ಪತ್ರಕರ್ತ ಸಿದ್ದಿಕ್ಕಿ ಕಪ್ಪನ್ ಬಿಡುಗಡೆ ಮಾಡುವಂತೆ ಲಕ್ನೋ ಕೋರ್ಟ್ ಆದೇಶ
ಲಕ್ನೋ, ಸೆಪ್ಟೆಂಬರ್ 13: ಜೈಲಿನಲ್ಲಿರುವ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಬಿಡುಗಡೆ ಮಾಡುವಂತೆ ಲಕ್ನೋ ನ್ಯಾಯಾಲಯ ಆದೇಶ ಹೊರಡಿಸಿದೆ. 2020ರ ಅಕ್ಟೋಬರ್ನಲ್ಲಿ ಉತ್ತರ ಪ್ರದೇಶದ ಹತ್ರಾಸ್ಗೆ ತೆರಳುತ್ತಿದ್ದಾಗ ಬಂಧನವಾಗಿತ್ತು.
ಹತ್ರಾಸ್ ದಲಿತ ಬಾಲಕಿಯೊಬ್ಬರು ಅತ್ಯಾಚಾರಕ್ಕೊಳಗಾದ ನಂತರ ಸಾವನ್ನಪ್ಪಿದ್ದರು. ಅದನ್ನು ವರದಿ ಮಾಡಲು ಹತ್ರಾಸ್ಗೆ ಸಿದ್ದಿಕಿ ಕಪ್ಪನ್ ತೆರಳುತ್ತಿದ್ದಾಗ ಕಪ್ಪನ್ ಅವರನ್ನು ಬಂಧಿಸಲಾಗಿತ್ತು. ಕಪ್ಪನ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ), ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್ಜೆ) ಅನುರೋಧ್ ಮಿಶ್ರಾ ಅವರು ಕಪ್ಪನ್ ಅವರಿಗೆ ತಲಾ 1 ಲಕ್ಷ ರೂ.ಗಳ ಎರಡು ಭದ್ರತೆ ಮತ್ತು ಅದೇ ಮೊತ್ತದ ವೈಯಕ್ತಿಕ ಬಾಂಡ್ ಅನ್ನು ಒದಗಿಸುವಂತೆ ಸೂಚಿಸಿದರು. ನ್ಯಾಯಾಧೀಶರು ಪತ್ರಕರ್ತರಿಂದ ಸುಪ್ರೀಂ ಕೋರ್ಟ್ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಭರವಸೆ ನೀಡಿದರು.
ಕಪ್ಪನ್ ಸೇರಿದಂತೆ ಇತರ ಮೂವರಾದ ಅತಿಕುರ್ ರೆಹಮಾನ್, ಆಲಂ ಮತ್ತು ಮಸೂದ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಅಕ್ಟೋಬರ್ 5, 2020 ರಂದು ಬಂಧಿಸಿದರು. ಸೆಪ್ಟೆಂಬರ್ 14, 2020 ರಂದು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಹದಿನೈದು ದಿನಗಳ ನಂತರ ದಲಿತ ಮಹಿಳೆ ದೆಹಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಅವಳನ್ನು ಮಧ್ಯರಾತ್ರಿಯಲ್ಲಿ ತನ್ನ ಹಳ್ಳಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
ಅಲಹಾಬಾದ್ ಹೈಕೋರ್ಟ್ನಿಂದ ಜಾಮೀನು ಅರ್ಜಿ ವಜಾ
ಪತ್ರಕರ್ತ ಸಿದ್ದಿಕ್ಕಿ ಕಪ್ಪನ್ ಹತ್ರಾಸ್ ಅತ್ಯಾಚಾರ ಪ್ರಕರಣದ ವರದಿ ಮಾಡಲು ತೆರಳುತ್ತಿದ್ದಾಗ ಉತ್ತರ ಪ್ರದೇಶದ ಪೊಲೀಸರು ಅವರನ್ನು ಬಂಧಿಸಿದ್ದರು. ಅವರು ಅದನ್ನು ಪ್ರಶ್ನಿಸಿ ಜಾಮೀನು ಕೋರಿದ್ದರು. ಕಳೆದ ತಿಂಗಳು ಅಲಹಾಬಾದ್ ಹೈಕೋರ್ಟ್ ಅವರಿಗೆ ಜಾಮೀನು ಅರ್ಜಿ ವಜಾಗೊಳಿಸಿತ್ತು. ಅಲಹಾಬಾದ್ ಹೈಕೋರ್ಟ್ನ ಆದೇಶ ಪ್ರಶ್ನಿಸಿ ಸಿದ್ದಿಕ್ ಕಪ್ಪನ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಶುಕ್ರವಾರ ತಾನೇ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು.
ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್
2020ರ ಅಕ್ಟೋಬರ್ನಿಂದಲೂ ಜೈಲುವಾಸ
ಜಾಮೀನು ನೀಡಲು ನಿರಾಕರಿಸಿದ್ದ ಪೊಲೀಸರು ಸಿದ್ದಿಕ್ ಕಪ್ಪನ್ ಪಿಎಫ್ಐ ಜೊತೆಗೆ ನಂಟು ಹೊಂದಿದ್ದಾರೆ. ಹತ್ರಾಸ್ ಸಂತ್ರಸ್ತೆಯನ್ನು ಭೇಟಿಯಾಗಿ ಮತ್ತು ವೈಷಮ್ಯವನ್ನು ಹುಟ್ಟು ಹಾಕಲು ಮುಂದಾಗಿದ್ದ ಕಪ್ಪನ್ ಪಿಎಫ್ಐ/ ಸಿಎಫ್ಐ ನಿಯೋಗದ ಭಾಗವಾಗಿದ್ದರು ಎಂದು ಪೊಲೀಸರು ಅಫಿಡೆವಿಟ್ನಲ್ಲಿ ತಿಳಿಸಿದ್ದರು. ಇದರಿಂದ 2020ರ ಅಕ್ಟೋಬರ್ನಿಂದಲೂ ಸಿದ್ದಿಕ್ ಕಪ್ಪನ್ ಜೈಲಿನಲ್ಲಿದ್ದರು. ಅವರನ್ನು ಬಿಡುಗಡೆ ಮಾಡಬೇಕು ಎಂದು ಹಲವು ರಾಜ್ಯಗಳಲ್ಲಿ ಹೋರಾಟಗಳು ನಡೆದಿದ್ದವು. ಆದರೆ ಅವರ ಜಾಮೀನು ಅರ್ಜಿ ತಿರಸ್ಕಾರವಾಗುತ್ತಲೇ ಇತ್ತು.
ಮಲಯಾಳಂ ಸುದ್ದಿ ಪೊರ್ಟಲ್ನ ವರದಿಗಾರ
2020ರಿಂದ ಬಂಧನದಲ್ಲಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರ ಜಾಮೀನಿನ ಕುರಿತು ಸುಪ್ರೀಂ ಕೋರ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಸಿದ್ದಿಕ್ ಕಪ್ಪನ್, ಮಲಯಾಳಂ ಸುದ್ದಿ ಪೊರ್ಟಲ್ನ ವರದಿಗಾರರಾಗಿದ್ದರು. ಈ ಹಿಂದೆ ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಗಳಿಗೆ ಧನಸಹಾಯ ಮಾಡಿದ ಆರೋಪ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮೇಲಿದೆ. ಹೀಗಾಗಿ ಕಪ್ಪನ್ ಈ ಸಂಘಟನೆ ಭಾಗವಾಗಿದ್ದಾರೆ ಎಂದು ಪೊಲೀಸರು ಆರೋಪ ಮಾಡಿದ್ದರು.
ರಾತ್ರೋರಾತ್ರಿ ಮೃತ ಯುವತಿಯನ್ನು ಸುಟ್ಟುಹಾಕಲಾಗಿತ್ತು
2020 ಸೆಪ್ಟೆಂಬರ್ 14ರಂದು ದಲಿತ ಯುವತಿ ತನ್ನ ತಾಯಿಯೊಂದಿಗೆ ಹೊಲಕ್ಕೆ ಹೋಗಿದ್ದ ವೇಳೆ ಮೇಲ್ಜಾತಿಯ ಯುವಕರು ಆಕೆಯನ್ನು ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದರು. ಅಷ್ಟೇ ಅಲ್ಲದೆ ಆಕೆಯ ನಾಲಿಗೆ ತುಂಡರಿಸಿ, ಬೆನ್ನುಮೂಳೆಯನ್ನು ಮುರಿದು ಗಂಭೀರವಾಗಿ ಗಾಯಗೊಳಿಸಿದ್ದರು. ಘಟನೆ ಬಳಿಕ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಆಕೆ ಬದುಕುಳಿಯಲಿಲ್ಲ. ಆಗ ಯುವತಿ ಮರಣ ಹೊಂದಿದಾಗ ಮಧ್ಯರಾತ್ರಿ ಆಕೆಯ ಮೃತದೇಹವನ್ನು ಸುಟ್ಟುಹಾಕಲಾಗಿತ್ತು. ಪ್ರಕರಣವನ್ನು ಮುಚ್ಚಿ ಹಾಕಲು ಇಡೀ ವ್ಯವಸ್ಥೆ ಪ್ರಯತ್ನಿಸಿದೆ ಎಂಬ ಗಂಭಿರ ಆರೋಪ ಕೇಳಿಬಂದಿದ್ದವು.