ನಮ್ಮವರೇ ಪಕ್ಷ ಮುಗಿಸಿಹಾಕುತ್ತಿದ್ದಾರೆ : ಮಗನ ಮೇಲೆ ಮುಲಾಯಂ ಆಕ್ರೋಶ
ಲಕ್ನೋ, ಫೆಬ್ರವರಿ 21 : ಸಂಸತ್ತಿನಲ್ಲಿ ಮುಂದಿನ ಬಾರಿ ಮೋದಿಯೇ ಪ್ರಧಾನಿಯಾಗಲಿ ಎಂದು ತಮ್ಮ ಸಮಾಜವಾದಿ ಪಕ್ಷವನ್ನೇ ದಿಗಿಲು ಬೀಳಿಸಿದ್ದ ಮುಲಾಯಂ ಸಿಂಗ್ ಯಾದವ್ ಅವರು, ಪಕ್ಷದ ಸಭೆಯಲ್ಲಿ ತಮ್ಮ ಮಗ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
"ನಮ್ಮ ಪಕ್ಷವನ್ನು ಯಾರು ಮುಗಿಸಿ ಹಾಕುತ್ತಿದ್ದಾರೆ? ನಮ್ಮ ಪಕ್ಷದ ಮಂದಿಯೇ ಮುಗಿಸಿ ಹಾಕುತ್ತಿದ್ದಾರೆ. ನಮ್ಮದು ಅತ್ಯಂತ ಬಲಿಷ್ಠ ಪಕ್ಷವಾಗಿತ್ತು. ಮೂರು ಬಾರಿ ಏಕಾಂಗಿಯಾಗಿ ನಾವು ಅಧಿಕಾರಕ್ಕೆ ಬಂದೆವು, ಮೂರು ಬಾರಿಯೂ ನಾನೇ ಮುಖ್ಯಮಂತ್ರಿಯಾಗಿದ್ದೆ. ನಾವು ರಾಜನೀತಿ ಮಾಡುತ್ತಿಲ್ಲ. ಆದರೆ ಕೇಳಿ, ನಾನು ಸರಿಯಾದದ್ದನ್ನೇ ಹೇಳುತ್ತಿದ್ದೇನೆ" ಎಂದು ಪಕ್ಷದ ಕಚೇರಿಯಲ್ಲಿ ವಾಚಾಮಗೋಚರವಾಗಿ ಟೀಕಿಸಿದ್ದಾರೆ.
'ಮೋದಿ ಮತ್ತೊಮ್ಮೆ' ಎಂದು ಮುಲಾಯಂ ಸಿಂಗ್ ಹೇಳಿದ್ದೇಕೆ? ಕಾರಣ ನೀಡಿದ ಸೊಸೆ!
ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷದೊಡನೆ ಮೈತ್ರಿ ಮಾಡಿಕೊಂಡಿರುವುದು ಮುಲಾಯಂ ಅವರು ಕೆಂಡಾಮಂಡಲವಾಗುವಂತೆ ಮಾಡಿದೆ. ಅದರಲ್ಲಿಯೂ ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಬಹುಜನ ಸಮಾಜ ಪಕ್ಷಕ್ಕೆ ಕೊಟ್ಟಿರುವುದು ಮುಲಾಯಂ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 37 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಬಹುಜನ ಸಮಾಜ ಪಕ್ಷ 38ರಲ್ಲಿ ಸ್ಪರ್ಧಿಸಲು ಒಪ್ಪಂದ ಮಾಡಿಕೊಂಡಿವೆ.
ನಾನು ಇದ್ದಿದ್ದರೆ, ಕಥೆಯೇ ಬೇರೆ ಆಗಿರುತ್ತಿತ್ತು
"ನಾನು ಏಕಾಂಗಿಯಾಗಿ 42 ಸೀಟುಗಳನ್ನು (80 ಲೋಕಸಭೆ ಕ್ಷೇತ್ರಗಳಲ್ಲಿ) ಗೆದ್ದಿದ್ದೆ, ನಂತರ ದೇಶದ ರಕ್ಷಣಾ ಸಚಿವನೂ ಆದೆ. ಆದರೆ ಇಂದು ಅರ್ಧಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದೇವೆ. ಈ ಮೈತ್ರಿಯನ್ನೂ ಮಾಡಿದ್ದು ನನ್ನ ಮಗ. ಆತನ ಸ್ಥಾನದಲ್ಲಿ ನಾನು ಇದ್ದಿದ್ದರೆ, ಕಥೆಯೇ ಬೇರೆ ಆಗಿರುತ್ತಿತ್ತು" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ನಾನು ಪಕ್ಷದ ಮುಖ್ಯಸ್ಥನಾಗಿದ್ದರೂ ನನ್ನ ಕೆಲಸ ಏನೆಂದು ನನಗೇ ಗೊತ್ತಿಲ್ಲ ಎಂದು ಅವರು ವ್ಯಥೆಪಟ್ಟರು. ತಮ್ಮನ್ನು ಮೂಲೆಗುಂಪು ಮಾಡಲಾಗಿದೆ ಎಂಬ ನೋವು ಅವರ ಮಾತಲ್ಲಿತ್ತು.
'ಮೋದಿ ಮತ್ತೊಮ್ಮೆ' ಎಂದ ಮುಲಾಯಂ, ಕಾಂಗ್ರೆಸ್ ಗೆ ಖುಷಿ! ಯಾಕಂತೀರಾ?
ಸ್ಪರ್ಧಿಸುತ್ತಿರುವ ಕ್ಷೇತ್ರಗಳೂ ಇಳಿಕೆ
ನಮ್ಮದು ಬಿಜೆಪಿಯ ವಿರುದ್ಧ ನೇರಾನೇರ ಹೋರಾಟ. ಆದರೆ, ಅರ್ಧದಷ್ಟು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದ್ದೇವೆ. ಯಾವ ಆಧಾರದ ಮೇಲೆ ಈ ನಿರ್ಣಯ ತೆಗೆದುಕೊಳ್ಳಲಾಯಿತು ಯಾರಾದರೂ ತಿಳಿಸಿ ಎಂದು ಕೆಂಡ ಕಾರಿದ ಅವರು, ಪಕ್ಷದಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆಯೂ ಗಣನೀಯವಾಗಿ ಇಳಿದಿದೆ. ಇದು ನಿಜಕ್ಕೂ ತುಂಬಾ ಕಳವಳಕಾರಿಯಾದ ಸಂಗತಿ. ಯಾರ್ಯಾರು ಸ್ಪರ್ಧಿಸಲಿದ್ದಾರೆ? ಅವರ ಹೆಸರುಗಳೇನು ಎಂಬುದನ್ನು ಈಗಾಗಲೇ ನಿರ್ಧರಿಸಬೇಕಾಗಿತ್ತು. ಇಲ್ಲದಿದ್ದರೆ, ಭಾರತೀಯ ಜನತಾ ಪಕ್ಷದವರು ನಮಗಿಂತ ಮುಂದೆ ಹೋಗುತ್ತಾರೆ ಎಂದು ಅವರು ವಸ್ತುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಮೋದಿ ಹೊಗಳಿದ ಮುಲಾಯಂ ಸಿಂಗ್ : ಇದರ ಹಿಂದೆ ಹೀಗೊಂದು ರಾಜಕೀಯ ಲೆಕ್ಕಾಚಾರ
'ಮೋದಿಯವರೇ ಪ್ರಧಾನಿಯಾಗಬೇಕು'!
ಬಜೆಟ್ ಅಧಿವೇಶನದ ಕಡೆಯ ದಿನ ಎಲ್ಲ ಸಂಸದರೂ ಅಚ್ಚರಿಯಾಗುವಂತೆ ಮಾತನಾಡಿದ್ದ ಮಾಜಿ ಕೇಂದ್ರ ಸಚಿವ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು, ನರೇಂದ್ರ ಮೋದಿಯವರನ್ನು ವಾಚಾಮಗೋಚರವಾಗಿ ಹೊಗಳಿದ್ದರು. ಎಲ್ಲರನ್ನೂ ಒಟ್ಟಿಗೇ ಕರೆದುಕೊಂಡು ಹೋಗುವ ಶಕ್ತಿ ನರೇಂದ್ರ ಮೋದಿ ಅವರಲ್ಲಿದೆ. ಮುಂದಿನ ಚುನಾವಣೆಯ ನಂತರ ಅವರೇ ಮತ್ತೆ ಪ್ರಧಾನಿಯಾಗಲಿ ಎಂದು ಸೋನಿಯಾ ಗಾಂಧಿ ಅವರ ಪಕ್ಕದಲ್ಲೇ ಕುಳಿತು ಹೇಳಿದ್ದರು. ಈ ಮಾತನ್ನು ಕೇಳಿ, ಪ್ರಧಾನಿ ಮೋದಿ ನಮಸ್ಕರಿಸಿ ಧನ್ಯವಾದ ಅರ್ಪಿಸಿದ್ದರೆ, ಬಿಜೆಪಿ ಸಂಸದರು ಮೇಜು ಕುಟ್ಟು ಪ್ರಶಂಸೆ ವ್ಯಕ್ತಪಡಿಸಿದ್ದರು.
ಕಳೆದ ಬಾರಿ ಗೆದ್ದಿದ್ದು 5 ಕ್ಷೇತ್ರಗಳಲ್ಲಿ ಮಾತ್ರ
2014ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಇರುವ 80 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ 71ರಲ್ಲಿ ಜಯಭೇರಿ ಬಾರಿಸಿದ್ದರೆ, ಸಮಾಜವಾದಿ ಪಕ್ಷ ಕೇವಲ 5 ಸೀಟುಗಳಲ್ಲಿ ಗೆದ್ದು ಹೀನಾಯ ಸೋಲು ಅನುಭವಿಸಿತ್ತು. ಇನ್ನು ಕಾಂಗ್ರೆಸ್ ಕೇವಲ 2 ಸೀಟುಗಳಲ್ಲಿ (ಅಮೇಥಿಯಿಂದ ರಾಹುಲ್ ಗಾಂಧಿ ಮತ್ತು ರಾಯ್ ಬರೇಲಿಯಿಂದ ಸೋನಿಯಾ ಗಾಂಧಿ) ಮಾತ್ರ ಗೆದ್ದು ಭಾರೀ ಮುಖಭಂಗ ಅನುಭವಿಸಿತ್ತು. ಈ ಎರಡು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸದಿರುವುದಾಗಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ನಿರ್ಧರಿಸಿವೆ. ತಮಾಷೆಯ ಸಂಗತಿಯೆಂದರೆ, ಈ ಮೈತ್ರಿಕೂಟದಲ್ಲಿ ಈ ಎರಡೂ ಪಕ್ಷಗಳು ಕಾಂಗ್ರೆಸ್ಸನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟಿವೆ.