ್ರದೇಶದ ವಿಧಾನಪರಿಷತ್ ಚುನಾವಣೆಯಲ್ಲಿ ನಾವು ಸಮಾಜವಾದಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ನಿರ್ಧರಿಸಿದ್ದೇವೆ. ಅದಕ್ಕಾಗಿ ನಾವು ನಮ್ಮ ಎಲ್ಲ ಶಕ್ತಿಯನ್ನೂ ಮುಡಿಪಿಡಲಿದ್ದೇವೆ. ಬಿಜೆಪಿ ಅಭ್ಯರ್ಥಿಯೇ ಆಗಿರಲಿ, ಅಥವಾ ಇತರೆ ಪಕ್ಷದ ಅಭ್ಯರ್ಥಿಯೇ ಆಗಿರಲಿ ನಾವು ನಮ್ಮ ಮತ ಹಾಕಬೇಕಿದ್ದರೆ ಅದನ್ನು ಮಾಡುತ್ತೇವೆ. ಸಮಾಜವಾದಿ ಪಕ್ಷದ ಎರಡನೆಯ ಅಭ್ಯರ್ಥಿಯ ಮೇಲೆ ಪ್ರಾಬಲ್ಯ ಸಾಧಿಸುವ ಯಾವುದೇ ಪಕ್ಷದ ಅಭ್ಯರ್ಥಿಗೆ ಖಂಡಿತವಾಗಿಯೂ ಬಿಎಸ್ಪಿ ಶಾಸಕರ ಮತ ಸಿಗಲಿದೆ' ಎಂದು ಮಾಯಾವತಿ ಹೇಳಿದ್ದರು.
7 ಬಂಡಾಯ ಶಾಸಕರ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಗೆ ಬೆಂಬಲ ಘೋಷಿಸಿದ ಮಾಯಾವತಿ
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, 'ಇನ್ನೂ ಏನನ್ನಾದರೂ ಹೇಳುವುದು ಬಾಕಿ ಇದೆಯೇ?' ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಬಿಎಸ್ಪಿಗೆ ಬಂಡಾಯದ ಆಘಾತ: ಎಸ್ಪಿ ಸೇರಲು ಶಾಸಕರ ಸಿದ್ಧತೆ
ಉತ್ತರ ಪ್ರದೇಶದಲ್ಲಿ 10 ರಾಜ್ಯಸಭೆ ಕ್ಷೇತ್ರಗಳಿಗೆ ನವೆಂಬರ್ 9ರಂದು ಚುನಾವಣೆ ನಡೆಯಲಿದ್ದು, ವಿಧಾನಸಭೆಯಲ್ಲಿ ಸಾಕಷ್ಟು ಸಂಖ್ಯೆ ಇಲ್ಲದಿದ್ದರೂ ಬಿಎಸ್ಪಿಯಿಂದ ರಾಮ್ಜಿ ಗೌತಮ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಹತ್ತು ಬಿಎಸ್ಪಿ ಶಾಸಕರ ಪೈಕಿ ನಾಲ್ವರು ಶಾಸಕರು, ಈ ಉಮೇದುವಾರಿಕೆ ಪತ್ರಕ್ಕೆ ತಮ್ಮ ಸಹಿಯನ್ನು ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಅದರ ಬೆನ್ನಲ್ಲೇ ಆರು ಶಾಸಕರು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದರು. ಬಳಿಕ ಬಿಎಸ್ಪಿ ನಾಯಕಿ ಮಾಯಾವತಿ ಏಳು ಶಾಸಕರನ್ನು ಪಕ್ಷದಿಂದ ಅಮಾನತು ಮಾಡಿದ್ದರು.