ಬಿಜೆಪಿ ಹೇಳಿದ್ದು ಸರಿಯಾಗಿದೆ: ಕಾಂಗ್ರೆಸ್ ವಿರುದ್ಧ ಮಾಯಾವತಿ ವಾಗ್ದಾಳಿ
ಲಕ್ನೋ, ಮಾರ್ಚ್ 27: ದೇಶದ ಬಡವರಿಗೆ ಸಹಾಯಧನ ನೀಡುವ ಕನಿಷ್ಠ ಆದಾಯ ಯೋಜನೆ 'ನ್ಯಾಯ್' ಭರವಸೆ ಕೊಟ್ಟಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಜತೆಗೆ ಬಿಜೆಪಿಯನ್ನೂ ಅವರು ಬಿಟ್ಟಿಲ್ಲ. ಈ ಎರಡೂ ಪಕ್ಷಗಳು ಜನರನ್ನು ವಂಚಿಸುವುದರಲ್ಲಿ ಒಂದೇ ಎಂದು ಅವರು ಟ್ವಿಟ್ಟರ್ನಲ್ಲಿ ಕಿಡಿಕಾರಿದ್ದಾರೆ.
'ಚುನಾವಣೆಗೆ ನಿಲ್ಲಲಾಗದವರಿಗೆಲ್ಲ ಮೋದಿಯನ್ನು ಸೋಲಿಸಬೇಕಿದೆ'
'ಕಾಂಗ್ರೆಸ್ ಪಕ್ಷದ ಗರೀಬಿ ಹಠಾವೋ 2.0 ಕಾರ್ಯಕ್ರಮವನ್ನು ಬಿಜೆಪಿ ಹುಸಿ ಭರವಸೆ ಎಂದು ಕರೆದಿರುವುದು ಸರಿಯಾಗಿದೆ. ಆದರೆ, ಚುನಾವಣಾ ವಂಚನೆಗಳು ಮತ್ತು ಚುನಾವಣಾ ಭರವಸೆಗಳು ಬಿಜೆಪಿಗೆ ಮಾತ್ರ ಸೇರಿದ್ದೇ? ವಾಸ್ತವವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ಪುಕ್ಕದ ಹಕ್ಕಿಗಳು. ಇಬ್ಬರೂ ಬಡವರು, ಕಾರ್ಮಿಕರು, ರೈತರು ಮತ್ತು ಇತರರ ಹಿತಾಸಕ್ತಿಗಳನ್ನು ವಂಚಿಸುವುದರಲ್ಲಿ ಮುಂದಿದ್ದಾರೆ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ದೇಶದ ಶೇ 20ರಷ್ಟು ಕಡು ಬಡ ಕುಟುಂಬಗಳಿಗೆ ತಿಂಗಳಿಗೆ 6,000 ರೂಪಾಯಿಯಂತೆ ವರ್ಷಕ್ಕೆ 72,000 ರೂಪಾಯಿ ನೀಡುವ ಭರವಸೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದರು. ಇದಕ್ಕೆ ಮಾಯಾವತಿಯವರು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
Ruling BJP calling Congress slogan of Garibi Hatao 2.0 as bluff is true. But is poll bluff & reneging of poll promises the sole domain of the BJP?
— Mayawati (@Mayawati) 27 March 2019
In fact BJP & Congress party are both birds of the same feather in betraying the interests of the poor, labourers, farmers & others.
ಇದೊಂದು ಹುಸಿ ಭರವಸೆ ಎಂದು ಲೇವಡಿ ಮಾಡಿರುವ ಬಿಜೆಪಿ, ಕಾಂಗ್ರೆಸ್ ಮತ್ತೆ ಗರೀಬಿ ಹಠಾವೋ ಎಂಬ ಘೋಷಣೆ ಮಾಡಿದೆ. 70 ವರ್ಷಗಳಲ್ಲಿ ದೇಶದ ಬಡತನವನ್ನು ನಿರ್ಮೂಲನೆ ಮಾಡಲು ಪಕ್ಷಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿತ್ತು.