ಯೋಗಿ ಆದಿತ್ಯನಾಥ್ ಬಳಿ ದೂರು ಹೇಳಲು ಬಂದ ಗೂಳಿ!
ಕನೌಜ್, ಏಪ್ರಿಲ್ 26: ಮಹಾಘಟಬಂಧನದಿಂದ ಆಯೋಜಿಸಲಾಗಿದ್ದ ಸಮಾವೇಶಕ್ಕೆ ನುಗ್ಗಿದ ಪುಂಡ ಗೂಳಿಯೊಂದು ಒಂದಷ್ಟು ಕಾಲ ತೀವ್ರ ಆತಂಕ, ಗೊಂದಲ ಸೃಷ್ಟಿಸಿತ್ತು.
ಉತ್ತರ ಪ್ರದೇಶದ ಕನೌಜ್ನಲ್ಲಿ ಎಸ್ಪಿ, ಬಿಎಸ್ಪಿ ಮತ್ತು ಆರ್ಎಲ್ಡಿ ಮೈತ್ರಿಕೂಟದ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ಅಲ್ಲಿಗೆ ನುಗ್ಗಿದ ಗೂಳಿಯೊಂದು ದಾಂದಲೆ ನಡೆಸಿತು. ಅದನ್ನು ನಿಯಂತ್ರಿಸಲು ಹೋದ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತು. ಇದರಿಂದ ಗಾಬರಿಗೊಂದ ಜನರು ಅಡ್ಡಾದಿಡ್ಡಿ ಓಡಲಾರಂಭಿಸಿದರು. ಆದರೆ, ಗೂಳಿಯ ಸುತ್ತಲೇ ಸುತ್ತುಗಟ್ಟುತ್ತಿದ್ದರು.
ಕಾಂಗ್ರೆಸ್ ಪಕ್ಷ ನಮ್ಮನ್ನು ವಂಚಿಸಿದೆ: ಅಖಿಲೇಶ್ ಯಾದವ್ ಆರೋಪ
ಜನಸಾಗರ ಕಂಡು ಬೆದರಿದ ಗೂಳಿ, ರೊಚ್ಚಿಗೆದ್ದು ಇನ್ನಷ್ಟು ಪುಂಡಾಟ ನಡೆಸಿತು. ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟ ಪೊಲೀಸರು, ಆ ಪ್ರದೇಶ ಬಿಟ್ಟು ದೂರ ಹೋಗುವಂತೆ ಸೂಚಿಸಿದರೂ ಜನರು ಕಿವಿಗೊಡಲಿಲ್ಲ. ಕೊನೆಗೆ ಜನರ ಮೇಲೆ ಲಾಠಿ ಚಾರ್ಜ್ ನಡೆಸಿದರು.
ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಎಸ್ಪಿ ನಾಯಕ ಅಖಿಲೇಶ್ ಯಾದವ್, ಆ ಗೂಳಿಯು ತಮ್ಮ ಬಳಿ ದೂರು ಹೇಳಲು ಬಂದಿತ್ತು ಎಂದು ಚಟಾಕಿ ಹಾರಿಸಿದರು.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಸ್ತಿ ವಿವರ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿರುವ ಹೆಲಿಕಾಪ್ಟರ್ ಹರ್ದೋಯಿಯಿಂದ ಬರುತ್ತಿದೆ ಎಂದು ಪುಂಡ ಗೂಳಿ ಅಂದುಕೊಂಡಿತ್ತು ಎಂದು ಅವರು ಲೇವಡಿ ಮಾಡಿದರು.
ಅಖಿಲೇಶ್ ಯಾದವ್ ಅವರು ಮಾಯಾವತಿಯ ಒತ್ತಡಕ್ಕೆ ಬಿದ್ದಿದ್ದಾರೆ!
'ಯಾರಾದರೂ ದೂರಿನೊಂದಿಗೆ ಇಲ್ಲಿಗೆ ಬರುತ್ತಾರೆ ಎಂದು ನಾವು ಭಾವಿಸಿರಲಿಲ್ಲ. ಆದರೆ, ಗೂಳಿಯು ಹರ್ದೋಯಿಯಿಂದ ಹೆಲಿಕಾಪ್ಟರ್ ಬರುತ್ತದೆ ಎಂದು ಭಾವಿಸಿತ್ತು. ಅದು ತನ್ನದೇ ಒಂದಷ್ಟು ದೂರುಗಳೊಂದಿಗೆ ಬಂದಿತ್ತು' ಎಂದು ಅಖಿಲೇಶ್ ತಮಾಷೆ ಮಾಡಿದರು.
ಅಖಿಲೇಶ್, ಮಾಯಾವತಿ ಲೋಕ ಚುನಾವಣೆಗೆ ಸ್ಪರ್ಧಿಸಲ್ಲ, ಏಕೆ ಗೊತ್ತೆ?
'ಇಲ್ಲಿನ ಪೊಲೀಸರಿಗೆ ಮತ್ತು ತನ್ನ ಜೀವಕ್ಕೆ ಎದೆಗುಂದದೆ ಗೂಳಿಯನ್ನು ಧೈರ್ಯದಿಂದ ಎದುರಿಸಿ ಈ ಸಮಾವೇಶವನ್ನು ಸಾಧ್ಯವಾಗಿಸಿದ ಯುವಕನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮೇ 23ರ ಬಳಿಕ ಇದೇ ಮೈದಾನದಲ್ಲಿ ಆ ಧೈರ್ಯಶಾಲಿ ಯುವಕನನ್ನು ಅಭಿನಂದಿಸುತ್ತೇವೆ' ಎಂದರು.