ಮತಕ್ಕಾಗಿ ಮುಸ್ಲೀಮರ 'ಬೆದರಿಸಿದ' ಮೇನಕಾ ಗಾಂಧಿಗೆ ನೊಟೀಸ್
ಲಖನೌ, ಏಪ್ರಿಲ್ 12: ಮತಕ್ಕಾಗಿ ಮುಸ್ಲೀಮರನ್ನು ಬಹಿರಂಗವಾಗಿ 'ಬೆದರಿಸಿದ' ಬಿಜೆಪಿ ಸಚಿವೆ ಮೇನಕಾ ಗಾಂಧಿ ಅವರಿಗೆ ಚುನಾವಣಾ ಆಯೋಗ ನೊಟೀಸ್ ನೀಡಿದೆ.
ಮೇನಕಾ ಗಾಂಧಿ ಅವರು ಚುನಾವಣಾ ಕಣಕ್ಕೆ ಇಳಿಯುತ್ತಿರುವ ಸುಲ್ತಾನಪುರ ಕ್ಷೇತ್ರದಲ್ಲಿ ಇಂದು ಮುಸ್ಲಿಂ ಸಮುದಾಯದ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮೇನಕಾ ಗಾಂಧಿ ಅವರು, 'ಮುಸ್ಲೀಮರು ಮತ ಹಾಕದಿದ್ದರೆ, ನಿಮ್ಮ ಮನವಿಗೆ ಸ್ಪಂದಿಸುವುದಿಲ್ಲ' ಎಂದು ಹೇಳಿದ್ದರು, ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಮೇನಕಾ ಗಾಂಧಿ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು, ಕೂಡಲೆ ಎಚ್ಚೆತ್ತುಕೊಂಡ ಸುಲ್ತಾನ್ಪುರ ಜಿಲ್ಲಾ ಆಡಳಿತ, ಚುನಾವಣಾ ಆಯೋಗದ ಅನುಮತಿ ಮೇರೆಗೆ ಮೇನಕಾ ಗಾಂಧಿ ಅವರು ಷೋಕಾಸ್ ನೊಟೀಸ್ ಜಾರಿ ಮಾಡಿದೆ.
ಮೇನಕಾ ಗಾಂಧಿ ಅವರು, ಘಟನೆಯ ಬಗ್ಗೆ ಹಾಗೂ ತಮ್ಮ ಹೇಳಿಕೆಯ ಬಗ್ಗೆ ಜಿಲ್ಲಾಡಳೀತಕ್ಕೆ ಸ್ಪಷ್ಟೀಕರಣ ನೀಡಬೇಕಿದೆ, ಸ್ಪಷ್ಟೀಕರಣ ಸರಿಬಾರದಿದ್ದಲ್ಲಿ ಮುಂದಿನ ಕ್ರಮವನ್ನು ಜಿಲ್ಲಾಡಳಿತ ತೆಗೆದುಕೊಳ್ಳಬಹುದಾಗಿದೆ.
'ನಾನು ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಖಾಯಂ, ಮುಸ್ಲಿಂರ ಮತಗಳೊಂದಿಗೆ ಗೆಲುವು ಸಾಧಿಸಿದರೆ ಸಂತೋಶ, ಆದರೆ ನೀವು ಮತ ಹಾಕದಿದ್ದಲ್ಲಿ ನನಗೆ ಬೇಸರವಾಗುತ್ತದೆ, ಮುಂದಿನ ದಿನಗಳಲ್ಲಿ ನಿಮ್ಮ ಮನವಿಯನ್ನು ನಾನು ಸ್ವೀಕರಿಸದೇ ಇರಬಹುದು' ಎಂದು ಮೇನಕಾ ಗಾಂಧಿ ಅವರು ಸಭೆಯಲ್ಲಿ ಹೇಳಿದ್ದರು.