ಸಾಯುವುದಕ್ಕಾಗಿಯೇ ಮನೆಯಿಂದ ಹೊರ ಬರುವ ಜನರನ್ನು ಹೇಗೆ ಬದುಕಿಸುವುದು?
ಲಕ್ನೋ, ಫೆಬ್ರವರಿ.19: ಸಾಯುವುದಕ್ಕಾಗಿಯೇ ಮನೆಯಿಂದ ಹೊರಗೆ ಬರುವ ಜನರನ್ನು ಹೇಗೆ ತಾನೇ ಬದುಕಿಸಲು ಸಾಧ್ಯ ಹೇಳಿ ಎನ್ನುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕರು ಕೇಳುವ ಪ್ರಶ್ನೆಗೆ ಸಿಎಂ ಯೋಗಿ ಆದಿತ್ಯನಾಥ್ ಉತ್ತರಿಸಿದರು. ಈ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಬಗ್ಗೆ ಉಲ್ಲೇಖಿಸಿ ಸಿಎಂ ಈ ಹೇಳಿಕೆಯನ್ನು ನೀಡಿದರು.
ಸಿಎಎ ವಿರೋಧಿ ಹೋರಾಟ: ಶಾಹಿನ್ ಬಾಗ್ ನಲ್ಲಿ ತ್ರಿಮೂರ್ತಿಗಳ ಸಂಧಾನಸೂತ್ರ
ಕೇಂದ್ರ ಸರ್ಕಾರದ ವಿರುದ್ಧ ಉತ್ತರ ಪ್ರದೇಶದಲ್ಲಿ ನಡೆದ ಸಾಲು ಸಾಲು ಪ್ರತಿಭಟನೆಗಳು ಹಿಂಸಾತ್ಮಕ ರೂಪಕ್ಕೆ ತಿರುಗಿದ್ದವು. ಸಿಎಎ ವಿರೋಧಿ ಹೋರಾಟದಲ್ಲಿ ಈವರೆಗೂ 20ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದು, ನೂರಾರು ಪ್ರತಿಭಟನಾಕಾರರು ಗಾಯಗೊಂಡಿದ್ದರು.
20 ಮಂದಿ ಮೃತಪಟ್ಟಿದ್ದು ಪೊಲೀಸರ ಗುಂಡೇಟಿನಿಂದ ಅಲ್ಲ
ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿಚಾರಕ್ಕೆ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಯಾರೊಬ್ಬರೂ ಕೂಡಾ ಪೊಲೀಸರ ಗುಂಡೇಟಿನಿಂದ ಪ್ರಾಣ ಬಿಟ್ಟಿಲ್ಲ. ಬದಲಿಗೆ ದುಷ್ಕರ್ಮಿಗಳು ತಾವು ತಾವೇ ಕಿತ್ತಾಡಿಕೊಂಡು ಗುಂಡು ಹಾರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೋರಾಟದ ನೆಪದಲ್ಲಿ ಹಿಂಸಾಚಾರ ನಡೆಸಲು ಬಿಡಲ್ಲ
ಕಳೆದ ತಿಂಗಳು ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ಉತ್ತರ ಪ್ರದೇಶದ ಲಕ್ನೋ, ಕಾನ್ಪುರ್, ಪ್ರಯಾಗ್ ರಾಜ್ ನಲ್ಲಿ ನಡೆದ ಪ್ರತಿಭಟನೆಯು ಕಾನೂನು ವಿರೋಧಿಯಾಗಿತ್ತು. ಸರ್ಕಾರವು ಪ್ರತಿಭಟನಾಕಾರರ ವಿರುದ್ಧವಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ತಪ್ಪಲ್ಲ. ಆದರೆ, ಹೋರಾಟದ ನೆಪದಲ್ಲಿ ಹಿಂಸಾಚಾರ ನಡೆಸುವುದಕ್ಕೆ ಬಿಡುವುದಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಕಿಡಿ ಕಾರಿದ್ದಾರೆ.
ಆಜಾದಿ ಘೋಷಣೆ ಕೂಗುವ ಉದ್ದೇಶವೇನು ಎಂದ ಯೋಗಿ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ನೆಪದಲ್ಲಿ ಆಜಾದಿ ಘೋಷಣೆಗಳನ್ನು ಕೆಲವು ದುಷ್ಕರ್ಮಿಗಳು ಕೂಗಿದ್ದಾರೆ. ಇದರ ಹಿಂದಿನ ಉದ್ದೇಶವೇನು. ನಾವು ಮೊಹಮ್ಮದ್ ಅಲಿ ಜಿನ್ನಾ ಸಿದ್ದಾಂತವನ್ನು ಪಾಲಿಸಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ಭಾರತವು ಗಾಂಧೀಜಿ ಚಿಂತನೆ ಮತ್ತು ತತ್ವ ಸಿದ್ದಾಂತವನ್ನು ಪಾಲಿಸುತ್ತದೆಯೇ ಹೊರತೂ ಜಿನ್ನಾ ಸಿದ್ದಾಂತಗಳನ್ನು ಅಲ್ಲ ಎಂದು ಹರಿ ಹಾಯ್ದಿದ್ದಾರೆ.
ಉತ್ತರ ಪ್ರದೇಶದಲ್ಲಿ 883 ಮಂದಿ ವಿರುದ್ಧ ಎಫ್ಐಆರ್
ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ನಡೆದ ಸಿಎಎ ವಿರೋಧಿ ಹಿಂಸಾಚಾರದಲ್ಲಿ 22 ಮಂದಿ ಪ್ರಾಣ ಬಿಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದರು. ಇದರ ಜೊತೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು 883 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇತ್ತೀಚಿಗಷ್ಟೇ ಪ್ರಕರಣದಲ್ಲಿ ಸಿಲುಕಿದ್ದ 561 ಆರೋಪಿಗಳಿಗೆ ಅಲಹಾಬಾದ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.