ಮೈತ್ರಿಕೂಟದ ಪ್ರಧಾನಿ ಯಾರು? ಅಮಿತ್ ಶಾ ಮಾಡಿದ ಜೋಕ್ ಇದು
ಲಕ್ನೋ, ಜನವರಿ 30: ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವನ್ನು ಮಣಿಸಲು ಕಾಂಗ್ರೆಸ್ ಸೇರಿದಂತೆ ಅನೇಕ ವಿರೋಧಪಕ್ಷಗಳು ಮಾಡಿಕೊಂಡಿರುವ ಮಹಾಮೈತ್ರಿಕೂಟವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.
'ನಮ್ಮ ನಾಯಕರು ಯಾರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ, ಅವರ (ಎದುರಾಳಿಗಳ) ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದು ಯಾರಿಗೂ ತಿಳಿದಿಲ್ಲ. ಅವರು ಚುನಾವಣೆಯಲ್ಲಿ ಗೆದ್ದರೆ ಏನಾಗುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ:
ಬೆಹೆನ್ಜಿ (ಮಾಯಾವತಿ) ಸೋಮವಾರಕ್ಕೆ ಪ್ರಧಾನಿಯಾಗುತ್ತಾರೆ. ಅಖಿಲೇಶ್ ಯಾದವ್ ಮಂಗಳವಾರಕ್ಕೆ ಪ್ರಧಾನಿಯಾಗುತ್ತಾರೆ. ಬುಧವಾರಕ್ಕೆ ಮಮತಾ ಬ್ಯಾನರ್ಜಿ. ಗುರುವಾರದ ಪ್ರಧಾನಿ ಶರದ್ ಪವಾರ್. ಶುಕ್ರವಾರ ಜೆಡಿಎಸ್ ನಾಯಕ ದೇವೇಗೌಡ ಪ್ರಧಾನಿಯಾದರೆ, ಶನಿವಾರ ಎಂಕೆ ಸ್ಟಾಲಿನ್ ಅವರ ಸರದಿ. ಮತ್ತು ಭಾನುವಾರ ಇಡೀ ದೇಶಕ್ಕೆ ರಜಾ ದಿನ' ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
9 ಪ್ರಧಾನಿ ಅಭ್ಯರ್ಥಿಗಳ ಮಹಾಘಟಬಂಧನ ದುರಾಸೆಯ ಪ್ರತಿರೂಪ: ಶಾ ಕಿಡಿ!
'ಅವರು ದೇಶದ ಅಧಿಕಾರ ಹಿಡಿಯುವುದರ ಬಗ್ಗೆ ಯೋಚಿಸುತ್ತಾರೆ. ಆದರೆ, ಅವರಲ್ಲಿ ನಾಯಕ ಇಲ್ಲ ಮತ್ತು ಅದನ್ನು ನಡೆಸಲು ನೀತಿಯೂ ಇಲ್ಲ ಎಂದು ಟೀಕಿಸಿದ್ದಾರೆ.
ಇಬ್ಬರು ಹುಡುಗರು ಬಂದಿದ್ದರು
ಕಾನ್ಪುರದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ಉತ್ತರ ಪ್ರದೇಶದ ಇಬ್ಬರು ಹುಡುಗರು (ಎಸ್ಪಿ-ಬಿಎಸ್ಪಿ) ವಿಧಾನಸಭೆ ಚುನಾವಣೆಯಲ್ಲಿ ಜೊತೆಗೂಡಿದ್ದರು. ಆದರೆ ಬಿಜೆಪಿ ಕಾರ್ಯಕರ್ತರು ಆ ಮೈತ್ರಿಕೂಟವನ್ನು ಪಕ್ಷಕ್ಕೆ 325 ಸೀಟುಗಳನ್ನು ಗೆಲ್ಲಿಸುವ ಮೂಲಕ ಪುಡಿಗಟ್ಟಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವನ್ನು ಸ್ಥಾಪಿಸಿದ್ದರು' ಎಂದಿದ್ದಾರೆ.
ಅಮಿತ್ ಶಾ ಭಾಷಣದ ಬಳಿಕ ಮಮತಾ-ರಾಜನಾಥ್ ಸಿಂಗ್ ಜಗಳ
ಕ್ರೈಂ-ಕರಪ್ಷನ್-ಕ್ಯಾಸ್ಟ್
ಬಿಎಸ್ಪಿ ಮತ್ತು ಎಸ್ಪಿ ನಡುವಿನ ಮೈತ್ರಿಯನ್ನು 'ಕ್ರೈಂ, ಭ್ರಷ್ಟಾಚಾರ ಮತ್ತು ಜಾತಿ'ಯ ಮೈತ್ರಿ ಎಂದು ವ್ಯಂಗ್ಯವಾಡಿದ್ದಾರೆ.
'ರಾಜ್ಯದಲ್ಲಿ ಯಾವ ಮೈತ್ರಿಯೂ ಇಲ್ಲ. ಇದು ಅಪರಾಧ, ಭ್ರಷ್ಟಾಚಾರ ಮತ್ತು ಜಾತಿಯದು. ತಮ್ಮ ಜಾತಿ ಆಧಾರಿತ ರಾಜಕೀಯದ ಮೂಲಕ ಉತ್ತರ ಪ್ರದೇಶವನ್ನು ಶೋಚನೀಯವನ್ನಾಗಿಸಿದ್ದ ಪಕ್ಷಗಳು ಜೊತೆಯಾಗಿ ಬಂದಿವೆ' ಎಂದಿದ್ದಾರೆ.
ಲೋಕಸಭೆ 2019 : ಉತ್ತರ ಪ್ರದೇಶದ ಚಿತ್ರಣವನ್ನೇ ಬದಲಿಸಿರುವ ಘಟಬಂಧನ
ಶೇ 50ರಷ್ಟು ಮತಕ್ಕೆ ಸಿದ್ಧ
'ಎಸ್ಪಿ ಮತ್ತು ಬಿಎಸ್ಪಿ ಕೈಜೋಡಿಸಿದ್ದಾರೆ. ಇನ್ನೂ ಎರಡು ಪಕ್ಷಗಳು ಅವರ ಜತೆಗೂಡಲಿವೆ. ಯಾರಿಗೆ ಒಂದುಗೂಡಬೇಕು ಎನಿಸುತ್ತದೆಯೋ ಅವರು ಆಗಬಹುದು. ಶೇ 50ರಷ್ಟು ಮತಗಳನ್ನು ಪಡೆದುಕೊಳ್ಳುವ ಸಮರಕ್ಕೆ ಬಿಜೆಪಿ ಸಿದ್ಧವಾಗಿದೆ' ಎಂದು ಹೇಳಿದ್ದಾರೆ.
74 ಕ್ಷೇತ್ರಗಳ ಗುರಿ
2014ರ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಲೋಕಸಭೆ ಕ್ಷೇತ್ರಗಳ ಪೈಕಿ 73ರಲ್ಲಿ ಬಿಜೆಪಿ ಜಯಗಳಿಸಿತ್ತು. ಈ ಬಾರಿ 74 ಕ್ಷೇತ್ರಗಳಲ್ಲಿ ಗೆಲುವು ನಮ್ಮದಾಗಬೇಕು ಎಂದು ಅವರು ಕಾರ್ಯಕರ್ತರಿಗೆ ಗುರಿ ನೀಡಿದ್ದಾರೆ.