ಕೊಲೆಯಾದ ವಕೀಲನ ಶವವನ್ನು ನ್ಯಾಯಾಲಯದಲ್ಲಿಟ್ಟು ಪ್ರತಿಭಟನೆ
ಲಕ್ನೋ, ಜನವರಿ 08: ಕೊಲೆಯಾದ ವಕೀಲರೊಬ್ಬರ ಶವವನ್ನು ನ್ಯಾಯಾಲಯದಲ್ಲಿಟ್ಟು ವಕೀಲರು ಪ್ರತಿಭಟನೆ ನಡೆಸಿದ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ.
ಮಂಗಳವಾರ ರಾತ್ರಿ 32 ವರ್ಷದ ವಕೀಲ ಶಶಿರ್ ತ್ರಿಪಾಠಿ ಅವರನ್ನು ಅವರ ಮನೆಯ ಎದುರೇ ಐವರು ಆರೋಪಿಗಳು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿದ್ದರು.
75 ಸಾವಿರ ರೂಪಾಯಿ ಕೊಟ್ಟರೆ ಮದುವೆಗೆ ಹುಡುಗಿ ರೆಡಿ!
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಉತ್ತರ ಪ್ರದೇಶದ ವಕೀಲರು, ತಮ್ಮ ಸಹೋದ್ಯೋಗಿಯ ಶವವನ್ನು ಲಕ್ನೋ ಸಿಟಿ ನ್ಯಾಯಾಲಯದ ಆವರಣದೊಳಗೆ ಕೊಂಡೊಯ್ದು, ಕೋರ್ಟ್ ಹಾಲ್ ಒಳಗೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಕೋರ್ಟ್ ಹಾಲ್ ಒಳಗೆ ಶವವಿಟ್ಟು, 'ಪೊಲೀಸರೇ ಕೊಂದಿದ್ದಾರೆ', 'ಪೊಲೀಸ್ ವ್ಯವಸ್ಥೆಗೆ ಧಿಕ್ಕಾರ' ಎಂದು ಘೊಷಣೆಗಳನ್ನು ಕೂಗಿದ್ದಾರೆ.
ಅಷ್ಟಕ್ಕೇ ಸುಮ್ಮನಾಗದ ವಕೀಲರ ಗುಂಪು ಶವವನ್ನು ಎತ್ತಿಕೊಂಡೆ ರಸ್ತೆಗಳಲ್ಲಿ ನಡೆದು ಪ್ರತಿಭಟನೆ ಮಾಡಿದ್ದಾರೆ. ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಐವರಲ್ಲಿ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನೂ ಸಹ ವಕೀಲನೇ ಎನ್ನಲಾಗುತ್ತಿದೆ.
ಕೊಲೆಯಾದ ವಕೀಲ ಶಶಿರ್ ತ್ರಿಪಾಠಿ, ಗಾಂಜಾ ಮಾರಾಟಗಾರರ ವಿರುದ್ಧ ಕಾನೂನು ಸಮರ ಸಾರಿದ್ದರು, ಆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ, ಅದೇ ಗಾಂಜಾ ಗುಂಪಿನಿಂದಾಗಿಯೇ ಅವರ ಕೊಲೆಯಾಗಿದೆ ಎಂದು ತ್ರಿಪಾಠಿ ಕುಟುಂಬದವರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಹ ಘಟನೆ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.