'ನಮೋ-ನಮೋ' ಹೋಗುತ್ತದೆ, 'ಜೈಭೀಮ್' ಮೊಳಗುತ್ತದೆ: ಮಾಯಾವತಿ
ಮಾವ್, ಮೇ 15: ಆಡಳಿತಾರೂಢ ಬಿಜೆಪಿಯನ್ನು ಮತದಾರರು ಅಧಿಕಾರದಿಂದ ಕೆಳಕ್ಕಿಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಮತದಾರರು 'ನಮೋ-ನಮೋ'ಅನ್ನು ಹೊರಕ್ಕೆ ಕಳಿಸುತ್ತಾರೆ ಮತ್ತು 'ಜೈಭೀಮ್'ಗೆ ಮತನೀಡುತ್ತಾರೆ ಎಂದಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಉತ್ತರ ಪ್ರದೇಶದ ಮಾವ್ದಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿದ ಅವರು, ಜನರು ನಮೋ-ನಮೋವನ್ನು (ನರೇಂದ್ರ ಮೋದಿ) ಅಧಿಕಾರದಿಂದ ಕಿತ್ತೊಗೆಯುತ್ತಾರೆ ಮತ್ತು ಜೈ ಭೀಮ್ಅನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.
ಮೋದಿ ಸರ್ಕಾರ 'ಮುಳುಗುತ್ತಿರುವ ಹಡಗು' ಎಂದು ಮಾಯಾವತಿ ಟೀಕೆ
ಬಡತನವನ್ನು ನಿರ್ಮೂಲನೆ ಮಾಡಲು ಕಾಂಗ್ರೆಸ್ನ 'ನ್ಯಾಯ್' ಯೋಜನೆ ಪರಿಹಾರವಾಗಲಾರದು ಎಂದ ಅವರು, ಅಧಿಕಾರಕ್ಕೆ ಬಂದರೆ ತಮ್ಮ ಸರ್ಕಾರವು ಸಮಾಜದ ಅತಿ ಕಡು ಬಡವರಿಗೆ ಸರ್ಕಾರಿ ಹಾಗೂ ಸರ್ಕಾರೇತರ ವಲಯಗಳಲ್ಲಿ ಶಾಶ್ವತ ಉದ್ಯೋಗ ಕೊಡಿಸುವುದಾಗಿ ಹೇಳಿದರು.
'ಬಡವರಿಗೆ ತಿಂಗಳಿಗೆ ಆರು ಸಾವಿರ ರೂಪಾಯಿ ಕೊಡುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿದೆ. ಇದರಿಂದ ಬಡತನ ನಿರ್ಮೂಲನೆ ಆಗುವುದಿಲ್ಲ. ಬಡತನವನ್ನು ನಿರ್ಮೂಲನೆ ಮಾಡಲು ಕಾಂಗ್ರೆಸ್ ಯಾವುದೇ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಮಾಜದ ಅತ್ಯಂತ ಕಡು ಬಡವರಿಗೆ ಕಾಯಂ ಉದ್ಯೋಗ ನೀಡುತ್ತೇವೆ' ಎಂದರು.
ಹೆಂಡತಿ ಬಿಟ್ಟ ಮೋದಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ: ಮಾಯಾವತಿ
'ಬಿಜೆಪಿ, ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಎಲ್ಲವೂ ಸುಳ್ಳ. ಇವೆಲ್ಲವೂ ಮತದಾರರನ್ನು ಓಲೈಸುವ ಪ್ರಯತ್ನಗಳಷ್ಟೇ. ಬಿಜೆಪಿ ನೀಡಿದ 'ಅಚ್ಚೇ ದಿನ್' ಭರವಸೆ ಏನಾಯಿತು ಎನ್ನುವುದು ನಮಗೆಲ್ಲ ತಿಳಿದಿದೆ' ಎಂದು ಟೀಕಿಸಿದರು.