ಉತ್ತರಪ್ರದೇಶ; ಕೋರ್ಟ್ ಆವರಣದಲ್ಲಿ ವಕೀಲನ ಕೊಲೆ
ಲಕ್ನೋ ಅಕ್ಟೋಬರ್ 18: ಉತ್ತರ ಪ್ರದೇಶದ ಶಹಜಹಾನ್ಪುರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲನನ್ನು ಹತ್ಯೆ ಮಾಡಲಾಗಿದೆ. ನ್ಯಾಯಾಲಯದ ಮೂರನೇ ಮಹಡಿಯಲ್ಲಿ ವಕೀಲರ ಶವ ಪತ್ತೆಯಾಗಿದ್ದು, ಮೃತದೇಹದ ಬಳಿ ನಾಡ ಬಂದೂಕು ಸಹ ಸಿಕ್ಕಿದೆ.
ಈ ಘಟನೆ ನಡೆಯುವ ಮುಂಚೆ ವಕೀಲರು ಯಾರೊಂದಿಗೋ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದ್ದಕ್ಕಿದ್ದಂತೆ ಜೋರಾದ ಶಬ್ದ ಕೇಳಿದೆ. ನ್ಯಾಯಾಲಯದಲ್ಲಿದ್ದವರು ಹೋಗಿ ನೋಡಿದಾಗ ವಕೀಲರು ರಕ್ತದ ಮಡುವಿನಲ್ಲಿ ನೆಲಕ್ಕೆ ಬಿದ್ದಿದ್ದರು.
"ಪ್ರಾಥಮಿಕ ವರದಿಗಳ ಪ್ರಕಾರ ಆ ವ್ಯಕ್ತಿ ಒಬ್ಬನೇ ಇದ್ದಾನೆ ಎಂದು ತೋರುತ್ತದೆ. ಘಟನೆಯ ಸಮಯದಲ್ಲಿ ಆತನ ಸುತ್ತಲೂ ಬೇರೆ ಯಾರೂ ಕಾಣಿಸಲಿಲ್ಲ. ವಿಧಿವಿಜ್ಞಾನ ತಂಡ ಸ್ಥಳ ಪರಿಶೀಲನೆ ನಡೆಸುತ್ತಿದೆ. ಹತ್ಯೆ ಮಾಡಿದವರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ" ಎಂದು ಶಹಜಹಾನ್ಪುರದ ಪೊಲೀಸ್ ಅಧೀಕ್ಷಕ ಎಸ್. ಆನಂದ್ ಹೇಳಿದ್ದಾರೆ.
"ನಮಗೆ ಘಟನೆ ಯಾಕೆ ಆಗಿದೆ ಎಂಬುದರ ಬಗ್ಗೆ ವಿವರಗಳು ತಿಳಿದಿಲ್ಲ. ನಾವು ನ್ಯಾಯಾಲಯದಲ್ಲಿದ್ದೆವು. ಯಾರೋ ಬಂದು ನಮಗೆ ಹೇಳಿದರು. ಒಬ್ಬ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದಾಗ ನಾವು ಸ್ಥಳಕ್ಕೆ ಹೋಗಿ ನೋಡಿದ್ದೇವೆ. ನಾವು ನೋಡಲು ಬಂದಾಗ ವಕೀಲರ ಮೃತ ದೇಹ ಇತ್ತು. ಪಕ್ಕದಲ್ಲಿ ಒಂದು ನಾಡ ಪಿಸ್ತೂಲ್ ಕಂಡು ಬಂದಿದೆ. ಮೃತ ವ್ಯಕ್ತಿ ಈ ಹಿಂದೆ ಬ್ಯಾಂಕಿನಲ್ಲಿ ಉದ್ಯೋಗದಲ್ಲಿದ್ದರು. ಕಳೆದ 4-5 ವರ್ಷಗಳಿಂದ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದರು" ಎಂದು ಸಹ ವಕೀಲರು ಹೇಳಿದರು.