ಮಹಾಂತ್ ನರೇಂದ್ರ ಆತ್ಮಹತ್ಯೆ ಪ್ರಕರಣ: ಕೊಲೆ ಶಂಕೆ ವ್ಯಕ್ತಪಡಿಸಿದ ಸ್ವಾಮೀಜಿಗಳು
ಲಕ್ನೋ, ಸೆಪ್ಟೆಂಬರ್ 21: ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ಇರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ಡೆತ್ ನೋಟ್ ಲಭಿಸಿದೆ ಎಂದು ತಿಳಿಸಿದ್ದಾರೆ. ಆದರೆ ಈ ನಡುವೆ ಹಲವಾರು ಸ್ವಾಮೀಜಿಗಳು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿಗಳು ಇದು ಆತ್ಮಹತ್ಯೆ ಹೌದೇ ಎಂದು ಶಂಕೆಯನ್ನು ವ್ಯಕ್ತಪಡಿಸಿರುವುದು ಮಾತ್ರವಲ್ಲದೇ, ಡೆತ್ ನೋಟ್ನ ಸತ್ಯಾಸತ್ಯತೆಯನ್ನು ಪ್ರಶ್ನೆ ಮಾಡಿದ್ದಾರೆ. ಪ್ರಯಾಗ್ರಾಜ್ ಪೊಲೀಸ್ ಅಧಿಕಾರಿ ಕೆ ಪಿ ಸಿಂಗ್ ಪ್ರಕಾರ, "ಮಹಾಂತ್ ಗಿರಿ ಅವರನ್ನು ನೇಣು ಬಿಗಿದ ಸ್ಥಿತಿಯಲ್ಲಿ ಮೊದಲು ಶಿಷ್ಯರು ಪತ್ತೆ ಹಚ್ಚಿದ್ದಾರೆ. ಸ್ಥಳದಲ್ಲೇ ಸುಮಾರು 7-8 ಪುಟಗಳ ಡೆತ್ ನೋಟ್ ಪತ್ತೆಯಾಗಿದ್ದು, ಈ ಡೆತ್ ನೋಟ್ನಲ್ಲಿ ಮಹಾಂತ್ ನರೇಂದರ್ ಗಿರಿ ತಾನು ಮಾನಸಿಕ ತೊಂದರೆಗೆ ಒಳಗಾಗಿದ್ದೇನೆ ಎಂದು ಉಲ್ಲೇಖ ಮಾಡಿದ್ದಾರೆ." ಇನ್ನು "ಈ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಕೂಡಾ ಬರೆಯಲಾಗಿದೆ. ಹಾಗೆಯೇ ತನ್ನ ಓರ್ವ ಶಿಷ್ಯನ ವಿಚಾರದಲ್ಲಿ ತಾನು ಬೇಸರಗೊಂಡಿದ್ದೇನೆ," ಎಂದು ಕೂಡಾ ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಡೆತ್ ನೋಟ್ನಲ್ಲಿ ಬರೆದಿದ್ದಾರೆ," ಎಂದು ಪೊಲೀಸ್ ಅಧಿಕಾರಿ ಕೆ ಪಿ ಸಿಂಗ್ ತಿಳಿಸಿದ್ದಾರೆ.
ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಆತ್ಮಹತ್ಯೆ: ಡೆತ್ನೋಟ್ ಪತ್ತೆ
ಪೊಲೀಸರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಈ ಸಾವು ಆತ್ಮಹತ್ಯೆ ಎಂದು ಕಂಡು ಬಂದಿದೆ. ಆದರೆ ಈ ಬಗ್ಗೆ ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪರೀಕ್ಷೆಯ ಬಳಿಕ ಸರಿಯಾದ ಮಾಹಿತಿ ದೊರೆಯಲಿದೆ. "ಅಖಿಲ ಭಾರತೀಯ ಅಖಾಡ ಪರಿಷತ್ತಿನ ಸಮಿತಿಯ ಪದಾಧೀಕಾರಿಗಳು ಎಲ್ಲರೂ ಬಂದ ನಂತರ ಸ್ವಾಮೀಜಿಯ ಅಂತಿಮ ಸಂಸ್ಕಾರ ನಡೆಯಲಿದೆ," ಎಂದು ಪೊಲೀಸ್ ಅಧಿಕಾರಿ ಕೆ ಪಿ ಸಿಂಗ್ ಹೇಳಿದ್ದಾರೆ. ಈ ನಡುವೆ ಹಲವಾರು ಸಂತರು, ಸ್ವಾಮೀಜಿಗಳು, ಧಾರ್ಮಿಕ ಘಟಕಗಳು ಈ ಸಾವನ್ನು ಪ್ರಶ್ನಿಸಿದ್ದಾರೆ. ಹಾಗೆಯೇ ಇದು ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಪೊಲೀಸರು ಹಾಗೂ ಸ್ವಾಮೀಜಿಗಳು ಈ ಸಾವಿನ ಬಗ್ಗೆ ಈವರೆಗೆ ಏನೇನು ಹೇಳಿದ್ದಾರೆ?. ತಿಳಿಯಲು ಮುಂದೆ ಓದಿ.
* ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಸಾವಿಗೂ ಅವರ ಶಿಷ್ಯ ಯೋಗ ಗುರು ಆನಂದ್ ಸಿಂಗ್ ಜೊತೆಗಿನ ವಿವಾದಕ್ಕೂ ಸಬಂಧವಿದೆ ಎಂಬ ಆರೋಪವಿದೆ. ಈ ಹಿನ್ನೆಲೆ ಪೊಲೀಸರು ಈಗಾಗಲೇ ಆನಂದ್ ಸಿಂಗ್ರನ್ನು ಬಂಧನ ಮಾಡಿದ್ದಾರೆ. ಆನಂದ್ ಸಿಂಗ್ ಹೆಸರನ್ನು ಡೆತ್ ನೋಟ್ನಲ್ಲಿ ಉಲ್ಲೇಖವೂ ಮಾಡಲಾಗಿದೆ ಎನ್ನಲಾಗಿದೆ. ಡೆತ್ ನೋಟ್ನಲ್ಲಿ ನರೇಂದ್ರ ಗಿರಿ ಅವರು, ತನಗೆ ಆನಂದ್ ಸಿಂಗ್ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಉಲ್ಲೇಖ ಮಾಡಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.
* ಆದರೆ ಅಖಿಲ ಭಾರತ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ನಂದ ಸರಸ್ವತಿ ಈ ಡೆತ್ ನೋಟ್ನ ಸತ್ಯಾಸತ್ಯತೆಯನ್ನು ಪಶ್ನೆ ಮಾಡಿದ್ದಾರೆ. "ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಸಹಿ ಹಾಕುವುದೇ ಬಹಳ ಕಷ್ಟದಲ್ಲಿ ಹಾಗಿರುವಾಗ ಅವರು ಇಷ್ಟು ಪುಟಗಳ ಪತ್ರವನ್ನು ಹೇಗೆ ಬರೆಯುತ್ತಾರೆ," ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಈ ಸಾವಿನ ಬಗ್ಗೆ ಅನುಮಾನವನ್ನು ಹುಟ್ಟು ಹಾಕಿದ್ದಾರೆ.
'ಆರೋಪಿಯನ್ನು ಉಳಿಸಲಾಗದು': ಮಹಾಂತ್ ನರೇಂದ್ರ ಗಿರಿ ಸಾವಿನ ಬಗ್ಗೆ ಯೋಗಿ ಪ್ರತಿಕ್ರಿಯೆ
* ಮಹಾಂತ್ ನರೇಂದ್ರ ಗಿರಿ ಸಾವಿನ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, "ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು. ಆರೋಪಿಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸಲಾಗುವುದು. ಸರ್ಕಾರ ಈ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ರೀತಿಯ ತನಿಖೆಗೆ ಬೇಕಾದ ಸೌಕರ್ಯ ಒದಗಿಸಲು ಸಿದ್ದವಿದೆ. ಹಾಗೆ ಅಗತ್ಯ ಬಂದಲ್ಲಿ ನಾವು ಈ ಮಹಾಂತ್ ನರೇಂದ್ರ ಗಿರಿ ಸಾವು ಪ್ರಕರಣದಲ್ಲಿ ಸಿಬಿಐ ತನಿಖೆಗೂ ಸಿದ್ದವಿದ್ದೇವೆ. ಅಖಾಡ ಪರಿಷತ್ತಿನ ಬೇಡಿಕೆಯನ್ನು ಸರ್ಕಾರವು ಈಡೇರುಸುತ್ತದೆ," ಎಂದು ಹೇಳಿದ್ದಾರೆ.
* ಮಹಾಂತ್ ನರೇಂದ್ರ ಗಿರಿ ಸಾವು ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಕೂಡಾ ದಾಖಲಾಗಿದೆ.
* ಬಂಧನಕ್ಕೆ ಒಳಗಾದ ಬಳಿಕ ಆನಂದ್ ಗಿರಿ, "ಮಹಾಂತ್ ನರೇಂದ್ರ ಗಿರಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ. ಹಾಗೆಯೇ, "ಸ್ವಾಮೀಜಿಯನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಅಡಗಿದೆ. ಮಠದ ಹಲವಾರು ಮಂದಿ ಇದರಲ್ಲಿ ನಂಟು ಹೊಂದಿರಬಹುದು," ಎಂದು ಆರೋಪ ಮಾಡಿದ್ದಾರೆ.
* ಮಹಾಂತ್ ನರೇಂದ್ರ ಗಿರಿ ಸಾವು ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಸಾಕ್ಷಿಗಳು ಮಹಾಂತ್ ನರೇಂದ್ರ ಗಿರಿ ಅವರ ಮೊಬೈಲ್ ಕರೆ ಮಾಹಿತಿಯ ಮೂಲಕ ಪೊಲೀಸರಿಗೆ ಲಭಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
* ಮಹಾಂತ್ ನರೇಂದ್ರ ಗಿರಿ ಸಾವಿಗೂ 5-6 ಗಂಟೆಗೂ ಮುನ್ನ ಮಾಡಲಾಗಿರುವ ಕರೆಗಳ ಮಾಹಿತಿಯನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಈ ಕರೆಯನ್ನು ಆಧಾರಿಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
* ಮೂಲಗಳ ಪ್ರಕಾರ ಪೊಲೀಸರಿಗೆ ಈ ಸಾವಿಗೆ ಸಂಬಂಧಿಸಿದ ವಿಡಿಯೋ ಕೂಡಾ ಲಭಿಸಿದೆ ಹಾಗೂ ಈ ಬಗ್ಗೆ ಅಧಿಕ ತನಿಖೆ ನಡೆಸಲಾಗುತ್ತಿದೆ.
* "ಸ್ವಾಮೀಜಿ ನೇಣು ಬಿಗಿದು ಕೊಂಡಿದ್ದಾರೆ ಎಂದು ಸಂಜೆ ಸುಮಾರು 5:30 ಗಂಟೆಗೆ ಪೊಲೀಸರಿಗೆ ಕರೆ ಬಂದಿದೆ. ನಾವು ಅಲ್ಲಿಗೆ ಹೋದಾಗ ಗೆಸ್ಟ್ ಹೌಸ್ನಲ್ಲಿ ಸ್ವಾಮೀಜಿ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ," ಎಂದು ಐಜಿಪಿ ತಿಳಿಸಿದ್ದಾರೆ.
* ಮಹಾಂತ್ ನರೇಂದ್ರ ಗಿರಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಪ್ರಯಾಗ್ ರಾಜ್ಗೆ ಭೇಟಿ ನೀಡಿ ಮಹಾಂತ್ ನರೇಂದ್ರ ಗಿರಿಗೆ ಗೌರವ ಅರ್ಪಣೆ ಮಾಡಲಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆ ಮಠದ ಸುತ್ತಲೂ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ. ಜಿಲ್ಲಾಧಿಕಾರಿ, ಐಜಿ, ಎಸ್ಎಸ್ಪಿ ಸೇರಿದಂತೆ ಎಲ್ಲಾ ಉನ್ನತ ಅಧಿಕಾರಿಗಳು ಮಠದಲ್ಲಿ ಇದ್ದಾರೆ.
(ಒನ್ ಇಂಡಿಯಾ ಸುದ್ದಿ)