'ಆರೋಪಿಯನ್ನು ಉಳಿಸಲಾಗದು': ಮಹಾಂತ್ ನರೇಂದ್ರ ಗಿರಿ ಸಾವಿನ ಬಗ್ಗೆ ಯೋಗಿ ಪ್ರತಿಕ್ರಿಯೆ
ನವದೆಹಲಿ, ಸೆಪ್ಟೆಂಬರ್ 21: ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ಇರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದ ಬೆನ್ನಲ್ಲೇ ಅವರ ಶಿಷ್ಯನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ ಡೆತ್ನೋಟ್ ಕೂಡಾ ಪತ್ತೆಯಾಗಿದೆ. ಈ ಡೆತ್ನೋಟ್ನಲ್ಲಿ ತಾನು ಮಾನಸಿಕ ಅಸ್ವಸ್ಥನಾಗಿದ್ದೆ ಎಂದು ಉಲ್ಲೇಖ ಮಾಡಲಾಗಿದೆ.
ಆದರೆ ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಪೊಲೀಸರು ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಶಿಷ್ಯ ಆನಂದ್ ಗಿರಿ ವಿರುದ್ದ ದೂರನ್ನು ದಾಖಲು ಮಾಡಿದ್ದಾರೆ. ಆನಂದ್ ಗಿರಿಯು ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಅವರ ಶಿಷ್ಯನಾಗಿದ್ದು, ಮೇ ತಿಂಗಳಿನವರೆಗೂ ಆಪ್ತ ಸಹಾಯಕನೂ ಆಗಿದ್ದ. ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿದೆ ಎಂದು ಹೇಳಲಾಗಿದೆ. ಹಾಗೆಯೇ ಆನಂದ್ ಗಿರಿಯನ್ನು ಕಳೆದ ಸಂಜೆ ಉತ್ತರಖಂಡ್ನಲ್ಲಿ ಬಂಧನ ಮಾಡಲಾಗಿದೆ. ಆತ ಮಹಾಂತ್ ನರೇಂದ್ರ ಗಿರಿ ಮಹಾರಾಜ್ಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪಗಳು ಕೂಡಾ ಕೇಳಿ ಬಂದಿದೆ.
ಅಖಾಡ ಪರಿಷತ್ ಅಧ್ಯಕ್ಷ ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಆತ್ಮಹತ್ಯೆ: ಡೆತ್ನೋಟ್ ಪತ್ತೆ
ಆನಂದ್ ಗಿರಿ ವಂಚನೆ ಹಾಗೂ ಹಣಕಾಸು ಅವ್ಯವಹಾರ ಮಾಡಿದ್ದಾನೆ ಎಂಬ ಆರೋಪದ ಮೇಲೆ ಮಹಾಂತ್ ನರೇಂದ್ರ ಗಿರಿ ಅವರು ಆನಂದ್ ಗಿರಿಯನ್ನು ಹೊರ ಹಾಕಿದ್ದಾರೆ ಎಂದು ವರದಿ ತಿಳಿಸಿದೆ. ಆದರೆ ಕಳೆದ ಐದು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಆನಂದ್ ಗಿರಿಯು ನರೇಂದ್ರ ಗಿರಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವ ವಿಡಿಯೋ ಕಂಡು ಬಂದಿದೆ. ಈ ಮೂಲಕ ಇಬ್ಬರ ನಡುವೆ ಮಾತುಕತೆ ನಡೆದಿದೆ. ಆದರೆ ಪೊಲೀಸರು ಆನಂದ್ ಗಿರಿಯ ಮೇಲಿ ಅನುಮಾನವನ್ನು ಹೊಂದಿದ್ದಾರೆ.
ಇನ್ನು ನರೇಂದ್ರ ಗಿರಿಯೊಂದಿಗೆ ವಾಸವಾಗಿದ್ದ ಮತ್ತಿಬ್ಬರು ಶಿಷ್ಯರಾದ ಸಂದೀಪ್ ತಿವಾರಿ ಹಾಗೂ ಆದ್ಯ ತಿವಾರಿಯನ್ನು ವಿಚಾರಣೆ ಒಳಪಡಿಸುವ ನಿಟ್ಟಿನಲ್ಲಿ ಪೊಲೀಸರು ಬಂಧನ ಮಾಡಿದ್ದಾರೆ. ಪೊಲೀಸರ ಪ್ರಕಾರ ನರೇಂದ್ರ ಗಿರಿಯ ವಿದ್ಯಾರ್ಥಿಗಳು ಅವರ ಮೃತ ದೇಹವನ್ನು ಮೊದಲು ನೋಡಿದ್ದಾರೆ.
ಸೋಮವಾರ ಮಧ್ಯಾಹ್ನ ಎಂದಿನಂತೆ ನಡೆಯುವ ಸಾಂಪ್ರದಾಯಿಕ ಸಾರ್ವಜನಿಕ ಸಭೆಗೆ ಹಾಜರಾಗಲು ನರೇಂದ್ರ ಗಿರಿ ತನ್ನ ಕೋಣೆಯಿಂದ ಹೊರಗೆ ಬಾರದ ಕಾರಣ, ನರೇಂದ್ರ ಗಿರಿಯ ಕೋಣೆಯ ಬಾಗಿಲನ್ನು ವಿದ್ಯಾರ್ಥಿಗಳು ಬಡ್ಡಿದಿದ್ದಾರೆ. ಆದರೆ ಬಾಗಿಲು ತೆರೆಯಲಿಲ್ಲ, ಕೋಣೆಯ ಒಳಗೆ ಚಿಲಕ ಹಾಕಲಾಗಿತ್ತು. ಈ ಹಿನ್ನೆಲೆ ವಿದ್ಯಾರ್ಥಿಗಳು ಬಾಗಿಲನ್ನು ಒಡೆದು ಒಳಗೆ ಹೋದಾಗ ಮಹಾಂತ್ ನರೇಂದ್ರ ಗಿರಿ ಮಹಾರಾಜ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಇದು ಆತ್ಮಹತ್ಯೆ ಎಂದು ಹೇಳಿದ್ದಾರೆ. ಹಾಗೆಯೇ ಡೆತ್ನೋಟ್ ಲಭಿಸಿದೆ ಎಂದಿದ್ದಾರೆ.
'ಡಬಲ್ ಇಂಜಿನ್ ಸರ್ಕಾರ': ಯೋಗಿ ಸರ್ಕಾರವನ್ನು ಶ್ಲಾಘಿಸಿದ ಮೋದಿ
ಈ ಬಗ್ಗೆ ಮಾತನಾಡಿರುವ ಪ್ರಯಾಗ್ರಾಜ್ ಪೊಲೀಸ್ ಅಧಿಕಾರಿ ಕೆಪಿ ಸಿಂಗ್, "ನಾವು ಡೆತ್ ನೋಟ್ ಅನ್ನು ಓದಿದ್ದೇವೆ. ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಅವರು ತಾನು ಮಾನಸಿಕ ವಾಗಿ ಕುಗ್ಗಿದ್ದೆ ಎಂದು ಪತ್ರದಲ್ಲಿ ಹೇಳಿದ್ದಾರೆ. ಹಾಗೆಯೇ ತನ್ನ ಮರಣದ ನಂತರ ಆಶ್ರಮವನ್ನು ಏನು ಮಾಡಬೇಕು ಎಂಬುವುದನ್ನು ಕೂಡಾ ಬರೆದಿದ್ದಾರೆ. ಈ ಬಗ್ಗೆ ವಿಲ್ ಬರೆದಿದ್ದಾರೆ," ಎಂದು ತಿಳಿಸಿದ್ದಾರೆ.
ಮಹಾಂತ್ ನರೇಂದ್ರ ಗಿರಿ ಮಹಾರಾಜ್ ಗುರೂಜಿ ಸಾವಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿ, "ನರೇಂದ್ರ ಗಿರಿ ಸಾವು ಅತ್ಯಂತ ದುಃಖಕರವಾಗಿದೆ. ಆಧ್ಯಾತ್ಮಿಕ ಸಂಪ್ರದಾಯಗಳಿಗೆ ಸಮರ್ಪಿತರಾಗಿದ್ದಾಗ, ಅವರು ಸಂತ ಸಮಾಜದ ಅನೇಕ ಸ್ಟ್ರೀಮ್ಗಳನ್ನು ಒಟ್ಟಿಗೆ ಸಂಪರ್ಕಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು," ಎಂದಿದ್ದಾರೆ.
ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟ್ವೀಟ್ ಮಾಡಿ, ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷರಾದ ಮಹಂತ್ ನರೇಂದ್ರ ಗಿರಿ ಜಿ ಸಾವು ಆಧ್ಯಾತ್ಮಿಕ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ದುಃಖಿತ ಅನುಯಾಯಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಾನ್ ಶ್ರೀರಾಮನನ್ನು ಪ್ರಾರ್ಥಿಸುತ್ತೇನೆ," ಎಂದು ಹೇಳಿದ್ದಾರೆ. ಹಾಗೆಯೇ ಈ ವಿಚಾರದಲ್ಲಿ ಹಲವಾರು ಸಾಕ್ಷ್ಯಗಳನ್ನು ಪತ್ತೆ ಹಚ್ಚಲಾಗಿದೆ, ಆರೋಪಿಯನ್ನು ನಾವು ಬಿಡುವುದಿಲ್ಲ," ಎಂದು ತಿಳಿಸಿದ್ದಾರೆ.
(ಒನ್ ಇಂಡಿಯಾ ಸುದ್ದಿ)