31 ಲಕ್ಷಕ್ಕೆ 'ಅಲ್ಲಾವುದ್ದೀನ್ ದೀಪ' ಖರೀದಿಸಿ ಪೆಚ್ಚಾದ ವೈದ್ಯ!
ಮೀರತ್, ನವೆಂಬರ್ 2: ಅಲ್ಲಾವುದ್ದೀನ್ ದೀಪವನ್ನು ಉಜ್ಜಿದಾಗ ಅದರಿಂದ ಹೊರಬರುವ ಜೀನಿ ನಿಮ್ಮ ಇಚ್ಛೆಗಳನ್ನೆಲ್ಲ ಈಡೇರಿಸುವಂತಹ ಮಧ್ಯಪ್ರಾಚ್ಯ ದೇಶಗಳಲ್ಲಿನ ಬಹುಜನಪ್ರಿಯ ಕಾಲ್ಪನಿಕ ಕಥೆಗಳು ನಿಮಗೆ ಗೊತ್ತಿರಬೇಕು. ಇಂತಹ ಮ್ಯಾಜಿಕ್ ದೀಪ ಎಲ್ಲಿದೆಯೋ ಗೊತ್ತಿಲ್ಲ. ಆದರೆ ಉತ್ತರ ಪ್ರದೇಶದ ವೈದ್ಯರೊಬ್ಬರು ಇದೇ ರೀತಿ ಜೀನಿಯನ್ನು ಕರೆಸಿ ಪವಾಡದ ಮೂಲಕ ತನ್ನ ಆಸೆಗಳನ್ನೆಲ್ಲಾ ಈಡೇರಿಸಿಕೊಳ್ಳುವ ಜಾಲದೊಳಗೆ ಬಿದ್ದು ಪೇಚಿಗೀಡಾಗಿದ್ದಾರೆ.
ಅಲ್ಲಾದೀನ್ ದೀಪವನ್ನು ಉಜ್ಜಿದರೆ ನಿಮ್ಮ ಬಯಕೆಗಳೆಲ್ಲ ಈಡೇರಲಿದೆ ಎಂಬ ವಂಚನೆಯ ಜಾಲವನ್ನು ನಂಬಿದ ಮೀರತ್ನ ವೈದ್ಯರೊಬ್ಬರು 31 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪಾರ್ಸೆಲ್ ಹೆಸರಿನಲ್ಲಿ ಹುಬ್ಬಳ್ಳಿ ಯುವಕನಿಗೆ 5 ಲಕ್ಷ ವಂಚನೆ
ಈ ವಂಚಕರು ವೈದ್ಯರನ್ನು ನಂಬಿಸಲು ದೀಪದಿಂದ 'ಜೀನಿ'ಯನ್ನು ಹೊರಗೆ ಕರೆಯಿಸುವ ತಂತ್ರವನ್ನೂ ಮಾಡಿದ್ದರು. ಆದರೆ ಅದು ಯಾವ ರೀತಿ ತಂತ್ರ ಮಾಡಿದ್ದರು ಎನ್ನುವುದು ಗೊತ್ತಾಗಿಲ್ಲ. ಇಕ್ರಮುದ್ದೀನ್ ಮತ್ತು ಅನೀಸ್ ಎಂಬ ಕಿಡಿಗೇಡಿಗಳು ಬೀಸಿದ್ದ ವಂಚನೆಯ ಬಲೆಗೆ ಬಿದ್ದಿದ್ದ ಡಾ. ಎಲ್ಎ ಖಾನ್, ತಾವು ಮೋಸ ಹೋಗಿದ್ದು ಅರಿವಾದ ಬಳಿಕ ಅ. 25ರಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ಮುಂದೆ ಓದಿ.
'ತಾಯಿ'ಯ ಚಿಕಿತ್ಸೆಗೆ ತೆರಳಿದ್ದ ವೈದ್ಯ
'ಅನಾರೋಗ್ಯಪೀಡಿತಳಾದ ತಾಯಿ'ಗೆ ಚಿಕಿತ್ಸೆ ನೀಡುವ ನೆಪದಲ್ಲಿ ಮಹಿಳೆಯೊಬ್ಬರೊಂದಿಗೆ ಈ ವಂಚಕರು ಮೊದಲ ಬಾರಿ ವೈದ್ಯನನ್ನು ಭೇಟಿಯಾಗಿದ್ದರು. 'ತಮ್ಮ ತಾಯಿ ಎಂದು ಅವರು ಹೇಳಿಕೊಂಡಿದ್ದ ಮಹಿಳೆಗೆ ಚಿಕಿತ್ಸೆ ನೀಡಲು ನಾನು ಅವರ ಮನೆಗೆ ಭೇಟಿ ನೀಡಲು ಆರಂಭಿಸಿದ್ದೆ. ಒಂದು ತಿಂಗಳಿಗೂ ಹೆಚ್ಚು ಕಾಲ ಅವರ ಮನೆಗೆ ಹೋಗಿದ್ದೆ. ಬಳಿಕ ಅವರು 'ಬಾಬಾ' ಒಬ್ಬರು ತಮ್ಮ ಮನೆಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳತೊಡಗಿದರು. ಅವರು ನನಗೆ ಬ್ರೈನ್ ವಾಶ್ ಮಾಡಲು ಆರಂಭಿಸಿ ಈ ಬಾಬಾನನ್ನು ಭೇಟಿ ಮಾಡುವಂತೆ ಹೇಳಲು ಶುರುಮಾಡಿದರು' ಎಂದು ಖಾನ್ ದೂರಿನಲ್ಲಿ ತಿಳಿಸಿದ್ದಾರೆ.
1.5 ಕೋಟಿ ರೂ ಕೇಳಿದ್ದರು
'ಕೆಲವು ಸಾಂಪ್ರದಾಯಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಬಾಬಾನನ್ನು ಭೇಟಿ ಮಾಡಿಸಿದರು. ಬಳಿಕ ಈ ಗುಂಪು ನನಗೆ 'ಚಿರಾಗ್' (ದೀಪ) ಅನ್ನು 1.5 ಕೋಟಿ ರೂಪಾಯಿಗೆ ಮಾರಾಟ ಮಾಡುವುದಾಗಿ ತಿಳಿಸಿದರು. ಆದರೆ ನನಗೆ 31 ಲಕ್ಷ ರೂ ಮಾತ್ರ ನೀಡಲು ಸಾಧ್ಯ ಎಂದೆ. ಈ ದೀಪವು ಸಂಪತ್ತು, ಆರೋಗ್ಯ ಮತ್ತು ಎಲ್ಲ ಒಳಿತನ್ನೂ ನೀಡುತ್ತದೆ ಎಂದು ನನ್ನನ್ನು ನಂಬಿಸಿದರು. ಇದು 'ಅಲ್ಲಾವುದ್ದೀನ್ನ ದೀಪ' ಎಂದು ಹೇಳಿದ್ದರು' ಎಂಬುದಾಗಿ ಅವರು ವಿವರಿಸಿದ್ದಾರೆ.
ಅಜ್ಜಿ ಆಸ್ತಿಯನ್ನೇ ಲಪಟಾಯಿಸಿದ ಮೊಮ್ಮಗಳು: ಉಡುಪಿಯಲ್ಲೊಂದು ಮನ ಕಲಕುವ ಘಟನೆ
ಅನೇಕರಿಗೆ ವಂಚನೆ
ವೈದ್ಯರು ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ ಚಿನ್ನದ ಬಣ್ಣದ ಅನೇಕ ದೀಪಗಳನ್ನು ವಶಪಡಿಸಿಕೊಂಡಿದ್ದಾರೆ. ಇದೇ ವ್ಯಕ್ತಿಗಳು ನಗರದ ಇತರೆ ಮನೆಗಳಿಗೂ ಹೋಗಿ ತಂತ್ರವಿದ್ಯೆಯ ಹೆಸರಿನಲ್ಲಿ ಹಲವು ಕುಟುಂಬಗಳನ್ನು ವಂಚಿಸಿದ್ದರು ಎನ್ನುವುದು ಈಗ ಗೊತ್ತಾಗಿದೆ
ಮಹಿಳೆ ನಾಪತ್ತೆ
ಜನರನ್ನು ವಂಚಿಸುವ ಈ ಜಾಲದಲ್ಲಿ ಮೂವರು ಭಾಗಿಯಾಗಿರುವುದು ಗೊತ್ತಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಆರೋಪಿ ಮಹಿಳೆ ತಲೆಮರೆಸಿಕೊಂಡಿದ್ದಾಳೆ' ಎಂದು ಮೀರತ್ನ ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ರೈ ತಿಳಿಸಿದ್ದಾರೆ.