ದೋಸ್ತಿ ಕತಮ್! ಅಖಿಲೇಶ್ ಗೆ ಮಾಯಾವತಿಯಿಂದ ಮಹಾಮಂಗಳಾರತಿ
ಲಕ್ನೋ, ಜೂನ್ 04: ಲೋಕಸಭೆ ಚುನಾವಣೆಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳು ಇದೀಗ ಮೈತ್ರಿ ಕಡಿದುಕೊಂಡಿವೆ. ಎಸ್ಪಿಯೊಂದಿಗಿನ ಮೈತ್ರಿಯಿಂದಾಗಿ ತನ್ನ ಸಂಸದರನ್ನು ಸಂಖ್ಯೆಯನ್ನು ಹೆಚ್ಚಿಸಿಕೊಂಡ ಮಾಯಾವತಿ ಇದೀಗ ಅಖಿಲೇಶ್ ಯಾದವ್ ಅವರ ಮೇಲೆ ಸೋಲಿನ ಗೂಬೆ ಕೂರಿಸಿದ್ದಾರೆ.
ಸೈಕಲಿನಿಂದ ಕೆಳಗಿಳಿದು ಏಕಾಂಗಿ ಯುದ್ಧಕ್ಕೆ ಹೊರಟ 'ಆನೆ'
"ತಮ್ಮ ಪತ್ನಿ ಡಿಂಪಲ್ ಯಾದವ್ ಅವರನ್ನೇ ಗೆಲ್ಲಿಸಲಾಗದ ಅಖಿಲೇಶ್ ಯಾದವ್ ಇನ್ನೇನು ಮಾಡುವುದಕ್ಕೆ ಸಾಧ್ಯ? ಬಿಎಸ್ಪಿ ಮತಗಳು ಡಿಂಪಲ್ ಅವರಿಗೆ ವರ್ಗಾವಣೆಯಾಗಿವೆ. ಆದರೆ ಯಾದವರ ಮತಗಳೇ ಬಿದ್ದಿಲ್ಲ" ಎಂದು ಮಾಯಾವತಿ ಆರೋಪಿಸಿದ್ದಾರೆ.
ಸಮಾಜವಾದಿ ಪಕ್ಷದ ಬಹುದೊಡ್ಡ ಹಿನ್ನಡೆ. 1967 ರಲ್ಲಿ ಸಮಾಜವಾದಿ ಮುಖಂಡ ರಾಮ್ ಮನೋಹರ್ ಲೋಹಿಯಾ ಈ ಕ್ಷೇತ್ರದಿಂದ ಗೆದ್ದಿದ್ದರು. 1999 ರಲ್ಲಿ ಮುಲಾಯಂ ಸಿಂಗ್ ಯಾದವ್, 2000ದಲ್ಲಿ ಅಖಿಲೇಶ್ ಯಾದವ್ ಗೆದ್ದಿದ್ದರು. ಇಂಥ ಕ್ಷೇತ್ರದಲ್ಲಿ ಸೋತಿದ್ದು ನಿಜಕ್ಕೂ ಆತಂಕಕಾರಿ" ಎಂದು ಮಾಯಾವತಿ ಹೇಳಿದರು.
ಲೋಕಸಭೆ ಚುನಾವಣೆ, ಮತ್ತು ಅದಕ್ಕೂ ಮುನ್ನ ನಡೆದಿದ್ದ ವಿಧಾನಸಭೆ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಂಡಿದ್ದ ಎಸ್ಪಿ, ಬಿಎಸ್ಪಿ ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ನಂತರ ದೋಸ್ತಿ ಕಡಿದುಕೊಳ್ಳುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಎಸ್ಪಿ 5 ಸ್ಥಾನಗಳಲ್ಲಿ ಜಯಗಳಿಸಿದೆ.