'ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ನಮ್ಮದೇ ನೇರ ಸ್ಪರ್ಧೆ, ನಾವೇ ಗೆಲ್ಲೋದು'
ಲಕ್ನೋ, ಮಾರ್ಚ್ 30: 'ಉತ್ತರ ಪ್ರದೇಶದಲ್ಲಿನ ಲೋಕಸಭೆ ಚುನಾವಣೆಯಲ್ಲಿ ಹಣಾಹಣಿ ನೇರವಾಗಿ ನಡೆಯುವುದು ನಮ್ಮ ಪಕ್ಷ ಮತ್ತು ಬಿಜೆಪಿ ನಡುವೆ. ಇದರಲ್ಲಿ ನಾವೇ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತೇವೆ' ಎಂದು ಪ್ರಗತಿಶೀಲ ಸಮಾಜವಾದಿ ಪಕ್ಷದ (ಲೋಹಿಯಾ) ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
'ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ನಾವು ನೇರ ಸ್ಪರ್ಧೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ನಾವೇ ಏಕೈಕ ದೊಡ್ಡ ಪಕ್ಷವಾಗಿ ಗೆಲ್ಲುತ್ತೇವೆ' ಎಂದು ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಹೇಳಿದರು.
ಉತ್ತರ ಪ್ರದೇಶ ರಾಜಕೀಯದಲ್ಲಿ ರೋಚಕ ತಿರುವು: ಬಿಜೆಪಿಗೆ ಲಾಭ?
ಉತ್ತರ ಪ್ರದೇಶದಲ್ಲಿ ಕುಟುಂಬಗಳ ನಡುವಿನ ಸ್ಪರ್ಧೆಯೂ ಜೋರಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸಂಖ್ಯೆಯ ಸೀಟುಗಳನ್ನು ಗೆದ್ದಿತ್ತು. ಈ ಬಾರಿ ಅಲ್ಲಿ ಎಸ್ಪಿ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ಸ್ಪರ್ಧಿಸಿವೆ. ಆದರೆ, ಎಸ್ಪಿಯ ವಿರುದ್ಧ ತಿರುಗಿಬಿದ್ದಿರುವ ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಶಿವಪಾಲ್ ಸಿಂಗ್ ಯಾದವ್, ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.
ಅಲ್ಲದೆ, ಅವರು ತಮ್ಮ ಸೋದರಳಿಯ ಅಕ್ಷಯ ಯಾದವ್ ವಿರುದ್ಧವೇ ಸ್ಪರ್ಧಿಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ರಾಮ್ ಗೋಪಾಲ್ ಯಾದವ್ ಮಗನದ ಅಕ್ಷಯ ಹಾಲಿ ಸಂಸದರಾಗಿದ್ದಾರೆ.
ಉತ್ತರ ಪ್ರದೇಶ ಬಿಜೆಪಿಗೆ ಹಿನ್ನಡೆ, ಹಾಲಿ ಸಂಸದ ಕಾಂಗ್ರೆಸ್ ತೆಕ್ಕೆಗೆ
'ನಾನಿಲ್ಲಿ ಇನ್ನು ಯಾವುದೇ ಸಂಬಂಧವನ್ನು ನೋಡುವುದಿಲ್ಲ. ಜನರ ಬೇಡಿಕೆಗೆ ಅನುಗುಣವಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಬಂದಿದ್ದೇನೆ. ನಾನು ಉತ್ತರ ಪ್ರದೇಶ ಮತ್ತು ಫಿರೋಜಾಬಾದ್ನ ಜನರನ್ನಷ್ಟೇ ನೋಡಬೇಕಿದೆ' ಎಂದಿದ್ದಾರೆ.
ಅನೇಕ ಸಣ್ಣ ಮತ್ತು ಪ್ರಾದೇಶಿಕ ಪಕ್ಷಗಳೊಂದಿಗೆ ತಮ್ಮ ಪಕ್ಷ ಮೈತ್ರಿ ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.