ಗಾಜಿಯಾಬಾದ್: ಮೇಲ್ಛಾವಣಿ ಕುಸಿತ, ಹಲವು ಮಂದಿ ಸಾವು
ಲಕ್ನೋ, ಜನವರಿ 03: ಗಾಜಿಯಾಬಾದಿನ ಮುರಾದ್ ನಗರದಲ್ಲಿ ಭಾನುವಾರ ಭಾರಿ ದುರಂತ ಸಂಭವಿಸಿದೆ. ಸ್ಮಶಾನದಲ್ಲಿ ಮೇಲ್ಛಾವಣಿ ಕುಸಿದು 17 ಮಂದಿ ಮೃತಪಟ್ಟಿದ್ದು, 45ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ದಯಾನಂದ್ ಕಾಲೋನಿಯ ನಿವಾಸಿಯಾಗಿದ್ದ ರಾಮ್ ಧನ್ ಅಲಿಯಾಸ್ ದಯಾರಾಮ್ ಎಂಬುವರ ಅಂತ್ಯಕ್ರಿಯೆಗೆ ನೂರಾರು ಮಂದಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸ್ಮಶಾನದಲ್ಲಿದ್ದ ತಂಗುದಾಣದಲ್ಲಿ ಅನೇಕ ಮಂದಿ ನಿಂತಿದ್ದರು. ಈ ತಂಗುದಾಣದ ಮೇಲ್ಛಾವಣಿ ಕುಸಿದಿದ್ದರಿಂದ ಅನೇಕ ಮಂದಿ ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ, ರಕ್ಷಣಾ ಕಾರ್ಯ ಇನ್ನೂ ಸಾಗುತ್ತಿದೆ ಎಂದು ಗಾಜಿಯಾಬಾದ್ (ಗ್ರಾಮೀಣ) ಎಸ್ಪಿ ಐರಾಜ್ ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಸಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿ, ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ರಕ್ಷಣಾ ಕಾರ್ಯ ತೀವ್ರಗೊಳಿಸಿ, ಸಂತ್ರಸ್ತರಿಗೆ ಪರಿಹಾರ ಧನ ನೀಡಬೇಕು ಎಂದು ಸೂಚಿಸಿದ್ದಾರೆ.
मुरादनगर की घटना के संदर्भ में #UPCM श्री @myogiadityanath जी... https://t.co/TBWk5CHjEU
— CM Office, GoUP (@CMOfficeUP) January 3, 2021
ಈ ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ, 38 ಮಂದಿಯನ್ನು ರಕ್ಷಿಸಲಾಗಿದೆ. 45 ಮಂದಿ ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ತೀವ್ರ ತನಿಖೆ ನಡೆಸಲಾಗುವುದು ಹಾಗೂ ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು ಎಂದು ಮೀರತ್ ಜಿಲ್ಲಾಧಿಕಾರಿ ಅನೀತಾ ಸಿ ಮೇಶ್ರಮ್ ಅವರು ಸುದ್ದಿಗಾರರಿಗೆ ತಿಳಿಸಿದರು.