ಬಾಘ್ಪಟ್ನಲ್ಲಿ ಜೈ ಶ್ರೀರಾಮ್ ಪಠಿಸುವಂತೆ ಒತ್ತಾಯಿಸಿ ಮೌಲ್ವಿಗೆ ಥಳಿತ
ಬಾಘ್ಪಟ್ , ಜುಲೈ 15: ಜೈ ಶ್ರೀರಾಮ್ ಮಂತ್ರ ಪಠಿಸಲಿಲ್ಲ ಎನ್ನುವ ಕಾರಣಕ್ಕೆ ಹಲ್ಲೆ ನಡೆಸುತ್ತಿರುವ ಘಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇದೇ ರೀತಿಯ ಘಟನೆ ಉತ್ತರ ಪ್ರದೇಶದ ಬಾಘ್ಪಟ್ನಲ್ಲಿ ನಡೆದಿದ್ದು, ಜೈ ಶ್ರೀರಾಮ್ ಮಂತ್ರ ಪಠಿಸಲಿಲ್ಲ ಎಂದು ಮೌಲ್ವಿಯೊಬ್ಬರ ಮೇಲೆ ಯುವಕರು ಹಲ್ಲೆ ನಡೆಸಿರುವುದು ವರದಿಯಾಗಿದೆ.
ಜೈ ಶ್ರೀರಾಮ್ ಎಂದು ಹೇಳದ ಮುಸ್ಲಿಂ ಯುವಕನಿಗೆ ಪೆಟ್ಟು
ತಮ್ಮ ಮೇಲೆ ಹಲ್ಲೆ ನಡೆಸಿದವರು ಮಾರಕಾಸ್ತ್ರಗಳನ್ನು ಹೊಂದಿದ್ದರು. ನನ್ನ ಜೀವ ಉಳಿಸಿಕೊಳ್ಳುವುದಕ್ಕೆ ಓಡಲು ಪ್ರಾರಂಭಿಸಿದೆ. ಯಾರೂ ನನ್ನ ನೆರವಿಗೆ ಧಾವಿಸಲಿಲ್ಲ ನಂತರ ನನ್ನ ಸ್ನೇಹಿತನಿಗೆ ಕರೆ ಮಾಡಿ ಆತನ ನೆರವಿನಿಂದ ಅಧಿಕಾರಿಗಳ ಸಹಾಯ ಪಡೆದು ಪಾರಾದೆ ಎಂದು ಹೇಳಿದ್ದಾರೆ.
ಮೌಲ್ವಿ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಯುವಕರ ಗುಂಪೊಂದು ಅಡ್ಡಗಟ್ಟಿ ಜೈಶ್ರೀರಾಮ್ ಎಂದು ಹೇಳಲು ಒತ್ತಾಯಿಸಿದರು. ನಿರಾಕರಿಸಿದ ಕಾರಣ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೌಲ್ವಿ ಇಮ್ಲೌರ್ ರೆಹಮಾನ್ ಹೇಳಿದ್ದಾರೆ.
ಇತ್ತೀಚೆಗೆ ಖಾನ್ಪುರದಲ್ಲಿ ಮುಸ್ಲಿಂ ಬಾಲಕನೊಬ್ಬನಿಗೆ ಜೈಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಗುಂಪೊಂದು ಹಲ್ಲೆ ನಡೆಸಿತ್ತು. ಮುಸ್ಲಿಮರ ಸಾಂಪ್ರದಾಯಿಕ ಟೋಪಿಯನ್ನು ತೆಗೆದು ಕೆಟ್ಟದಾಗಿ ವರ್ತಿಸಿದ್ದರು.