ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ 5 ಕೋಟಿ ರು ಕೊಟ್ಟ ಬಾಪು
ಅಯೋಧ್ಯಾ, ಜುಲೈ 28: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ 5 ಕೋಟಿ ರು ನೀಡುತ್ತಿರುವುದಾಗಿ ಆಧಾತ್ಮ ಗುರು ಮೊರಾರಿ ಬಾಪು ಅವರು ಘೋಷಿಸಿದ್ದಾರೆ. ವ್ಯಾಸಪೀಠದಿಂದ ದೇಗುಲ ನಿರ್ಮಾಣಕ್ಕಾಗಿ ಎಲ್ಲಾ ರೀತಿ ನೆರವು ನೀಡುವುದಾಗಿ ಹೇಳಿದರು.
ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ದೇಣಿಗೆ ಸಿಗುತ್ತಿದ್ದಂತೆ, ಮಂದಿರ ನಿರ್ಮಾಣ ಟ್ರಸ್ಟ್ ಅಧಿಕೃತವಾಗಿ ಶುರುವಾಯಿತು. ಈಗ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಜೋರಾಗಿ ನಡೆದಿದೆ. ಪಾಟ್ನಾದ ಮಹಾವೀರ ದೇವಸ್ಥಾನ ಮಂಡಳಿಯು ರಾಮಮಂದಿರ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಕಾಣಿಕೆ ನೀಡುವುದಾಗಿ ತಿಳಿಸಿದೆ.
ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ
ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.
ನಿರ್ಮಾಣಕ್ಕೆ ಸುಮಾರು 4 ವರ್ಷ ಬೇಕಾಗಬಹುದು
ರಾಮಮಂದಿರ ನಿರ್ಮಾಣಕ್ಕೆ ಸುಮಾರು 4 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಮಂದಿರ ನಿರ್ಮಾಣಕ್ಕೆ ಈಗಾಗಲೇ 1.25 ಲಕ್ಷ ಘನ ಅಡಿ ಕಲ್ಲುಗಳ ಕೆತ್ತನೆ ಕಾರ್ಯ ಪೂರ್ಣಗೊಂಡಿದೆ ಎಂಬ ಮಾಹಿತಿಯಿದೆ. ಸುಪ್ರೀಂಕೋರ್ಟ್ ಆದೇಶದಂತೆ ಸರ್ಕಾರವು ಟ್ರಸ್ಟ್ ಸ್ಥಾಪನೆ ಮಾಡಿದ್ದು,, 2024ರೊಳಗೆ ಮಂದಿರ ನಿರ್ಮಾಣವಾಗಲಿದ್ದು, ಶ್ರೀರಾಮಚಂದ್ರ ಮೂರ್ತಿಯ ದರ್ಶನ ಪ್ರಾಪ್ತಿಯಾಗಲಿದೆ" ಎಂದು ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ್ ಕೊಕ್ಜೆ ಪ್ರತಿಕ್ರಿಯಿಸಿದ್ದಾರೆ.
ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರು
ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಟ್ರಸ್ಟ್ನಲ್ಲಿ ಹಿರಿಯ ನ್ಯಾಯವಾದಿ ಕೆ.ಪರಾಸರನ್, ಅಲಹಾಬಾದ್ನ ಜಗದ್ಗುರು ಶಂಕರಾಚಾರ್ಯ ಜ್ಯೋತಿಷ್ಪೀಠಾಧೀಶ್ವರ ಸ್ವಾಮಿ ವಾಸುದೇವಾನಂದ ಸರಸ್ವತೀಜಿ, ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಹರಿದ್ವಾರದ ಯುಗಪುರುಷ ಪರಮಾನಂದ ಜೀ ಮಹಾರಾಜ್, ಪುಣೆಯ ಸ್ವಾಮಿ ಗೋವಿಂದದೇವ್ ಗಿರಿಜೀ ಮಹಾರಾಜ್, ಅಯೋಧ್ಯೆಯ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ, ಅಯೋಧ್ಯೆಯ ಹೋಮಿಯೋಪತಿ ಡಾಕ್ಟರ್ ಅನಿಲ್ ಮಿಶ್ರಾ, ಪಾಟ್ನದ ಕಾಮೇಶ್ವರ ಚೌಪಾಲ್(ಎಸ್ಸಿ) , ಮಹಾಂತ ದಿನೇಂದ್ರ ದಾಸ್, ಅಯೋಧ್ಯೆಯ ನಿರ್ಮೋಹಿ ಅಖಾಡದ ಪ್ರತಿನಿಧಿಗಳು ಸದಸ್ಯರಾಗಿದ್ದಾರೆ.
ಚಿತ್ರಗಳು: ಆಯೋಧ್ಯೆಯ ರಾಮ ಜನ್ಮಭೂಮಿ ತಾಣದಲ್ಲಿ ಶಿವಲಿಂಗ
ನಿರ್ಮಾಣದ ಬಗ್ಗೆ ಶಿಲ್ಪಿ ಅನುಭಾಯಿ ಸೋಂಪುರ್
ಕಳೆದ 30 ವರ್ಷಗಳಿಂದ ಶಿಲ್ಪಕಲೆ, ಮಂದಿರ ನಿರ್ಮಾಣದಲ್ಲಿ ತಜ್ಞರಾಗಿರುವ ಅನು ಭಾಯಿ ಸೋಂಪುರ ಅವರು ರಾಮಮಂದಿರ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಎಲ್ಲೂ ಕೂಡಾ ಕಬ್ಬಿಣ ಬಳಸುತ್ತಿಲ್ಲ. ಕಲ್ಲುಗಳನ್ನು ರಾಜಸ್ಥಾನದಿಂದ ತರೆಸಲಾಗಿದೆ. ಮರ, ತಾಮ್ರ, ಬಿಳಿ ಸಿಮೆಂಟ್ ಬಳಸಲಾಗುತ್ತಿದೆ ಎಂದು ಹೇಳಿದರು.
ರಾಮಮಂದಿರ ನಿರ್ಮಾಣ ಶಂಕುಸ್ಥಾಪನೆ ನೇರ ಪ್ರಸಾರ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಶಂಕು ಸ್ಥಾಪನೆ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ದೂರದರ್ಶನ ನೇರ ಪ್ರಸಾರ ಮಾಡಲಿದೆ.
ಆಗಸ್ಟ್ 5ರ ಬುಧವಾರ ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12.30ಕ್ಕೆ ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ. ಹಲವಾರು ಜ್ಯೋತಿಷಿಗಳನ್ನು ಸಂಪರ್ಕಿಸಿ ಮುಹೂರ್ತ ನಿಗದಿ ಮಾಡಲಾಗಿದೆ. ಅಯೋಧ್ಯೆಯಲ್ಲಿ ನಿಲ್ಲಿಸಲು ಉದ್ದೇಶಿಸಲಾಗಿರುವ ರಾಮಮಂದಿರದ ಕೆಳಗೆ ಮಂದಿರದ ಸಂಪೂರ್ಣ ಇತಿಹಾಸ ಕುರಿತು ಸಂಪುಟ(Time-capsule)ವನ್ನು ಹುದುಗಿಡಲಾಗುತ್ತಿದೆ.