ಲಸಿಕೆ ಕೇಂದ್ರದ ಜಗಳದ ಬಳಿಕ ಯುವಕ ಆತ್ಮಹತ್ಯೆ: 5 ಯುಪಿ ಪೊಲೀಸರ ವಿರುದ್ಧ ಪ್ರಕರಣ
ಲಕ್ನೋ, ಜು.27: ಸೋಮವಾರ ಕೋವಿಡ್ ಲಸಿಕೆ ಕೇಂದ್ರದಲ್ಲಿ ಪೊಲೀಸರೊಂದಿಗೆ ಜಗಳವಾಡಿದ ಕೆಲವೇ ಗಂಟೆಗಳ ನಂತರ ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯಲ್ಲಿ 20 ರ ಹರೆಯದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿನ್ನೆಲೆ ಹತ್ತು ಪೊಲೀಸರನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ. ಹಾಗೆಯೇ 10 ಪೊಲೀಸರಲ್ಲಿ ಐವರ ವಿರುದ್ದ "ಆತ್ಮಹತ್ಯೆಗೆ ಪ್ರಚೋದನೆ" ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೋಮವಾರ ರಾತ್ರ ಗ್ರಾಮದ ಬಳಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಈ ಯುವಕನ ಮೃತ ದೇಹ ಪತ್ತೆಯಾಗಿದೆ. ಪಶ್ಚಿಮ ಯುಪಿ ಜಿಲ್ಲೆಯ ವ್ಯಾಕ್ಸಿನೇಷನ್ ಕೇಂದ್ರವೊಂದರಲ್ಲಿ "ಯಾವುದೇ ಕಾರಣವಿಲ್ಲದೆ" ಹಲ್ಲೆ ಮಾಡಿದ ಪೊಲೀಸರು ಆತನನ್ನು ಆತ್ಮಹತ್ಯೆ ಮಾಡಲು ಪ್ರಚೋದಿಸಿದ್ದಾರೆ ಎಂದು ಯುವಕನ ಸಂಬಂಧಿಕರು ಆರೋಪಿಸಿದ್ದಾರೆ.
ಈ ಎರಡು ಲಸಿಕೆ ಪ್ರತಿಕಾಯ ಮಟ್ಟ 2-3 ತಿಂಗಳ ಬಳಿಕ ಇಳಿಕೆ ಸಾಧ್ಯತೆ
ಇನ್ನು ಆ ಪೊಲೀಸರು ಕೋವಿಡ್ ಲಸಿಕೆ ಕೇಂದ್ರದಲ್ಲಿ ಯುವಕನಿಗೆ ಹಲ್ಲೆ ಮಾಡಿದ್ದು ಮಾತ್ರವಲ್ಲದೇ ಯುವಕನ ಮನೆಗೆ ತೆರಳು ಆತನ ತಾಯಿಯನ್ನು ಸಹ ಥಳಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಸೋಮವಾರ ಮಧ್ಯಾಹ್ನ ಬಾಗಪತ್ನ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಮೊಬೈಲ್ ಫೋನ್ನಲ್ಲಿ ಮಾಡಿದ 90 ಸೆಕೆಂಡುಗಳ ವಿಡಿಯೋ ಚಿತ್ರೀಕರಣವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಕನಿಷ್ಠ ಇಬ್ಬರು ಪೊಲೀಸರು ವ್ಯಕ್ತಿಯನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಂಡುಬಂದಿದೆ. ಈ ಸಂದರ್ಭ ಮಧ್ಯಪ್ರವೇಶಿಸಲು ಪ್ರಯತ್ನ ಮಾಡಿದ ವ್ಯಕ್ತಿಯನ್ನು ಪೊಲೀಸರು ದೂಡಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.
ಬಿಜೆಪಿಯನ್ನು ಸೋಲಿಸಲು 'ಮಿಷನ್ ಉತ್ತರ ಪ್ರದೇಶ-ಉತ್ತರಾಖಂಡ' ಪ್ರಾರಂಭ: ಟಿಕಾಯತ್ ಘೋಷಣೆ
ಈ ಕೋವಿಡ್ ಲಸಿಕಾ ಕೇಂದ್ರದಿಂದ ಪೊಲೀಸರಿಂದ ತಪ್ಪಿಸಿಕೊಂಡು ಬಂದ ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾನೆ. ಈ ಬಗ್ಗೆ ದೂರು ನೀಡಿರುವ ತಂದೆ, ''ಕರ್ತವ್ಯದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ನನ್ನ ಮಗನ ಹೆಸರನ್ನು ಕರೆದರು. ಅದರಂತೆ ಆತ ಒಳ ತೆರಳಿದಾಗ ಪೊಲೀಸರು ತಮ್ಮ ಮಗನನ್ನು ಕೋವಿಡ್ ಲಸಿಕಾ ಕೇಂದ್ರದ ಒಳಕ್ಕೆ ಹೋಗಲು ಬಿಟ್ಟಿಲ್ಲ. ಈ ಸಂದರ್ಭ ವಾದ ಪ್ರಾರಂಭವಾಗಿದೆ,'' ಎಂದು ತಿಳಿಸಿದ್ದಾರೆ.
"ಪೊಲೀಸರು ನನ್ನ ಮಗನನ್ನು ತಳ್ಳಿದರು. ಯಾಕೆ ಎಂದು ನನ್ನ ಮಗ ಪ್ರಶ್ನೆ ಮಾಡಿದಾಗ ಪೊಲೀಸರು ಆತನಿಗೆ ಹೊಡೆಯಲು ಪ್ರಾರಂಭಿಸಿದರು. ಬಳಿಕ ಕೋಣೆಗೆ ಎಳೆದೊಯ್ದು, ಅಲ್ಲಿ ಲಾಠಿಗಳಿಂದ ಪೊಲೀಸರು ಹಲ್ಲೆ ಮಾಡಿದ್ದಾರೆ. ನಾವು ಹೇಗಾದರೂ ಮಾಡಿ ಆತನನ್ನು ಅಲ್ಲಿಂದ ಹಿಂದಕ್ಕೆ ಕರೆದುಕೊಂಡು ಬಂದೆವು. ಆದರೆ ಸಂಜೆ ಅನೇಕ ಪೊಲೀಸರು ನನ್ನ ಹಳ್ಳಿಯ ಮನೆಗೆ ಬಂದು ನನ್ನ ಪತ್ನಿಯ ಮೇಲೂ ಹಲ್ಲೆ ನಡೆಸಿದ್ದಾರೆ. ನನ್ನ ಮಗ ತುಂಬಾ ಭಯಭೀತನಾಗಿ ಓಡಿಹೋಗಿದ್ದಾರೆ. ಬಳಿಕ ಆತನ ಮೃತದೇಹ ನಮಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ," ಎಂದು ಮೃತನ ತಂದೆ ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಬಾಗಪತ್ ಪೊಲೀಸ್ ಮುಖ್ಯಸ್ಥ ಅಭಿಷೇಕ್ ಸಿಂಗ್, "ನಾವು ಪ್ರಕರಣ ದಾಖಲಿಸಿದ್ದೇವೆ ಮತ್ತು 10 ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ತೆಗೆದುಹಾಕಿದ್ದೇವೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ಯಾರನ್ನೂ ಬಿಡುವುದಿಲ್ಲ. ಯಾರಾದರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೇವೆ," ಎಂದು ಭರವಸೆ ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)