ಬಾಬ್ರಿ ಮಸೀದಿ ಧ್ವಂಸ ಕೇಸ್: ಆರೋಪಿಗಳಿಗೆ ಹಾಜರಾತಿಯಿಂದ ವಿನಾಯತಿ?
ಲಕ್ನೋ, ಸೆ. 29: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಸೆಪ್ಟೆಂಬರ್ 30ರಂದು ನೀಡಲು ಲಕ್ನೋದ ಸಿಬಿಐ ಕೋರ್ಟ್ ಮುಂದಾಗಿದೆ. ತೀರ್ಪಿನ ದಿನದಂದು ಪ್ರಮುಖ ಆರೋಪಿಗಳಾದ ಬಿಜೆಪಿಯ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾಭಾರತಿ ಸೇರಿದಂತೆ ಆರೋಪಿಗಳಿಗೆ ಹಾಜರಿರುವಂತೆ ಕೋರ್ಟ್ ಸೂಚಿಸಿದೆ. ಆದರೆ, ಅನೇಕ ಆರೋಪಿಗಳು ಖುದ್ದು ಹಾಜರಾತಿಯಿಂದ ವಿನಾಯತಿ ಕೋರಿ ಮನವಿ ಸಲ್ಲಿಸಿದ್ದಾರೆ.
ಮೂಲಗಳ ಪ್ರಕಾರ ನ್ಯಾಯಾಲಯವು ತೀರ್ಪನ್ನು ಬುಧವಾರದಂದು ಪ್ರಕಟಿಸುವಾಗ ಕೆಲವು ಹಿರಿಯ ಆರೋಪಿಗಳಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಪಡೆಯಬಹುದು ಎಂದು ತಿಳಿದುಬಂದಿದೆ.
ಬಾಬ್ರಿ ಮಸೀದಿ ಧ್ವಂಸ ನಡೆದು 27 ವರ್ಷಗಳು ಕಳೆದಿದೆ. ಉತ್ತರ ಪ್ರದೇಶದ ಅಯೋಧ್ಯಾ ನಗರದಲ್ಲಿ ಹಿಂದೂ ಪರ ಸಂಘಟನೆಗಳು ಅಂದು ನಡೆಸಿದ ಕೃತ್ಯ, ಕರಸೇವಕರ ಪಾಲಿಗೆ ಶೌರ್ಯ ದಿವಸವಾಗಿದ್ದರೆ, ಮುಸ್ಲಿಂ ಸಂಘಟನೆಗಳಿಗೆ ಕಪ್ಪು ದಿನವಾಗಿದೆ. 92 ವರ್ಷ ವಯಸ್ಸಿನ ಅಡ್ವಾಣಿ ಅವರು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.
25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್
ವಿಶೇಷ ಜಡ್ಜ್ ಎಸ್. ಕೆ ಯಾದವ್ ಮುಂದೆ ಅಡ್ವಾಣಿ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ವಿಚಾರಣೆ ಮೂಲಕ ಹಾಜರಾಗಿದ್ದಾರೆ.
ವಿಶೇಷ ಜಡ್ಜ್ ಎಸ್. ಕೆ ಯಾದವ್ ಮುಂದೆ ಅಡ್ವಾಣಿ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ವಿಚಾರಣೆ ಮೂಲಕ ಹಾಜರಾಗಿದ್ದಾರೆ. ಈ ಹಿಂದೆ ಏಪ್ರಿಲ್ 2020ರ ಒಳಗೆ ತೀರ್ಪು ನೀಡಬೇಕು ಎಂದು ಹೇಳಿತ್ತು. ಈಗ ಸೆಪ್ಟೆಂಬರ್ 30ರಂದು ತೀರ್ಪು ನೀಡಲಿದೆ.
ವಕೀಲ ಕೆ.ಕೆ. ಮಿಶ್ರಾ ಹೇಳಿಕೆ
1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಮಾಜಿ ಉಪ ಪ್ರಧಾನಿ ಎಲ್ಕೆ ಅಡ್ವಾಣಿ, ಮಾಜಿ ಕೇಂದ್ರ ಸಚಿವರಾದ ಮುರಳಿ ಮನೋಹರ್ ಜೋಷಿ ಮತ್ತು ಉಮಾ ಭಾರತಿ ಸೇರಿದಂತೆ ಪ್ರಮುಖವಾಗಿ 13 ಮಂದಿ ಆರೋಪಿಗಳಿದ್ದಾರೆ. ಎಲ್ಲಾ 32 ಆರೋಪಿಗಳ ಹೇಳಿಕೆಯನ್ನು ಸಿಆರ್ ಪಿಸಿ ಸೆಕ್ಷನ್ 313 ಅಡಿಯಲ್ಲಿ ಕೋರ್ಟ್ ದಾಖಲಿಸುತ್ತಿದೆ. ವಿಶೇಷ ಜಡ್ಜ್ ಎಸ್. ಕೆ ಯಾದವ್ ಮುಂದೆ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯನ್ನು ಆರೋಪಿಗಳು ಎದುರಿಸಿದರು.
ಈಗ ತೀರ್ಪಿನ ದಿನಾಂಕದಂದು ತಮ್ಮ ವಯಸ್ಸು ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಮುಂದಿಟ್ಟು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲು ನ್ಯಾಯಾಲಯವನ್ನು ಕೋರಬಹುದು ಎಂದು ಅವರ ಪರ ವಕೀಲ ಕೆ.ಕೆ. ಮಿಶ್ರಾ ತಿಳಿಸಿದ್ದಾರೆ. 32 ಆರೋಪಿಗಳ ಪೈಕಿ ಅಡ್ವಾಣಿ, ಜೋಶಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸೇರಿದಂತೆ 25 ಜನರನ್ನು ಕೆಕೆ ಮಿಶ್ರಾ ಅವರು ಪ್ರತಿನಿಧಿಸುತ್ತಿದ್ದಾರೆ.
ಶಿವಸೇನಾ ಮುಖಂಡ ಸತೀಶ್ ಪ್ರಧಾನ್
ಶಿವಸೇನಾ ಮುಖಂಡ ಸತೀಶ್ ಪ್ರಧಾನ್, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಕೂಡಾ ತೀರ್ಪು ಪ್ರಕಟಿಸುವ ದಿನದಂದು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅವರು ತಮಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ನ್ಯಾಯಾಲಯಕ್ಕೆ ಹಾಜರಾಗಲು ಸಿದ್ಧ, ವೈದ್ಯರ ಸಲಹೆ ಮೇರೆಗೆ ಮುನ್ನಡೆಯುತ್ತೇನೆ. ಈ ಬಗ್ಗೆ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತಿಳಿಸಲಾಗುವುದು ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಕೂಡ ಗಾಜಿಯಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿಗೆ ಕೊವಿಡ್ 19ಸೋಂಕು
ಜಸ್ಟೀಸ್ ಆರ್ ಎಫ್ ನಾರಿಮನ್ ನ್ಯಾಯಪೀಠದ ಆದೇಶ
ಎಲ್ ಕೆ ಅಡ್ವಾಣಿ ಸೇರಿದಂತೆ 13 ಜನ ಆರೋಪಿಗಳ ಮೇಲಿನ ಆರೋಪ ಪಟ್ಟಿ ರದ್ದು ಮಾಡದಂತೆ ಸಿಬಿಐ ಕೋರಿದ್ದ ಅರ್ಜಿಗೆ ಪುರಸ್ಕಾರ ಸಿಕ್ಕಿತ್ತು. ಕಲ್ಯಾಣ್ ಸಿಂಗ್ ಹೊರತುಪಡಿಸಿ ಉಳಿದವರ ಮೇಲೆ ವಿಚಾರಣೆ ನಡೆಸಲು ಆದೇಶಿಸಲಾಗಿತ್ತು. ಕಲ್ಯಾಣ್ ಸಿಂಗ್ ನಂತರ ಜಾಮೀನು ಪಡೆದುಕೊಂಡಿದ್ದರು. ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ, ಸಂಸದರಾದ ಬ್ರಿಜ್ ಭೂಷಣ್ ಸಿಂಗ್, ಸಾಕ್ಷಿ ಮಹಾರಾಜ್, ಭೂಷಣ ಸಿಂಗ್, ಆರ್ ಎನ್ ಶ್ರೀವಾಸ್ತವ, ಲಲ್ಲು ಸಿಂಗ್ ಸೇರಿದಂತೆ 32 ಜನರ ವಿರುದ್ಧ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಬಳಸಿ ಮುಕ್ತಾಯಗೊಳಿಸಬಹುದು ಎಂದು ಜಸ್ಟೀಸ್ ಆರ್ ಎಫ್ ನಾರಿಮನ್ ಹಾಗೂ ನ್ಯಾ ಸೂರ್ಯಕಾಂತ್ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
16ನೇ ಶತಮಾನದ ಬಾಬ್ರಿ ಮಸೀದಿ ಕೆಡವಿದ ಪ್ರಕರಣ
1992ರಲ್ಲಿ ಅಯೋಧ್ಯೆಯಲ್ಲಿದ್ದ 16ನೇ ಶತಮಾನದ ಬಾಬ್ರಿ ಮಸೀದಿ ಕೆಡವಿದ ಪ್ರಕರಣದಲ್ಲಿ ಅಡ್ವಾಣಿ, ಮುರಳಿ ಮನೋಹರ ಜೋಶಿ ಇತರ ಹನ್ನೆರಡು ಮಂದಿ ವಿರುದ್ಧದ ಸಂಚು ರೂಪಿಸಿದ ಆರೋಪವನ್ನು ರಾಯ್ ಬರೇಲಿ ಕೋರ್ಟ್ ಕೈಬಿಟ್ಟು, ಖುಲಾಸೆ ಮಾಡಿತ್ತು. 2010ರಲ್ಲಿ ಅಲಹಾಬಾದ್ ಹೈ ಕೋರ್ಟ್ ಕೆಳಹಂತದ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿತ್ತು. ಇದೀಗ ಸಿಬಿಐ ಹೈಕೋರ್ಟ್ ಆದೇಶ ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತ್ತು
ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಗೌಪ್ಯ ಸಭೆಯೊಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ನಡೆದಿತ್ತು.ಈ ಸಭೆಯಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹೀಗೆ ಮಸೀದಿ ಕೆಡವಲು 1990ರಲ್ಲಿ ಅಡ್ವಾಣಿ ಮತ್ತು ಇತರರು ಸಂಚು ರೂಪಿಸಿದ್ದರು ಎಂದು ಸಿಬಿಐ ತನ್ನ ಜಾರ್ಜ್ ಶೀಟ್ ನಲ್ಲಿ ಹೇಳಿದೆ.