ಉ.ಪ್ರ. ಸರ್ಕಾರಕ್ಕೆ ಜನಪ್ರತಿನಿಧಿಗಳಿಂದಲೇ 13 ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿ
ಲಖನೌ, ಅಕ್ಟೋಬರ್ 29: ಉತ್ತರಪ್ರದೇಶದ ಎಲ್ಲ ಮಂತ್ರಿಗಳು, ಸಚಿವರು ಹಾಗೂ ಅಧಿಕಾರಿಗಳ ಅಧಿಕೃತ ಮನೆಗಳಿಗೆ ಪ್ರೀಪೇಯ್ಡ್ ವಿದ್ಯುತ್ ಮೀಟರ್ ಗಳನ್ನು ಅಳವಡಿಸಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧಾರ ಮಾಡಿದೆ. ಉ.ಪ್ರ. ಇಂಧನ ಸಚಿವ ಶ್ರೀಕಾಂತ್ ಶರ್ಮಾ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳು ಹಾಗೂ ವಸತಿಗಳಿಂದ ಹದಿಮೂರು ಸಾವಿರ ಕೋಟಿ ರುಪಾಯಿ ವಿದ್ಯುತ್ ಬಿಲ್ ಬಾಕಿ ಉಳಿದಿದೆ ಎಂದಿದ್ದಾರೆ.
ವಿದ್ಯುತ್ ಸಂಪರ್ಕವೇ ಇಲ್ಲ, ಆದ್ರೂ ಮನೆಗೆ ಬಂತು ಕರೆಂಟ್ ಬಿಲ್!
"ಈ ಎಲ್ಲ ಬಾಕಿಯನ್ನು ವಸೂಲಿ ಮಾಡಬೇಕಿದೆ. ಕಂತುಗಳಲ್ಲಿ ಪಾವತಿ ಮಾಡುವುದಕ್ಕೆ ಅವಕಾಶ ನೀಡಲಿದ್ದೇವೆ. ಈಗಾಗಲೇ ಒಂದು ಲಕ್ಷ ಪ್ರೀಪೇಯ್ಡ್ ವಿದ್ಯುತ್ ಮೀಟರ್ ಗೆ ಆರ್ಡರ್ ನೀಡಿದ್ದೇವೆ. ಅವು ಶೀಘ್ರದಲ್ಲೇ ಬರುತ್ತವೆ. ಸರ್ಕಾರಿ ಕಚೇರಿಗಳು ಹಾಗೂ ವಸತಿಗಳಲ್ಲಿ ಅಳವಡಿಸುತ್ತೇವೆ. ಅದನ್ನು ಮೊದಲಿಗೆ ನಾನಿರುವ ಮನೆಯಲ್ಲಿ ಅಳವಡಿಸುತ್ತೇನೆ" ಎಂದು ಶರ್ಮಾ ಹೇಳಿದ್ದಾರೆ.
ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡವರಲ್ಲಿ ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಪ್ರಮುಖರು. ಅದೇ ರೀತಿ ಸರ್ಕಾರಿ ಕಚೇರಿಗಳಿಂದಲೇ ಹೆಚ್ಚಿನ ಬಾಕಿ ಬರಬೇಕಿದೆ. ಇನ್ನು ವಿದ್ಯುತ್ ಕಳವು ತಡೆಯುವ ಸಲುವಾಗಿ ಎಲ್ಲ ಎಪ್ಪತ್ತೈದು ಜಿಲ್ಲೆಗಳಲ್ಲಿ ಅರವತ್ತೆಂಟು ಪೊಲೀಸ್ ಠಾಣೆ ಸ್ಥಾಪಿಸಲಾಗುವುದು ಎಂದಿದ್ದಾರೆ.
ಇಂಥ ಪೊಲೀಸ್ ಠಾಣೆಗಾಗಿಯೇ ಎರಡು ಸಾವಿರ ಹುದ್ದೆಗಳನ್ನು ರಾಜ್ಯ ಸರ್ಕಾರ ಸೃಷ್ಟಿ ಮಾಡಲಿದೆ. ಅವರ ಸಂಬಳ ಮತ್ತಿತರ ವೆಚ್ಚಗಳನ್ನು ಉತ್ತರಪ್ರದೇಶದ ವಿದ್ಯುತ್ ನಿಗಮವೇ ಬಳಸಲಿದೆ ಎಂದು ಶರ್ಮಾ ಹೇಳಿದ್ದಾರೆ